ಕರ್ನಾಟಕ

karnataka

ಮೀಸಲಾತಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದಲ್ಲಿ ಉಪವರ್ಗೀಕರಣಕ್ಕೆ ಅನುಮತಿ ಇದೆ - ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು - Supreme Court

By ETV Bharat Karnataka Team

Published : Aug 1, 2024, 12:37 PM IST

ಒಳ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಉಪವರ್ಗೀಕರಣಕ್ಕೆ ಅನುಮತಿ ಇದೆ. ಇದು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸಲ್ಲ ಎಂದು ನ್ಯಾಯ ಪೀಠ ತಿಳಿಸಿದೆ.

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ (ETV Bharat)

ನವದೆಹಲಿ: ಮೀಸಲಾತಿ ವಿಚಾರವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಉಪವರ್ಗೀಕರಣಕ್ಕೆ ಅನುಮತಿ ಇದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಬಹುಮತದ ಮತ್ತು ಮಹತ್ವದ ತೀರ್ಪು ನೀಡಿದೆ. ತೀರ್ಪು ಪ್ರಕಟಿಸಿದ ಸಿಜೆಐ ಡಿ.ವೈ. ಚಂದ್ರಚೂಡ್, ಎಸ್​ಸಿ, ಎಸ್​ಟಿಗಳ ಯಾವುದೇ ಉಪ ವರ್ಗೀಕರಣವು ಸಂವಿಧಾನದ 14ನೇ ವಿಧಿಯನ್ನು (ಸಮಾನತೆಯ ಹಕ್ಕು) ಉಲ್ಲಂಘಿಸುತ್ತದೆ ಎಂಬ ಇ.ವಿ. ಚಿನ್ನಯ್ಯ ಪ್ರಕರಣದ 2004ರ ತೀರ್ಪನ್ನು ತಳ್ಳಿಹಾಕಿದ್ದೇವೆ ಎಂದು ಹೇಳಿದರು.

ಒಳ ಮೀಸಲಾತಿ ಸಂಬಂಧ ಪಂಜಾಬ್-ಹರಿಯಾಣ ಹೈಕೋರ್ಟ್ 2010ರಲ್ಲಿ ನೀಡಿದ್ದ ತೀರ್ಪಿನ ವಿರುದ್ಧ ಪಂಜಾಬ್ ಸರ್ಕಾರ ಸೇರಿದಂತೆ ಸುಮಾರು ಎರಡು ಡಜನ್ ಅರ್ಜಿಗಳು ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಕೆಯಾಗಿದ್ದವು. ಅರ್ಜಿಗಳ ವಿಚಾರಣೆಯನ್ನು ಸಿಜೆಐ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ.ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಮಿಶ್ರಾ ಅವರನ್ನೊಳಗೊಂಡ ಪೀಠವು ನಡೆಸಿದೆ.

ಇಂದು ಈ ಪ್ರಕರಣದ ತೀರ್ಪು ಪ್ರಕಟಿಸಲಾಗಿದೆ. ನ್ಯಾಯಮೂರ್ತಿ ತ್ರಿವೇದಿ ಹೊರತುಪಡಿಸಿ ಉಳಿದ ಎಲ್ಲ ನ್ಯಾಯಮೂರ್ತಿಗಳು ಒಳ ಮೀಸಲಾತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಪ ವರ್ಗೀಕರಣವು ಆರ್ಟಿಕಲ್ 14ಅನ್ನು ಉಲ್ಲಂಘಿಸುವುದಿಲ್ಲ. ಏಕೆಂದರೆ ಉಪವರ್ಗಗಳನ್ನು ಪಟ್ಟಿಯಿಂದ ಹೊರಗಿಡಲಾಗಿಲ್ಲ. ಮೀಸಲಾತಿ ಉದ್ದೇಶಕ್ಕಾಗಿ ಪರಿಶಿಷ್ಟ ಜಾತಿಯ ಉಪ-ವರ್ಗೀಕರಣವನ್ನು ಅನುಮತಿಸಲಾಗಿದೆ ಎಂದು ನಾವು ಭಾವಿಸಿದ್ದೇವೆ ಎಂದು ಸರ್ವೋಚ್ಚ ನ್ಯಾಯಾಲಯವು 6:1 ಬಹುಮತದಿಂದ ಹೇಳಿದೆ.

ಅಲ್ಲದೇ, ಮೀಸಲಾತಿ ಮೂಲಕ ಆಯ್ಕೆಯಾದ ಅಭ್ಯರ್ಥಿಗಳ ಅಸಮರ್ಥತೆಯ ಕಳಂಕದಿಂದಾಗಿ ಎಸ್‌ಸಿ ಮತ್ತು ಎಸ್‌ಟಿಗಳ ಸದಸ್ಯರು ಹೆಚ್ಚಾಗಿ ಏಣಿಯನ್ನು ಏರಲು ಸಾಧ್ಯವಾಗುವುದಿಲ್ಲ ಎಂದು ಪೀಠ ಹೇಳಿದೆ. ಸಂವಿಧಾನದ 14ನೇ ವಿಧಿಯು ಒಂದು ವರ್ಗದ ಉಪ-ವರ್ಗೀಕರಣವನ್ನು ಅನುಮತಿಸುತ್ತದೆ. ನ್ಯಾಯಾಲಯವು ಉಪ-ವರ್ಗೀಕರಣದ ಸಿಂಧುತ್ವವನ್ನು ಪರೀಕ್ಷಿಸುವಾಗ, ವರ್ಗವು ಏಕರೂಪವಾಗಿದೆಯೇ ಮತ್ತು ಉಪ ವರ್ಗೀಕರಣದ ಉದ್ದೇಶವನ್ನು ಪೂರೈಸಲು ಒಂದು ಸಮಗ್ರ ವರ್ಗವಾಗಿದೆಯೇ ಎಂಬುದನ್ನು ನಿರ್ಧರಿಸಬೇಕು. ಉದ್ದೇಶಕ್ಕಾಗಿ ಏಕೀಕರಿಸದ ವರ್ಗವನ್ನು ದ್ವಿಮುಖ ಅರ್ಥಗರ್ಭಿತ ವ್ಯತ್ಯಾಸದ ಮಾನದಂಡವನ್ನು ಪೂರೈಸಿದ ನಂತರ ಮತ್ತಷ್ಟು ವರ್ಗೀಕರಿಸಬಹುದು ಎಂದು ಸಿಜೆಐ ಚಂದ್ರಚೂಡ್ ತಿಳಿಸಿದರು.

ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡುವುದು ರಾಜ್ಯದ ಕರ್ತವ್ಯ. ಎಸ್‌ಸಿ/ಎಸ್‌ಟಿ ವರ್ಗದ ಕೆಲವೇ ಜನರು ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿರುವ ಮ್ಯಾನ್ಯುವಲ್ ಸ್ಕಾವೆಂಜರ್ ಮಕ್ಕಳ ರೀತಿಯಲ್ಲೇ ಕೆನೆಪದರ ವಕೀಲರಿಗೆ ಸೇರಿದ ಎಸ್‌ಸಿಗಳ ಮಕ್ಕಳನ್ನು ಹಾಕಿದರೆ ಅನ್ಯಾಯವಾಗುತ್ತದೆ. ಮೀಸಲಾತಿಯ ಪ್ರಯೋಜನಗಳಿಂದ ಅವರನ್ನು ಹೊರಗಿಡಲು ಎಸ್‌ಸಿ ಮತ್ತು ಎಸ್‌ಟಿಗಳಲ್ಲಿ ಕೆನೆ ಪದರವನ್ನು ಗುರುತಿಸಲು ರಾಜ್ಯಗಳು ಕಸರತ್ತು ನಡೆಸಬೇಕು ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.

ಪ್ರಸ್ತುತ, ಕೋಟಾದಿಂದ ಹೊರಗಿಡಲು ಕೆನೆ ಪದರದ ಮಾನದಂಡವು ಒಬಿಸಿಗಳಿಗೆ ಮಾತ್ರ ಅನ್ವಯಿಸುತ್ತದೆ. 15 ಮತ್ತು 16ನೇ ವಿಧಿಯಲ್ಲಿ ರಾಜ್ಯವನ್ನು ಉಪವರ್ಗಕ್ಕೆ ಅಡ್ಡಿಪಡಿಸುವ ಯಾವ ಅಂಶವೂ ಇಲ್ಲ ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ:ಬಿಹಾರದಲ್ಲಿ ಶೇ.65 ಮೀಸಲಾತಿ ವಿಚಾರ: ಪಾಟ್ನಾ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ

ABOUT THE AUTHOR

...view details