ನವದೆಹಲಿ: ಕರ್ನಾಟಕದ ಸಂಸ್ಕೃತಿಯನ್ನು ಸಾರಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ 'ರಂಗವೈಭೋಗ'ಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ದೆಹಲಿಯಲ್ಲಿಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಟರಾದ ಸಾಗರ್ ಪುರಾಣಿಕ್ ಮತ್ತು ಸುನೀಲ್ ಪುರಾಣಿಕ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
'ವೈಭೋಗ' ಕರ್ನಾಟಕದ ಪ್ರಸಿದ್ಧ ದೇಗುಲ ನೃತ್ಯ ಪ್ರಕಾರಗಳನ್ನು ಒಳಗೊಂಡ ಸಾಕ್ಷ್ಯಚಿತ್ರವಾಗಿದೆ. ಈ ಚಿತ್ರವನ್ನು 2022ರಲ್ಲಿ ತಯಾರಿಸಲಾಗಿತ್ತು.
"ಈ ನೃತ್ಯ ಪದ್ಧತಿಯ ಬಗ್ಗೆ ಇಲ್ಲಿಯವರೆಗೆ ಯಾರೂ ಸಿನಿಮಾ ಮಾಡಿಲ್ಲ. ಒಂದು ವೇಳೆ ಇಂಥ ನೃತ್ಯ ಪ್ರಕಾರಕ್ಕೆ ಯಾವುದೇ ಮನ್ನಣೆ ಸಿಗದೇ ಇದ್ದರೆ ಮುಂದಿನ 10-15 ವರ್ಷಗಳಲ್ಲಿ ಇಂಥದ್ದೊಂದು ಪ್ರಕಾರದಲ್ಲಿ ನೃತ್ಯ ಮಾಡುವ ಕಲಾವಿದರೇ ಇಲ್ಲದೆ ಹೋಗಬಹುದು. ಹಾಗಾಗಿ ಈ ಸಂಸ್ಕೃತಿಯನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ನಾನು ಈ ಸಾಕ್ಷ್ಯಚಿತ್ರ ಮಾಡುವ ಮೂಲಕ ಕಿರುಸೇವೆ ಸಲ್ಲಿಸಿದ್ದೇನೆ" ಎಂದು ನಿರ್ದೇಶಕ ಸುನಿಲ್ ಪುರಾಣಿಕ್ ಈ ಹಿಂದೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು.
ಸುನಿಲ್ ಪುರಾಣಿಕ್ ಕನ್ನಡ ಹಿರಿಯ ಕಲಾವಿದರಾಗಿದ್ದು ಚಲನಚಿತ್ರ ಮತ್ತು ಟಿವಿ ಎರಡರಲ್ಲೂ ನಟಿಸಿ ಸೈ ಎನಿಸಿಕೊಂಡವರು.
'ವೈಭೋಗ' ಸಿನಿಮಾ ಮಾಡಲು ವಿಷಯ ಸಿಕ್ಕ ಕುರಿತು ಮಾತನಾಡಿದ್ದ ಅವರು, "ನಾನು ಕಳೆದ 37 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿದ್ದೇನೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಅತ್ಯುತ್ತಮ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದೇನೆ. ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಶುರು ಮಾಡಿದೆ. ನಂತರ ನಟನೆ, ಮುಂದೆ ನಿರ್ದೇಶನ ಹೀಗೆ ಸುಮಾರು 20ಕ್ಕೂ ಹೆಚ್ಚ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ನಾನೊಬ್ಬ ರಾಷ್ಟ್ರೀಯವಾದಿಯಾಗಿದ್ದು, ದೇಶದ ಸಂಸ್ಕೃತಿ ಬಗ್ಗೆ ಸಿನಿಮಾ ಮಾಡುವ ಒಲವು ಹೊಂದಿದ್ದೇನೆ. ನನ್ನ ವಿವಿಧ ಯೋಜನೆಗಳಲ್ಲಿ ಕಲೆ ಮತ್ತು ಸಂಸ್ಕೃತಿಗೆ ಏನನ್ನಾದರೂ ಕೊಡುಗೆ ನೀಡುವ ಹಂಬಲದಲ್ಲಿರುತ್ತದೆ. ಈ ನಿಟ್ಟಿನಲ್ಲಿ ಒಮ್ಮೆ ದೇವಸ್ಥಾನಕ್ಕೆ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದಾಗ ಮೊದಲ ಬಾರಿಗೆ ದೇಗುಲ ನೃತ್ಯವನ್ನು ಕಂಡೆ. ನಂತರ ಈ ಬಗ್ಗೆ ನನ್ನಲ್ಲಿ ವಿಶೇಷ ಆಸಕ್ತಿ ಮೂಡಿ ಸಿನಿಮಾ ಮಾಡಬೇಕೆಂದು ನಿರ್ಧರಿಸಿದೆ. ಇದರ ಬಗ್ಗೆ ಇನ್ನಷ್ಟು ತಿಳಿಯಲು ನೃತ್ಯ ಇತಿಹಾಸಕಾರರಾದ ಕರುಣಾ ವಿಜಯೇಂದ್ರ ಅವರೊಂದಿಗೆ ಕೆಲಸ ಮಾಡಿದೆ. ಇದು ವೈಭೋಗ ಸಾಕ್ಷ್ಯಚಿತ್ರ ಮಾಡಲು ಸಹಕಾರಿಯಾಯಿತು" ಎಂದು ಅವರು ವಿವರಿಸಿದ್ದರು.
ಇದನ್ನೂ ಓದಿ:'ಮಧ್ಯಂತರ' ಕಿರುಚಿತ್ರಕ್ಕೆ ಅತ್ಯುತ್ತಮ ಸಂಕಲನ ರಾಷ್ಟ್ರ ಪ್ರಶಸ್ತಿ