ಕರ್ನಾಟಕ

karnataka

ETV Bharat / bharat

'ಅವರೇನು ಸ್ವಾತಂತ್ರ ಹೋರಾಟಗಾರರಾ? ಅವರಿಗೇಕೆ 10 ಲಕ್ಷ ರೂಪಾಯಿ ಹರಿಹಾರ?'! - Kallakurichi Hooch Tragedy

ಕಲ್ಲಕುರಿಚಿ ಕಳ್ಳಭಟ್ಟಿ ದುರಂತದಲ್ಲಿ ಮಡಿದವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡುವ ತಮಿಳುನಾಡು ಸರ್ಕಾರದ ಕ್ರಮ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್​ನಲ್ಲಿ ಪಿಐಎಲ್​ ಸಲ್ಲಿಕೆಯಾಗಿದೆ.

By PTI

Published : Jul 5, 2024, 1:02 PM IST

ಲಿಕ್ಕರ್ (ಸಾಂದರ್ಭಿಕ ಚಿತ್ರ)
ಮದ್ಯ (ಸಾಂದರ್ಭಿಕ ಚಿತ್ರ) (IANS)

ಚೆನ್ನೈ: ಕಲ್ಲಕುರಿಚಿ ಕಳ್ಳಭಟ್ಟಿ ದುರಂತದಲ್ಲಿ ಮಡಿದವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡುವ ತಮಿಳುನಾಡು ಸರ್ಕಾರದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಮೊಹಮ್ಮದ್ ಗೌಸ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆರ್.ಮಹಾದೇವನ್ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ಶಫೀಕ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಪರಿಹಾರದ ಮೊತ್ತ ದೊಡ್ಡ ಮಟ್ಟದದಲ್ಲಿದೆ ಎಂದು ಮೌಖಿಕವಾಗಿ ಹೇಳಿ, ಮುಂದಿನ ವಿಚಾರಣೆಯನ್ನು ಎರಡು ವಾರಗಳ ನಂತರ ಮುಂದೂಡಿದೆ.

"ಕಳ್ಳಭಟ್ಟಿ ಸೇವಿಸಿ ಸತ್ತವರು ಸ್ವಾತಂತ್ರ್ಯ ಹೋರಾಟಗಾರರು ಅಥವಾ ಸಾಮಾಜಿಕ ಕಾರ್ಯಕರ್ತರಲ್ಲ. ಅವರಾರೂ ಸಾರ್ವಜನಿಕರ ಒಳಿತಿಗಾಗಿ ಅಥವಾ ಸಮಾಜದ ಸಲುವಾಗಿ ಪ್ರಾಣ ಕಳೆದುಕೊಂಡಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಅವರು ಕಳ್ಳಭಟ್ಟಿಯನ್ನು ಸೇವಿಸುವ ಮೂಲಕ ಕಾನೂನುಬಾಹಿರ ಕೃತ್ಯ ಎಸಗಿದ್ದಾರೆ" ಎಂದು ಗೌಸ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

"ಕಳ್ಳಭಟ್ಟಿ ಸೇವನೆಯೇ ಕಾನೂನು ಬಾಹಿರ ಕೃತ್ಯ. ಹೀಗಾಗಿ ಕಾನೂನು ಬಾಹಿರವಾಗಿ ಅಂಥ ಮದ್ಯ ಸೇವಿಸಿ ಮೃತಪಟ್ಟವರ ಬಗ್ಗೆ ರಾಜ್ಯ ಸರ್ಕಾರವು ಕರುಣೆ ತೋರಿಸುವ ಅಗತ್ಯವಿಲ್ಲ" ಎಂದು ಗೌಸ್ ಅರ್ಜಿಯಲ್ಲಿ ಹೇಳಿದ್ದಾರೆ.

"ಅಪಘಾತಕ್ಕೊಳಗಾದವರಿಗೆ ಮಾತ್ರ ಮಾನವೀಯ ಪರಿಹಾರ ನೀಡಬೇಕೇ ಹೊರತು ತಮ್ಮ ಸ್ವಂತ ಸಂತೋಷಕ್ಕಾಗಿ ಕಾನೂನುಬಾಹಿರ ಕೃತ್ಯ ಎಸಗಿದವರಿಗೆ ನೀಡಬಾರದು" ಎಂದು ಅವರು ಹೇಳಿದ್ದಾರೆ. "ಕಳ್ಳಭಟ್ಟಿ ದುರಂತದ ಎಲ್ಲಾ ಸಂತ್ರಸ್ತರಿಗೆ ಪರಿಹಾರ ನೀಡುವ ಆದೇಶವು ಅಸಮಂಜಸ ಮತ್ತು ಬೇಕಾಬಿಟ್ಟಿ ನಿರ್ಧಾರವಾಗಿದೆ. ಅಕ್ರಮ ಮದ್ಯ ಸೇವಿಸುವವರನ್ನು ಸಂತ್ರಸ್ತರೆಂದು ಪರಿಗಣಿಸಬಾರದು ಮತ್ತು ಅವರಿಗೆ ಯಾವುದೇ ಪರಿಹಾರ ನೀಡಬಾರದು" ಎಂದು ಗೌಸ್ ತಮ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

"ಬೆಂಕಿ ಅಥವಾ ಇತರ ಯಾವುದೇ ಅಪಘಾತಗಳ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಕಡಿಮೆ ಪರಿಹಾರ ನೀಡುತ್ತಿದೆ. ಆದರೆ ಅದೇ ಸಮಯದಲ್ಲಿ ಕಳ್ಳಭಟ್ಟಿ ದುರಂತ ಸಂತ್ರಸ್ತರಿಗೆ ಯಾವ ಆಧಾರದ ಮೇಲೆ ಸರ್ಕಾರ ಇಷ್ಟೊಂದು ದೊಡ್ಡ ಮೊತ್ತದ ಪರಿಹಾರ ನೀಡುತ್ತಿದೆ" ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಪುದುಚೇರಿಯ ಜವಾಹರಲಾಲ್ ಇನ್ ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ಜಿಪ್ಮರ್) ಸೆಂಟರ್ ಆಸ್ಪತ್ರೆಯಲ್ಲಿ ಮತ್ತೋರ್ವನ ಸಾವಿನೊಂದಿಗೆ ಜೂನ್ 28ರಂದು ನಡೆದ ಕಲ್ಲಕುರಿಚಿ ಕಳ್ಳಭಟ್ಟಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 65ಕ್ಕೆ ಏರಿದೆ. ಸರ್ಕಾರಿ ಕಲ್ಲಕುರಿಚಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈವರೆಗೆ 32 ಜನರು ಸಾವನ್ನಪ್ಪಿದ್ದಾರೆ. ಸೇಲಂನ ಸರ್ಕಾರಿ ಮೋಹನ್ ಕುಮಾರಮಂಗಲಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 22, ಸರ್ಕಾರಿ ವಿಲ್ಲುಪುರಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಾಲ್ವರು ಮತ್ತು ಪುದುಚೇರಿಯ ಜಿಪ್ಮರ್​ನಲ್ಲಿ ಏಳು ಜನ ಮೃತ ಪಟ್ಟಿದ್ದಾರೆ. ಮೃತರಲ್ಲಿ 59 ಪುರುಷರು ಮತ್ತು 6 ಮಹಿಳೆಯರು ಸೇರಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು : ಅಕ್ರಮ ಕಳ್ಳ ಭಟ್ಟಿ ಸಾರಾಯಿ ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು

ABOUT THE AUTHOR

...view details