ಚಂಡೀಗಢ(ಪಂಜಾಬ್):ಅಮೆರಿಕದಲ್ಲಿ ಅಕ್ರಮವಾಗಿ ವಾಸವಾಗಿರುವ ಭಾರತೀಯರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಸಾಗಿದ್ದು, ಶನಿವಾರ ರಾತ್ರಿ 116 ಮಂದಿಯ ಎರಡನೇ ತಂಡ ಭಾರತಕ್ಕೆ ವಾಪಸ್ ಬಂದಿದೆ. ಈ ವೇಳೆ ಅವರಿಗೆಲ್ಲಾ ಕೈಕೋಳ, ಸಂಕೋಲೆ ಹಾಕಿತ್ತೇ ಎಂಬ ಬಗ್ಗೆ ಅನುಮಾನವಿತ್ತು.
ಗಡೀಪಾರಾಗಿ ಭಾರತಕ್ಕೆ ಬಂದಿರುವ ಎರಡನೇ ತಂಡದಲ್ಲಿದ್ದ ದಲ್ಜಿತ್ ಸಿಂಗ್ ಎಂಬಾತ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, "ತಮ್ಮನ್ನು ಅಮೆರಿಕದಿಂದ ಭಾರತಕ್ಕೆ ಕರೆತರುವ ವೇಳೆ ಕೈ,ಕಾಲುಗಳಿಗೆ ಸಂಕೋಲೆಯಿಂದ ಬಿಗಿಯಲಾಗಿತ್ತು. ಬಂಧಿತರಂತೆ ನಮ್ಮನ್ನು ಕರೆದುಕೊಂಡು ಬಂದರು" ಎಂದು ತಿಳಿಸಿದ್ದಾರೆ.
ಪಂಜಾಬ್ನ ಹೋಶಿಯಾರ್ಪುರ ಜಿಲ್ಲೆಯ ಕುರಾಲಾ ಕಲಾನ್ ಗ್ರಾಮದ ನಿವಾಸಿಯಾಗಿರುವ ದಲ್ಜಿತ್ ಸಿಂಗ್, "ನಮ್ಮನ್ನು ಅಕ್ರಮ ನಿವಾಸಿಗಳು ಎಂದು ಗುರುತಿಸಿದ ಅಮೆರಿಕದ ಅಧಿಕಾರಿಗಳು ಬಂಧಿಸಿದರು. ಬಳಿಕ ನಮ್ಮ ಕೈಗಳಿಗೆ ಕೋಳ, ಕಾಲುಗಳಿಗೆ ಸಂಕೋಲೆ ಬಿಗಿದು ವಿಮಾನದಲ್ಲಿ ಕರೆತಂದರು" ಎಂದಿದ್ದಾರೆ.
ಏಜೆಂಟರ ಮೋಸಕ್ಕೆ ಬಲಿ:"ಏಜೆಂಟರ ಮೋಸದಾಟಕ್ಕೆ ಬಲಿಯಾಗಿ ಅಕ್ರಮವಾಗಿ ಅಮೆರಿಕಕ್ಕೆ ತೆರಳಿದ್ದೆ. ಕಾನೂನುಬದ್ಧ ಪ್ರಯಾಣದ ಭರವಸೆ ನೀಡಿದ್ದ ಏಜೆಂಟ್ ಬಳಿಕ, ತಮ್ಮನ್ನು ಅನ್ಯಮಾರ್ಗದ ಮೂಲಕ ಕರೆದೊಯ್ದರು. ಇದು ನ್ಯಾಯಸಮ್ಮತ ಪ್ರಯಾಣದ ಅನುಮಾನ ಹುಟ್ಟುಹಾಕಿತು" ಎಂದು ಹೇಳಿದ್ದಾರೆ.
ಶನಿವಾರ ರಾತ್ರಿ 11.35ರ ಸುಮಾರಿಗೆ 116 ಜನರ ಹೊತ್ತ ಅಮೆರಿಕದ ಸಿ-17 ವಿಮಾನವು ಅಮೃತಸರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಅಮೆರಿಕದಿಂದ ಗಡೀಪಾರಾದ ಭಾರತೀಯರ ಎರಡನೇ ತಂಡ ಇದಾಗಿದೆ. ಹರಿಯಾಣ ಮತ್ತು ಪಂಜಾಬ್ ಸರ್ಕಾರಗಳು ತಮ್ಮ ರಾಜ್ಯದ ವಲಸಿಗರನ್ನು ಕರೆದೊಯ್ಯಲು ಸಾರಿ ವ್ಯವಸ್ಥೆ ಮಾಡಿದ್ದವು.
ಮತ್ತೆ ಅವಮಾನಿಸಿತೇ ಅಮೆರಿಕ?:ಫೆಬ್ರವರಿ 5ರಂದು 104 ಭಾರತೀಯರನ್ನು ಅಕ್ರಮ ನಿವಾಸಿಗಳು ಎಂದು ಗಡೀಪಾರು ಮಾಡಿ ವಾಪಸ್ ಕರೆತರಲಾಗಿತ್ತು. ಈ ವೇಳೆ ಎಲ್ಲರಿಗೆ ಕೈಕೋಳ, ಸಂಕೋಲೆಗಳನ್ನು ಬಿಗಿಯಲಾಗಿತ್ತು. ಇದರ ವಿಡಿಯೋವನ್ನು ಅಮೆರಿಕನ್ ಅಧಿಕಾರಿಗಳು ಹಂಚಿಕೊಂಡಿದ್ದರು.
ಈ ಕ್ರಮಕ್ಕೆ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅಮಾನವೀಯವಾಗಿ ನಡೆದುಕೊಂಡಿದ್ದರ ಬಗ್ಗೆ ಭಾರತ ಸರ್ಕಾರವೂ ಚಕಾರ ಎತ್ತಿತ್ತು. ಈ ಬಗ್ಗೆ ಅಮೆರಿಕದ ಜೊತೆ ಮಾತನಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. ಅಕ್ರಮ ನಿವಾಸಿಗಳಾದಲ್ಲಿ ಅವರನ್ನು ಭಾರತಕ್ಕೆ ಸಹಜವಾಗಿ ವಾಪಸ್ ಕಳುಹಿಸಿಕೊಡಿ ಎಂದು ಭಾರತ ಸೂಚಿಸಿತ್ತು. ಆದಾಗ್ಯೂ, ಗಡೀಪಾರಾದ ಎರಡನೇ ತಂಡದಲ್ಲಿನ ಭಾರತೀಯರಿಗೆ ಕೈಕೋಳ, ಸಂಕೋಲೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:ಅಮೃತಸರಕ್ಕೆ ಬಂದಿಳಿದ ಅಮೆರಿಕದಿಂದ ಗಡೀಪಾರಾದ 116 ಜನರ ಎರಡನೇ ತಂಡ
ಗಡಿಪಾರಾದ ಭಾರತೀಯರಿಗೆ ಕೈಕೋಳ, ಸಂಕೋಲೆ ಬಿಗಿದ ಅಮೆರಿಕ : ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದೇನು?