ಕರ್ನಾಟಕ

karnataka

ಮದುವೆಯಾದ ಸಂಪ್ರದಾಯದಂತೆ ವಿಚ್ಛೇದನ, ಪರಿಶಿಷ್ಟ ಪಂಗಡಗಳಿಗೂ ಹಿಂದೂ ವಿವಾಹ ಕಾಯ್ದೆ ಅನ್ವಯ: ತೆಲಂಗಾಣ ಹೈಕೋರ್ಟ್ - High Court on Hindu Marriage Act

By ETV Bharat Karnataka Team

Published : May 29, 2024, 5:42 PM IST

Updated : May 29, 2024, 10:34 PM IST

ಹಿಂದೂ ವಿವಾಹ ಕಾಯ್ದೆಯನ್ನು ಪರಿಶಿಷ್ಟ ಪಂಗಡಗಳಿಗೂ ಅನ್ವಯಿಸಬಹುದು ಎಂದು ಹೇಳಿರುವ ತೆಲಂಗಾಣ ಹೈಕೋರ್ಟ್, ಲಂಬಾಣಿ ದಂಪತಿಗೆ ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನಕ್ಕೆ ಆದೇಶಿಸಿದೆ.

Telangana High Court
ತೆಲಂಗಾಣ ಹೈಕೋರ್ಟ್ (ETV Bharat)

ಹೈದರಾಬಾದ್ (ತೆಲಂಗಾಣ): ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದ ಎಸ್‌ಟಿ (ಲಂಬಾಣಿ) ದಂಪತಿಗೆ ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ನೀಡಬಹುದು ಎಂದು ತೆಲಂಗಾಣ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಏಕೆಂದರೆ, ಮದುವೆಯು ಹಿಂದೂ ಸಂಪ್ರದಾಯದ ಪ್ರಕಾರವಾಗಿ ಜರುಗಿದೆ ಎಂದು ಉಚ್ಛ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಮೈಲಾರಂ ತಾಂಡಾದ ಎಸ್‌ಟಿ ದಂಪತಿ 2019ರ ಮೇನಲ್ಲಿ ವಿವಾಹವಾಗಿದ್ದರು. ಇದಾದ ಒಂದೇ ವರ್ಷದಲ್ಲಿ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಅಂತೆಯೇ, ಹಿರಿಯರ ಸಮ್ಮುಖದಲ್ಲಿ ಒಪ್ಪಂದ ಮಾಡಿಕೊಂಡು 2023ರಲ್ಲಿ ದಂಪತಿ ದೂರಾಗಿದ್ದರು. ಪತ್ನಿಗೆ ಪತಿ 9 ಲಕ್ಷ ರೂ.ಗಳನ್ನು ನೀಡಬೇಕು ಮತ್ತು ಆಭರಣಗಳು ಯಾರಿಗೆ ಸೇರಿದ್ದಾವೋ, ಅವರಿಗೆ ಮರಳಿಸಬೇಕೆಂದು ರಾಜೀ ಮಾಡಿಕೊಂಡಿದ್ದರು. ನಂತರ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕಾಗಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 (ಬಿ) ಅಡಿ ಕಾಮರೆಡ್ಡಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಆದಾಗ್ಯೂ, ಈ ದಂಪತಿಯು ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಡದ ಪಂಗಡಕ್ಕೆ ಸೇರಿದ ಕಾರಣ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 2 (2) ಅಡಿಯಲ್ಲಿ ವಿಚ್ಛೇದನ ನೀಡಲು ಆಗುವುದಿಲ್ಲ ಎಂದು ನ್ಯಾಯಾಲಯವು ಅರ್ಜಿ ತಿರಸ್ಕರಿಸಿತ್ತು. ಈ ಸೆಕ್ಷನ್ 2 (2) ಹಿಂದೂ ವಿವಾಹ ಕಾಯ್ದೆಯನ್ನು ಎಸ್‌ಟಿಗಳಿಗೆ ಅನ್ವಯಿಸಬೇಕಾದರೆ, ಅಂತಹ ಪಂಗಡವು ಕೇಂದ್ರದ ಅಧಿಸೂಚನೆಗೆ ಒಳಪಡಬೇಕು ಎಂದು ಹೇಳುತ್ತಿದೆ.

ಹೀಗಾಗಿ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಅಲಿಶೆಟ್ಟಿ ಲಕ್ಷ್ಮೀನಾರಾಯಣ ನೇತೃತ್ವದ ಪೀಠದಲ್ಲಿ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪರವಾಗಿ ವಕೀಲ ಟಿ.ಸೃಜನಕುಮಾರ್ ರೆಡ್ಡಿ ಮತ್ತು ನ್ಯಾಯಾಲಯದ ಸಹಾಯಕ ಕೆ.ಪವನಕುಮಾರ್ ವಾದ ಮಂಡಿಸಿ, ವಿಚ್ಛೇದನ ಕೋರಿರುವ ದಂಪತಿ ಲಂಬಾಡಾ (ಲಂಬಾಣಿ) ಗುಂಪಿನ ಮೀನಾ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಸಪ್ತಪದಿ ತುಳಿದು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಹಿಂದೂ ಕಾನೂನನ್ನು ಈ ದಂಪತಿಗೆ ಅನ್ವಯಿಸದಿದ್ದರೆ, ಈ ಬುಡಕಟ್ಟಿನ ಮಹಿಳೆಗೆ ಅನ್ಯಾಯವಾಗುತ್ತದೆ. ಬಹುಪತ್ನಿತ್ವ ಆಚರಣೆಗೆ ಅವಕಾಶ ನೀಡಿದಂತಾಗುತ್ತದೆ ಎಂದು ಹೇಳಿದ್ದರು.

ಈ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು, ಗುರುತಿಸಲಾದ ಬುಡಕಟ್ಟುಗಳ ಸಂಪ್ರದಾಯ ಮತ್ತು ಸಂಪ್ರದಾಯಗಳನ್ನು ರಕ್ಷಿಸಲು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 2 (2)ಅನ್ನು ಜಾರಿಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್, ದೆಹಲಿ ಮತ್ತು ಆಂಧ್ರಪ್ರದೇಶ ಹೈಕೋರ್ಟ್‌ಗಳು ಈ ಹಿಂದೆ ತೀರ್ಪು ನೀಡಿವೆ. ಈ ಪ್ರಕರಣದಲ್ಲೂ ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದ್ದರಿಂದ ನ್ಯಾಯಾಲಯವು ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ನೀಡುವಂತೆ ಆದೇಶಿಸಿದೆ. ಆಯಾ ಪ್ರಕರಣಗಳ ಸಂದರ್ಭಗಳನ್ನು ಆಧರಿಸಿ ಕೆಳ ನ್ಯಾಯಾಲಯಗಳು ಸಹ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:ಬಿಆರ್​ಎಸ್​ ಎಂಎಲ್​ಸಿ ಆಯ್ಕೆ ಅಸಿಂಧುಗೊಳಿಸಿ ತೆಲಂಗಾಣ ಹೈಕೋರ್ಟ್‌ ತೀರ್ಪು

Last Updated : May 29, 2024, 10:34 PM IST

ABOUT THE AUTHOR

...view details