ಕರ್ನಾಟಕ

karnataka

'ಈಗ ಬಂದಾಳೆಂದು, ಮರಳಿ ಜೀವ ತಂದಾಳೆಂದು ಕಾದಿರುವೆ': ಪತಿ ನಾಗರಾಜ್ ಹೃದಯಸ್ಪರ್ಶಿ ಬರಹ - Aparna Husband Nagaraj Post

By ETV Bharat Karnataka Team

Published : Jul 12, 2024, 11:34 AM IST

ಕನ್ನಡದ ಪ್ರಸಿದ್ಧ ನಿರೂಪಕಿ ಅಪರ್ಣಾ ಇನ್ನು ನೆನಪು ಮಾತ್ರ. ಈ ಹಿನ್ನೆಲೆಯಲ್ಲಿ ಪತಿ ನಾಗರಾಜ್​​ ರಾಮಸ್ವಾಮಿ ವತ್ಸಾರೆ ಬರೆದಿರುವ ಹೃದಯಸ್ಪರ್ಶಿ ಬರಹ ಓದುಗರ ಕಣ್ಣಾಲಿಗಳನ್ನು ಒದ್ದೆಯಾಗಿಸಿವೆ.

Anchor Aparna
ಅಪರ್ಣಾ (ETV Bharat)

ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಯಾವುದೂ ಕೂಡಾ ಯಾರ ಹಿಡಿತದಲ್ಲೂ ಇಲ್ಲ. ಆದ್ರೆ ತಮ್ಮವರು ಅಗಲಿದಾಗ ಆಗುವ ನೋವು ಬರೀ ಮಾತಿನಲ್ಲಿ ಹೇಳೋಕಾಗದು.

ಕನ್ನಡ ಚಿತ್ರರಂಗದಲ್ಲೀಗ ಅಂಥದ್ದೇ ಮೌನ ಮನೆಮಾಡಿದೆ. ನಾಡಿನ ಜನಪ್ರಿಯ ನಿರೂಪಕಿ ಅಪರ್ಣಾ ಸಾವನ್ನಪ್ಪಿದ್ದಾರೆ. ಕ್ಯಾನ್ಸರ್​ ಖಾಯಿಲೆಗೆ ತುತ್ತಾಗಿ, ಅದರ ವಿರುದ್ಧ ದಿಟ್ಟತನದಿಂದಲೇ ಹೋರಾಡುತ್ತಿದ್ದ ಅಪರ್ಣಾ, ಬದುಕಿನ ಬಂಡಿ ನಿಲ್ಲಿಸಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಪತಿ ನಾಗರಾಜ್​​ ರಾಮಸ್ವಾಮಿ ವತ್ಸಾರೆ ಅವರು ಬರೆದಿರುವ ಹೃದಯಸ್ಪರ್ಶಿ ಬರಹವೊಂದು ಓದುಗರ ಕಣ್ಣಂಚನ್ನು ತೇವಗೊಳಿಸುತ್ತಿದೆ. ಅವರ ಬರಹದ ಒಂದೊಂದು ಪದವೂ ಭಾವನಾತ್ಮಕವಾಗಿದೆ. ನಾಗರಾಜ್​​ ಫೇಸ್‌ಬುಕ್‌ ಪೋಸ್ಟ್ ಹೀಗಿದೆ.

ಮೊದಲ ಪೋಸ್ಟ್:

''ಬೆಳಗಿಕೊಂಡಿರೆಂದು

ಕಿಡಿ ತಾಕಿಸಿ ಹೊರಟಿತು ಹೆಣ್ಣು

ಚಿತ್ತು ತೆಗೆದು

ಬತ್ತಿಯ ನೆತ್ತಿ ಚೆನ್ನಾಗಿಸಿ

ತಿರುಪಿ ತಿದ್ದಿ

ಇರು

ತುಸುವಿರೆಂದು ಕರೆದರೂ

ನಿಲ್ಲದೆಯೇ

ಬೇರಾವುದೋ ಕರೆಗೆ

ತಣ್ಣಗೆ ಓಗೊಟ್ಟ ಮೇರೆಯಲ್ಲಿ

ಒಂದೇ ಒಂದು

ನಿಮಿಷ

ಬಂದೇನೆಂದು ಕಡೆಗಳಿಗೆ

ಯ ಸೆರಗಿನ ಬೆನ್ನಿನಲ್ಲಿ

ಅಂದು.

ಕಾದಿದ್ದೇನೆ

ಈಗ ಬಂದಾಳೆಂದು

ಆಗ ಬಂದಾಳೆಂದು

ಮರಳಿ

ಜೀವ ತಂದಾಳೆಂದು

ಇದು

ಮೂರನೇ ದಿವಸ

ಇಷ್ಟಾಗಿ

ಬೆಳಗಲಿಟ್ಟ ಕಿರಿಸೊಡರ

ಬೆಳಕು ನಾನು

ಉರಿವುದಷ್ಟೇ ಕೆಲಸ

ಇರುವ ತನಕ.''

ಇದನ್ನೂ ಓದಿ:ಖ್ಯಾತ ನಿರೂಪಕಿ ಅಪರ್ಣಾ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ - Condolences To Aparna

ಮತ್ತೊಂದು ಪೋಸ್ಟ್: ''ನಮಸ್ಕಾರ. ನನ್ನ ವೈಯಕ್ತಿಕ ಬದುಕಿನ ಈ ದುರ್ದೈವದ ಹೊತ್ತಿನಲ್ಲಿ ಅಪರ್ಣೆಯನ್ನು ಸ್ಮರಿಸಿರುವ ಎಲ್ಲರಿಗೂ ಋಣಿ. ಅವಳನ್ನು ಕೊನೆಯ ಸಲ ನೋಡಬಯಸುವವರು ಬೆಳಿಗ್ಗೆ ಏಳರಿಂದ ಹನ್ನೆರಡು ಗಂಟೆಯವರೆಗೆ ಬನಶಂಕರಿ ಎರಡನೇ ಹಂತದ ಸುಚಿತ್ರಾ ಫಿಲ್ಮ್ ಸೊಸೈಟಿಯ ಬಳಿಯಿರುವ ಅವಳಿದ್ದ ಮನೆಗೆ ಬರಬಹುದು. ದಯಮಾಡಿ, ಬರಿಗೈಯಲ್ಲಿ ಬಂದರೆ ಹೆಚ್ಚು ಚೆನ್ನು. ಎರಡು ಮೂರು ತಾಸಿರುವ ಹೂವು-ಹಾರ ಬಾಡಿದಲ್ಲಿ ಇಷ್ಟು ಕಾಲ ಅವಳು ಕಾಪಿಟ್ಟ ನನ್ನ ಮನೆಮನಸ್ಸುಗಳ ಸುತ್ತಲಿನ ಕಸ ಹೆಚ್ಚೀತು. ಊರಿನ ಅಂದಗೆಟ್ಟೀತು. ಪ್ಲಾಸ್ಟಿಕ್ ಪಾಲಿಥೀನುಗಳಂತೂ ಸುತಾರಾಂ ಬೇಡ. ಈ ನಿಟ್ಟಿನಲ್ಲಿ ಕಳಕಳಿಯ ಕೋರಿಕೆ.''

ಇದನ್ನೂ ಓದಿ:ಬಾರದ ಲೋಕಕ್ಕೆ ಪಯಣಿಸಿದ ಅಚ್ಚ ಕನ್ನಡದ ನಿರೂಪಕಿ: ಅಪರ್ಣಾ ಬದುಕಿನ ಫೋಟೋಗಳು - Aparna Photos

ABOUT THE AUTHOR

...view details