ಇಂಫಾಲ(ಮಣಿಪುರ):ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿ ಹೊತ್ತಿ ಉರಿದಿದ್ದ ಮಣಿಪುರ ಕೆಲವು ದಿನಗಳಿಂದ ಶಾಂತವಾಗಿತ್ತು. ಆದರೆ ಇದೀಗ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಹೀಗಾಗಿ ರಾಜ್ಯದಲ್ಲಿ ಸಾವು-ನೋವುಗಳನ್ನು ತಡೆಯಲು ಸರ್ಕಾರ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿದೆ. ಡ್ರೋನ್ ವಿರೋಧಿ ಅಸ್ಸಾಂ ರೈಫಲ್ಸ್ ಪಡೆಯನ್ನು ವಿವಿಧೆಡೆ ನಿಯೋಜಿಸಲಾಗಿದೆ.
ಸೆಪ್ಟೆಂಬರ್ 1ರಿಂದ ಮತ್ತೆ ಹಿಂಸಾಚಾರ ಕೃತ್ಯಗಳು ನಡೆಯುತ್ತಿವೆ. ಜಿರಿಬಾಮ್ ಎಂಬಲ್ಲಿ ಶನಿವಾರ ರಾತ್ರಿ ನಡೆದ ಒಂದು ಗುಂಪಿನ ದಾಳಿಯಲ್ಲಿ ಐವರು ಸಾವಿಗೀಡಾಗಿದ್ದಾರೆ. ನಿದ್ರೆಯಲ್ಲಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ದಾಳಿಕೋರರು ಮೃತಪಟ್ಟಿದ್ದಾರೆ.
ಕುಕಿ ಸಮುದಾಯದ ವಿರುದ್ಧ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಮಾತನಾಡಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಆಡಿಯೋ ವೈರಲ್ ಆದ ಬಳಿಕ ಹಿಂಸಾಚಾರ ಮತ್ತೆ ಶುರುವಾಗಿದೆ. ಆದರೆ, ಸರ್ಕಾರ ಇದನ್ನು ನಿರಾಕರಿಸಿದೆ. ಸಿಎಂ ಸಿಂಗ್ ಅವರು ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದೆ.
ದಾಳಿಗೆ ಡ್ರೋನ್ ಬಳಕೆ:ಜಿರಿಬಾಮ್ನಲ್ಲಿ ದಾಳಿಕೋರರು ಡ್ರೋನ್ಗಳನ್ನು ಬಳಸಿದ್ದಾರೆ. ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಗುಂಪು ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಮಲಗಿದ್ದಾಗಲೇ ಗುಂಡಿಕ್ಕಿ ಹತ್ಯೆ ಮಾಡಿದೆ. ಮಾಹಿತಿ ತಿಳಿದ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದಾಗ, ದಾಳಿಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಎನ್ಕೌಂಟರ್ನಲ್ಲಿ ನಾಲ್ವರು ಹತ್ಯೆಯಾಗಿದ್ದಾರೆ. ಮೂವರ ಶವಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.