ನವದೆಹಲಿ: "ನಿಮ್ಮ ಒತ್ತಡಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಿ. ಅದನ್ನು ನಿಮ್ಮ ಪೋಷಕರೊಂದಿಗೆ ಮನಬಿಚ್ಚಿ ಮಾತನಾಡಿ" ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ನಡೆಸಿಕೊಟ್ಟ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಾನಸಿಕ ಆರೋಗ್ಯ, ಒತ್ತಡ ನಿರ್ವಹಣೆ, ಪರೀಕ್ಷೆಗಳ ಸಮಯದಲ್ಲಿ ಹೇಗೆ ಶಾಂತವಾಗಿರಬೇಕು ಎಂಬ ಕುರಿತು ದೀಪಿಕಾ ಮಾತನಾಡಿದ್ದಾರೆ.
ಸ್ಪರ್ಧೆ ಮತ್ತು ಹೋಲಿಕೆ ಜೀವನದ ಭಾಗವಾಗಿದೆ. ಸ್ಪರ್ಧೆ ಎಂಬುದು ಕೆಟ್ಟ ವಿಷಯವಲ್ಲ. ಆದರೆ, ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಅರಿವಿರಬೇಕು. ನಮ್ಮ ಬಲದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ನಮ್ಮ ದೌರ್ಬಲ್ಯಗಳ ಮೇಲೆ ಹೆಚ್ಚು ಕೆಲಸ ಮಾಡುವುದರಿಂದ ನಾವು ಬಲಶಾಲಿಯಾಗಬಹುದು ಎಂದು ತಿಳಿಸಿದರು.
ಇದೇ ವೇಳೆ ನಟಿ ಮಾನಸಿಕ ಖಿನ್ನತೆಯ ವಿರುದ್ಧ ತಾವು ಹೋರಾಟ ನಡೆಸಿದ ಬಗೆಯನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ತಮ್ಮ ಬಲದಿಂದ ಸಂತೋಷವಾಗಿರುವುದನ್ನು ಕಲಿಯಬೇಕು. ಒತ್ತಡ ನಿರ್ವಹಣೆಗಾಗಿ ಪರೀಕ್ಷೆಯ ಹಿಂದಿನ ದಿನವೇ ಪೋಷಕರೊಂದಿಗೆ ಮಾತನಾಡಬೇಕು. ನಿಮ್ಮ ಒತ್ತಡಕ್ಕೆ ಕಾರಣವೇನು ಎಂಬುದನ್ನು ತಿಳಿದು ಚರ್ಚಿಸಿ ಎಂದರು.
"ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಜೊತೆಗೆ ನಿದ್ರೆಯೂ ಅಗತ್ಯ. ಇದು ಉಚಿತವಾಗಿ ಸಿಗುವ ಸೂಪರ್ಪವರ್. ವಿದ್ಯಾರ್ಥಿಗಳು ಅಗತ್ಯ ನಿದ್ದೆಯೊಂದಿಗೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು, ತಾಜಾ ಗಾಳಿ ಸೇವಿಸಿ. ಇದು ಸದಾ ನಿಮ್ಮ ಸಹಾಯಕ್ಕೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಓದಿನ ನಡುವೆ ಸಣ್ಣ ವಿರಾಮ ಪಡೆಯಿರಿ. ಒತ್ತಡಕ್ಕೊಳಗಾಗುವುದು ಸಾಮಾನ್ಯ. ಆದರೆ, ಅದನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಬಹಳ ಮುಖ್ಯ. ಪರೀಕ್ಷೆ, ಫಲಿತಾಂಶ ಅಥವಾ ಸಿದ್ಧತೆಯಲ್ಲಿ ಸಮಾಧಾನದಿಂದಿರಿ. ಇದರ ಜೊತೆಗೆ ಉತ್ತಮ ನಿದ್ರೆ ಮಾಡಿ, ಹೈಡ್ರೇಟ್ ಆಗಿರಿ. ವ್ಯಾಯಾಮ, ಧ್ಯಾನವೂ ಪ್ರಮುಖವಾಗಿದೆ" ಎಂದು ತಿಳಿಸಿದರು.
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಈ ಬಾರಿ ಬಾಕ್ಸರ್ ಎಂ.ಸಿ.ಮೇರಿ ಕೋಮ್ ಮತ್ತು ಆಧ್ಯಾತ್ಮಿಕ ನಾಯಕ ಸದ್ಗುರು ಅವರು ಕೂಡ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಇದನ್ನೂ ಓದಿ: JEE ಮೇನ್ಸ್ ಫಲಿತಾಂಶ:100ಕ್ಕೆ 100ರಷ್ಟು ಅಂಕ ಪಡೆದ 14 ವಿದ್ಯಾರ್ಥಿಗಳು: ಕರ್ನಾಟಕದ ಕುಶಾಗ್ರ ಗುಪ್ತಾನೂ ಟಾಪರ್
ಇದನ್ನೂ ಓದಿ: ನಿಮಗೆ ಪರೀಕ್ಷಾ ಒತ್ತಡವೇ?: ಈ 6 ಸ್ಮಾರ್ಟ್ ಸಲಹೆಗಳನ್ನು ಪಾಲಿಸಿ ಸಾಕು ಅಂತಿದ್ದಾರೆ ತಜ್ಞರು