ಹೈದರಾಬಾದ್: ಡಿಜಿಟಲ್ ಯುಗದಲ್ಲಿ ಹಳೆಕಾಲದ ಉದ್ಯಮಗಳಿಂದ ಏನು ಪ್ರಯೋಜನ ಎಂದು ಆಕರ್ಷಕ ವೇತನಗಳಿಗಾಗಿ ನಗರಗಳಿಗೆ ಯುವಜನತೆ ವಲಸೆ ಹೋಗುತ್ತಾರೆ. ಆದರೆ, ಯಾದಗಿರಿ ಭುವನಗಿರಿ ಜಿಲ್ಲೆಯ ಪಿಪಲಪಹಡ್ನ ಪಂತಂಗಿ ಗ್ರಾಮದ ಈ ಮೂವರು ಮಹಾತ್ವಕಾಂಕ್ಷಿ ಯುವಕರು ಸಾಂಪ್ರದಾಯಿಕ ಪದ್ದತಿಯ ಮೂಲಕವೇ ಲಕ್ಷ ಲಕ್ಷ ದುಡಿಯುತ್ತಿದ್ದಾರೆ.
ತಮ್ಮ ಬೇರು ಮರೆತು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗದೇ ಸ್ವಂತ ಊರಿನಲ್ಲಿಯೇ ಉದ್ಯಮ ಮಾಡಿ ಯಶಸ್ಸು ಕಂಡಿದ್ದಾರೆ. ಅವರೇ ಪ್ರವೀಣ್, ರಂಗಯ್ಯ ಮತ್ತು ಚೆಕುರಿ ಬಾಬು. ಪದವಿ ಬಳಿಕ ಮುಂಬೈನಲ್ಲಿ ಕೆಲಸ ಮಾಡಿದ ಇವರಲ್ಲಿ ಕಾರ್ಪೊರೇಟ್ ಉದ್ಯೋಗ ತೊರೆದು ಸ್ವಯಂ ಉದ್ಯೋಗಿಗಳಾಗಬೇಕು ಎಂಬ ಕನಸು ಚಿಗುರೊಡೆಯಿತು.
ಇದಕ್ಕಾಗಿ ಈ ತ್ರಿವಳಿಗಳು ತಮ್ಮೂರಿಗೆ ಬಂದು ಸಾಂಪ್ರದಾಯಿಕ ಪದ್ಧತಿಯಿಂದ ಎಣ್ಣೆ ತಯಾರಿಸುವ ಎತ್ತುಗಳಿಂದ ಚಾಲಿತವಾಗುವ ವುಡನ್ ಕೋಲ್ಡ್ ಪ್ರೆಷರ್ ಅಂದರೆ, ಎಣ್ಣೆ ಗಾಣವನ್ನು ಆರಂಭಿಸಿದರು. ಇದಕ್ಕೂ ಮುನ್ನ ಅವರು ಪಲಮುರು ಜಿಲ್ಲೆಯಲ್ಲಿ ಜಕ್ಲಪಲ್ಲಿ ಅವರ ಮಾರ್ಗದರ್ಶನದ ಮೂಲಕ ಎಣ್ಣೆಗಾಣದಲ್ಲಿ ನೈಪುಣ್ಯತೆ ಪಡೆದರು. ಬಳಿಕ ತಮ್ಮೂರಿಗೆ ಮರಳಿದ ಅವರು ಕೊಯ್ಯಲಗುಡೆಂನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಾಗವನ್ನು ಬಾಡಿಗೆ ಪಡೆದರು. ತಾವು ಕೂಡಿಟ್ಟ ಉಳಿತಾಯದ ಜೊತೆಗೆ ಸಂಬಂಧಿಗಳ ಸಹಾಯದಿಂದ ಎಣ್ಣೆ ಗಾಣದ ಮನೆ ನಿರ್ಮಿಸಿದರು.
ಎತ್ತುಗಳ ಸಹಾಯದಿಂದ ಗಾಣದಲ್ಲಿ ಕಡಲೆಬೀಜ, ತೆಂಗಿನ ಎಣ್ಣೆ, ಎಳ್ಳೆ ಮತ್ತು ಹರಳೆಣ್ಣೆಯನ್ನು ಉತ್ಪಾದಿಸಲು ಆರಂಭಿಸಿದರು. ನಿತ್ಯ 30 ಲೀಟರ್ ಎಣ್ಣೆಯನ್ನು ಉತ್ಪಾದಿಸಿ, ಒಂದೊಂದೇ ಹೆಜ್ಜೆ ಇಡಲು ಆರಂಭಿಸಿದರು. ಅಲ್ಲದೇ ಅವರ ಉದ್ದಿಮೆ ಚೇತರಿಕೆ ಕಂಡು ಮಾಸಿಕ ಒಂದು ಲಕ್ಷ ಆದಾಯವೂ ಬರಲಾರಂಭಿಸಿತು. ಸಾಂಪ್ರದಾಯಿಕ ಎಣ್ಣೆಗಳು ಆರೋಗ್ಯ ಪ್ರಯೋಜನವನ್ನು ಹೊಂದಿವೆ. ನೈಸರ್ಗಿಕ ಉತ್ಪಾದನಾ ಪ್ರಕ್ರಿಯೆ ಸಮೃದ್ಧ ಪೋಷಕಾಂಶದ ಅಂಶವನ್ನು ಹೊಂದಿರುವುದರಿಂದ ಇದರ ಬೇಡಿಕೆಯೂ ಹೆಚ್ಚಾಗುತ್ತಾ ಸಾಗಿತು.