'ಇಬ್ಬನಿ ತಬ್ಬಿದ ಇಳೆಯಲಿ', ಹಾಡುಗಳಿಂದಲೇ ಚಂದನವನದಲ್ಲಿ ಗಮನ ಸೆಳೆದಿರೋ ಚಿತ್ರ. ವಿಹಾನ್, ಅಂಕಿತಾ ಅಮರ್ ಮತ್ತು ಮಯೂರಿ ನಟರಾಜ್ ಅಭಿನಯಿಸಿರುವ ಸುಂದರ ದೃಶ್ಯ ಕಾವ್ಯದ ಟ್ರೇಲರ್ ಇತ್ತೋಚೆಗಷ್ಟೇ ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ. ಕನ್ನಡದ ಬಹುನಿರೀಕ್ಷಿತ ಚಿತ್ರದ ಟ್ರೇಲರ್ಗೆ ಮೆಚ್ಚುಗೆ ಹರಿದು ಬರುತ್ತಿದೆ. ಟ್ರೇಲರ್ ಹಾಗೂ ಹಾಡುಗಳನ್ನು ಮೆಚ್ಚಿಕೊಂಡಿರುವ ಪ್ರೇಕ್ಷಕರು ಚಿತ್ರಮಂದಿರಗಳಿಗೂ ಬಂದು ತಮ್ಮ ಸಿನಿಮಾ ವೀಕ್ಷಿಸಿ ಪ್ರೋತ್ಸಾಹಿಸುತ್ತಾರೆ ಎಂಬ ಭರವಸೆ ಚಿತ್ರತಂಡಕ್ಕಿದೆ. ಟ್ರೇಲರ್ ಬಿಡುಗಡೆಗೂ ಮುನ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ಸ್ಮರಿಸಿದ್ದು ಗಮನ ಸೆಳೆಯಿತು.
ನಿರ್ಮಾಪಕ ರಕ್ಷಿತ್ ಶೆಟ್ಟಿ ಮಾತನಾಡಿ, ''ನಿರ್ದೇಶಕ ಚಂದ್ರಜಿತ್ ಅವರು 9 ವರ್ಷಗಳ ಹಿಂದೆ ಬ್ಲಾಗ್ನಲ್ಲಿ ಮೆಸೇಜ್ ಮಾಡಿದ್ದರು. ಅವರ ಲಿಂಕ್ ಒಪನ್ ಮಾಡಿದೆ. ಬರವಣಿಗೆ ವಿಶೇಷ ಎನಿಸಿತು. ನಂತರ ಚಂದ್ರಜಿತ್ ಅವರು ಭೇಟಿಯಾದರು. ಅವರು ಬರೆದ ಕಥೆ ಸಿನಿಮಾವಾಗಿ ರೂಪಾಂತರವಾಯಿತು. ಕನ್ನಡದಲ್ಲಿ ಈ ಕಥೆಯನ್ನು ಹೋಲುವ ಚಿತ್ರಗಳು ಬಂದಿರಬಹುದು. ಆದರೆ ಈ ರೀತಿಯ ನಿರೂಪಣೆ ಇರುವ ಸಿನಿಮಾ ಬಂದಿಲ್ಲ. ನಾನು ಈಗಾಗಲೇ ಮೂರು ಬಾರಿ ಈ ಚಿತ್ರ ವೀಕ್ಷಿಸಿದ್ದೇನೆ. ಟ್ರೇಲರ್ ಹಾಗೂ ಸಿನಿಮಾ ಎರಡೂ ಬಹಳ ಇಷ್ಟವಾಗಿದೆ. ವಿಹಾನ್ ಹಾಗೂ ಅಂಕಿತಾ ಇಬ್ಬರದ್ದೂ ಕೂಡಾ ಪ್ರಶಸ್ತಿ ಬರುವಂತಹ ಅಭಿನಯ. ಮುಯೂರಿ ಕೆಲವೇ ಸನ್ನಿವೇಶದಲ್ಲಿ ಕಾಣಿಸಿಕೊಂಡರೂ ಎಲ್ಲರ ಗಮನ ಸೆಳೆಯಲಿದ್ದಾರೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಮಾತನಾಡಿ, ನಾನು ಯಾವುದಕ್ಕೂ ಬೇಗ ಕಾಂಪ್ರಮೈಸ್ ಆಗುವುದಿಲ್ಲ. ಆದರೆ ನನ್ನ ತಂಡ ಟ್ರೇಲರ್ ಅನ್ನು ಎರಡೇ ದಿನಗಳಲ್ಲಿ ಸಿದ್ಧ ಮಾಡಿತು. ನನಗೂ ಟ್ರೇಲರ್ ನೋಡಿ ಖುಷಿಯಾಯಿತು. ನಿರ್ಮಾಪಕ ರಕ್ಷಿತ್ ಶೆಟ್ಟಿ ಸೇರಿದಂತೆ ಇಡೀ ತಂಡದ ಸಹಕಾರದಿಂದ ಚಿತ್ರ ಕೂಡಾ ಚೆನ್ನಾಗಿ ಮೂಡಿ ಬಂದಿದೆ. ವಿಹಾನ್, ಅಂಕಿತಾ ಅಮರ್ ಹಾಗೂ ಮಯೂರಿ ಅವರ ಜೊತೆಗೆ ಈ ಚಿತದಲ್ಲಿ ಗೀತಾಂಜಲಿ ಚಿತ್ರದ ಖ್ಯಾತಿಯ ಗಿರಿಜಾ ಶೆಟ್ಟರ್ ಅಭಿನಯಿಸಿದ್ದಾರೆ. 20 ವರ್ಷಗಳ ನಂತರ ಅವರು ಮತ್ತೆ ನಮ್ಮ ಚಿತ್ರದಲ್ಲಿ ನಟಿಸಿದ್ದು, ಬಹಳ ಖುಷಿಯಾಗಿದೆ ಎಂದು ತಿಳಿಸಿದರು.
ನಟ ವಿಹಾನ್ ಮಾತನಾಡಿ, ''ಹಾಡುಗಳು ಎಲ್ಲರಿಗೂ ಇಷ್ಟವಾಗಿದೆ. ಸಿನಿಮಾ ಕೂಡಾ ಇಷ್ಟವಾಗಲಿದೆ. ಸಿನಿಮಾ ವೀಕ್ಷಿಸಿದವರು ಇನ್ನಷ್ಟು ಜನರನ್ನು ಚಿತ್ರಮಂದಿರಕ್ಕೆ ಕರೆತರುತ್ತಾರೆ ಎಂಬ ಭರವಸೆ ಇದೆ. ನಿರ್ದೇಶಕರು ಹೇಳಿದ ಕಥೆ ಆಸಕ್ತಿಕರವಾಗಿತ್ತು. ಪ್ರತಿಭೆ ನೋಡಿ ಆಯ್ಕೆ ಮಾಡಿಕೊಳ್ಳುವಲ್ಲಿ ರಕ್ಷಿತ್ ಶೆಟ್ಟಿ ಕೂಡಾ ಒಬ್ಬರು. ಸಿನಿಮಾಗೆ ಆಯ್ಕೆಯಾದ ಮೇಲೆ ಅವರಿಗೆ ಮೆಸೇಜ್ ಮಾಡಿ ಧನ್ಯವಾದ ತಿಳಿಸಿದ್ದೆ'' ಎಂದರು.