ಕರ್ನಾಟಕ

karnataka

ಸತ್ಸಂಗದ ವೇಳೆ ಭಾರಿ ಕಾಲ್ತುಳಿತ: 116 ಮಂದಿ ಸಾವು; ಏರುತ್ತಲೇ ಸಾಗುತ್ತಿದೆ ಸಾವಿನ ಸಂಖ್ಯೆ - STAMPEDE BROKE OUT HATHRAS

By ETV Bharat Karnataka Team

Published : Jul 2, 2024, 4:57 PM IST

Updated : Jul 2, 2024, 10:19 PM IST

ಹತ್ರಾಸ್ ಜಿಲ್ಲೆಯ ಕೊತ್ವಾಲಿ ಸಿಕಂದರಾವ್ ಪ್ರದೇಶದಲ್ಲಿ ಕಾಲ್ತುಳಿತ ಸಂಭವಿಸಿ 116ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದು ದೃಢ ಪಟ್ಟಿದೆ.

hathras stampede
ಹತ್ರಾಸ್‌ ಕಾಲ್ತುಳಿತ (ETV Bharat)

ಸತ್ಸಂಗದ ವೇಳೆ ಕಾಲ್ತುಳಿತದ ಕುರಿತು ಎಸ್​ಎಸ್​ಪಿ ರಾಜೇಶ್​ ಕುಮಾರ್ ಸಿಂಗ್ ಅವರು ಮಾತನಾಡಿದರು (ETV Bharat)

ಹತ್ರಾಸ್ (ಉತ್ತರ ಪ್ರದೇಶ) :ಜಿಲ್ಲೆಯ ಕೊತ್ವಾಲಿ ಸಿಕಂದರಾವ್ ಪ್ರದೇಶದಲ್ಲಿ ಮಂಗಳವಾರ ಭಾರಿ ಕಾಲ್ತುಳಿತ ಸಂಭವಿಸಿದೆ. ರತಿಭಾನಪುರದ ಫುಲ್ರೈ ಗ್ರಾಮದಲ್ಲಿ ಭೋಲೆ ಬಾಬಾರವರ ಸತ್ಸಂಗ ನಡೆಯುತ್ತಿತ್ತು. ಸತ್ಸಂಗ ಮುಗಿದ ನಂತರ ಜನಸಮೂಹ ಹೊರಗೆ ಬರುತ್ತಿದ್ದಾಗ ಕಾಲ್ತುಳಿತ ಉಂಟಾಗಿದೆ. ಕಾಲ್ತುಳಿತದ ಸಂದರ್ಭದಲ್ಲಿ ಇದುವರೆಗೆ 116 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಕಾಲ್ತುಳಿತದ ನಂತರ, ಸಿಎಸ್‌ಸಿ ಸಿಕಂದರಾವ್‌ಗೆ ಮೃತದೇಹಗಳನ್ನು ಸಾಗಿಸಲಾಗಿದೆ. ಏತನ್ಮಧ್ಯೆ, ಗಾಯಾಳುಗಳನ್ನು ಇಟಾಹ್ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಇನ್ನೂ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಬಗ್ಗೆ ಆಗ್ರಾದ ಎಡಿಜಿ ಡಾ. ಅನುಪಮ್ ಕುಲಶ್ರೇಷ್ಠ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ''ಇದುವರೆಗೆ ಸುಮಾರು 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಅವರ ಚಿಕಿತ್ಸೆಯು ನಡೆಯುತ್ತಿದೆ. ಸತ್ಸಂಗದ ಸಮಯದಲ್ಲಿ ಭೋಲೆ ಬಾಬಾ ಅವರ ಪಾದಗಳನ್ನು ಸ್ಪರ್ಶಿಸಿ ನೀರು ತೆಗೆದುಕೊಳ್ಳುವಾಗ ಭಕ್ತರು ಒಬ್ಬರ ಮೇಲೊಬ್ಬರು ಬೀಳಲು ಪ್ರಾರಂಭಿಸಿದರು'' ಎಂದು ಅವರು ತಿಳಿಸಿದ್ದಾರೆ.

ಕಾಲ್ತುಳಿತದ ಸಾವಿನ ಸಂಖ್ಯೆ ಹೆಚ್ಚಾಗಬಹುದು. ಆದರೆ, ಇದುವರೆಗೂ ಒಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದಲ್ಲದೇ ಸತ್ಸಂಗಕ್ಕೆ ಅನುಮತಿ ತೆಗೆದುಕೊಂಡಿರಲಿಲ್ಲ ಎಂಬುದು ತಿಳಿದು ಬಂದಿದೆ. ಅಲ್ಲಿನ ವಿಡಿಯೋಗಳು ಭೀಕರತೆಯನ್ನು ತೋರಿಸುತ್ತಿವೆ. ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ.

ಸಿಎಂ ಯೋಗಿ ಸಂತಾಪ:ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಯೋಗಿ ಅವರು ತಕ್ಷಣ ಹಿರಿಯ ಪೊಲೀಸ್​ ಅಧಿಕಾರಿಗಳನ್ನು ಸ್ಥಳಕ್ಕೆ ಹೋಗುವಂತೆ ಸೂಚಿಸಿದ್ದಾರೆ. ಪರಿಹಾರ ಕಾರ್ಯವನ್ನು ವೇಗಗೊಳಿಸಲು ಮತ್ತು ಗಾಯಾಳುಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿಗಳು ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ ಎಂದು ಸಿಎಂ ಯೋಗಿ ಹೇಳಿದ್ದಾರೆ. ಇನ್ನೊಂದು ಕಡೆ ಸಿಎಂ ಸೂಚನೆ ಮೇರೆಗೆ ತನಿಖಾ ಸಮಿತಿ ರಚಿಸಲಾಗಿದೆ. ಅಪಘಾತದ ಕಾರಣವನ್ನು ತನಿಖೆ ಮಾಡಲು ಎಡಿಜಿ ಆಗ್ರಾ ಮತ್ತು ಕಮಿಷನರ್ ಅಲಿಗಢ್ ತಂಡವನ್ನು ರಚಿಸಲಾಗಿದೆ.

ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಣೆ : ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ಆರ್ಥಿಕ ನೆರವು ನೀಡುವಂತೆ ಸಿಎಂ ಯೋಗಿ ಸೂಚನೆ ನೀಡಿದ್ದಾರೆ. ಅಪಘಾತದ ಕಾರಣಗಳನ್ನು ತನಿಖೆ ಮಾಡಲು ಎಡಿಜಿ, ಕಮಿಷನರ್ ನೇತೃತ್ವದಲ್ಲಿ ತಂಡವನ್ನು ರಚಿಸಲು ಸೂಚನೆಗಳನ್ನು ನೀಡಿದ್ದಾರೆ. ಇದೇ ವೇಳೆ ಕಾರ್ಯಕ್ರಮ ಆಯೋಜಕರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆಯೂ ಸೂಚನೆ ನೀಡಲಾಗಿದೆ.

ಇದನ್ನೂ ಓದಿ :ಕೊಚ್ಚಿ ವಿಶ್ವವಿದ್ಯಾಲಯದ ಟೆಕ್​ ಫೆಸ್ಟ್​ನಲ್ಲಿ ಕಾಲ್ತುಳಿತ: ನಾಲ್ವರ ಸಾವು, 60ಕ್ಕೂ ಹೆಚ್ಚಿನ ಜನರಿಗೆ ಗಾಯ ​

Last Updated : Jul 2, 2024, 10:19 PM IST

ABOUT THE AUTHOR

...view details