ಕರ್ನಾಟಕ

karnataka

ETV Bharat / bharat

ವಕ್ಫ್ ಜೆಪಿಸಿ ಸಭೆಯಲ್ಲಿ ಕೋಲಾಹಲ: ಬಾಟಲಿ ಒಡೆದು ಚೂರು ಎಸೆದಾಡಿದ ಟಿಎಂಸಿ ಸಂಸದ

ವಕ್ಫ್ ಕುರಿತಾದ ಜೆಪಿಸಿ ಸಭೆಯಲ್ಲಿ ಭಾರಿ ವಾಗ್ವಾದ ನಡೆದಿದೆ.

ಜೆಪಿಸಿ ಸಭೆ
ವಕ್ಫ್ ಜೆಪಿಸಿ ಸಭೆ (IANS)

By ETV Bharat Karnataka Team

Published : 6 hours ago

ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ 2024ರ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಭೆಯಲ್ಲಿ ತೀವ್ರ ವಾಗ್ವಾದ ನಡೆದಿದ್ದು, ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಆಕ್ರೋಶದಿಂದ ಗಾಜಿನ ಬಾಟಲಿಯನ್ನು ಒಡೆದು ಹಾಕಿದ್ದಾರೆ. ಒಡಿಶಾದ ಕಟಕ್ ಮೂಲದ ಜಸ್ಟೀಸ್ ಇನ್ ರಿಯಾಲಿಟಿ ಮತ್ತು ಪಂಚಶಾಖ ಪ್ರಚಾರದ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾಗ ಉದ್ವಿಗ್ನತೆ ಭುಗಿಲೆದ್ದಿತು ಎಂದು ಮೂಲಗಳು ತಿಳಿಸಿವೆ.

ಔಪಚಾರಿಕವಾಗಿ ಅಭಿಪ್ರಾಯ ಮಂಡಿಸಲು ಅನುಮತಿ ಇಲ್ಲದೆಯೇ ಸಭೆಯಲ್ಲಿ ಅನೇಕ ಬಾರಿ ಮಾತನಾಡಿದ್ದ ಬ್ಯಾನರ್ಜಿ, ಮತ್ತೆ ಮಾತನಾಡಲು ಪ್ರಯತ್ನಿಸಿದರು. ಇದಕ್ಕೆ ಬಿಜೆಪಿ ಸಂಸದ ಅಭಿಜಿತ್ ಗಂಗೋಪಾಧ್ಯಾಯ ಆಕ್ಷೇಪ ವ್ಯಕ್ತಪಡಿಸಿದಾಗ ಸಭೆಯಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ವಾಗ್ವಾದದ ಸಮಯದಲ್ಲಿ ಬ್ಯಾನರ್ಜಿ ಗಾಜಿನ ನೀರಿನ ಬಾಟಲಿಯನ್ನು ಒಡೆದು, ಸ್ವತಃ ಗಾಯಗೊಂಡರು ಮತ್ತು ನಂತರ ಬಾಟಲಿಯ ತುಣುಕುಗಳನ್ನು ಅಧ್ಯಕ್ಷ ಜಗದಾಂಬಿಕಾ ಪಾಲ್ ಕಡೆಗೆ ಎಸೆದರು ಎಂದು ವರದಿಯಾಗಿದೆ.

ಘಟನೆಯ ನಂತರ ಜೆಪಿಸಿ ಸಭೆಯನ್ನು ತಕ್ಷಣ ಮುಂದೂಡಲಾಯಿತು. ಆಡಳಿತ ಮತ್ತು ವಿರೋಧ ಪಕ್ಷದ ಸಂಸದರು ನಂತರ ನಿಂದನಾತ್ಮಕ ಭಾಷೆಯನ್ನು ಬಳಸಿದ್ದಾರೆ ಎಂದು ಪರಸ್ಪರ ಆರೋಪಿಸಿದರು. ಸ್ವಲ್ಪ ಸಮಯದ ಮುಂದೂಡಿಕೆಯ ನಂತರ, ಸಭೆ ಪುನರಾರಂಭವಾಯಿತು. ಕಲ್ಯಾಣ್ ಬ್ಯಾನರ್ಜಿ ಅವರ ವರ್ತನೆಗಾಗಿ ಅವರನ್ನು ಜೆಪಿಸಿ ಸಭೆಯಿಂದ ಒಂದು ಅವಧಿಗೆ ಅಮಾನತುಗೊಳಿಸಲಾಗಿದೆ. ಅವರು ಜೆಪಿಸಿಯ ಮುಂದಿನ ಸಭೆಯಲ್ಲಿ ಭಾಗವಹಿಸುವಂತಿಲ್ಲ. ಸಭೆಯಲ್ಲಿ 9-7 ಮತಗಳ ಅಂತರದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ವಕ್ಫ್ (ತಿದ್ದುಪಡಿ) ಮಸೂದೆಯ ಮೇಲಿನ ಚರ್ಚೆಗಳಲ್ಲಿ ವಾಗ್ವಾದಗಳು ನಡೆದಿರುವುದು ಇದೇ ಮೊದಲಲ್ಲ. ಹಲವು ಬಾರಿ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ಸದಸ್ಯರು ಮಾತಿನ ಚಕಮಕಿ ನಡೆಸಿದ್ದಾರೆ. ಇದಕ್ಕೂ ಮುನ್ನ ಅಕ್ಟೋಬರ್ 15ರಂದು ನಡೆದ ಜೆಪಿಸಿ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸಂಸದರ ನಡುವೆ ತೀವ್ರ ಘರ್ಷಣೆ ನಡೆದಿತ್ತು. ನಂತರ ವಿರೋಧ ಪಕ್ಷದ ಸದಸ್ಯರು ತಾತ್ಕಾಲಿಕವಾಗಿ ಸಭಾತ್ಯಾಗ ಮಾಡಿದ್ದರು. ಅಂದು ಸಭೆಯಲ್ಲಿ ತಮಗೆ ಮಾತನಾಡಲು ನ್ಯಾಯಯುತ ಅವಕಾಶ ನೀಡಲಾಗಿಲ್ಲ ಎಂದು ವಿರೋಧ ಪಕ್ಷದ ಸಂಸದರು ಆರೋಪಿಸಿದ ನಂತರ ವಾಗ್ವಾದ ಉಂಟಾಗಿತ್ತು.

ಬಿಸಿ ಬಿಸಿ ಚರ್ಚೆಯ ನಂತರ ಆಗಸ್ಟ್ 8ರಂದು ಲೋಕಸಭೆಯಲ್ಲಿ ಪರಿಚಯಿಸಲಾದ ವಕ್ಫ್ (ತಿದ್ದುಪಡಿ) ಮಸೂದೆಯನ್ನು ನಂತರ ಜೆಪಿಸಿ ಪರಿಶೀಲನೆಗೆ ಕಳುಹಿಸಲಾಗಿದೆ.ಈ ವಿಷಯಕ್ಕೆ ಸಂಬಂಧಿಸಿದವರೊಂದಿಗೆ ಜೆಪಿಸಿ ಚರ್ಚೆಗಳನ್ನು ನಡೆಸುತ್ತಿದ್ದು, ಚರ್ಚೆಗಳು ಮುಂದುವರಿಯಲಿವೆ. ವಕ್ಫ್ ಮಂಡಳಿಯ ಆಸ್ತಿಗಳ ನಿರ್ವಹಣೆಯನ್ನು ಸುಧಾರಿಸುವ ಉದ್ದೇಶದಿಂದ ವಕ್ಫ್ ತಿದ್ದುಪಡಿ ಮಸೂದೆ ಪರಿಚಯಿಸಲಾಗಿದೆ.

ಇದನ್ನೂ ಓದಿ: ಪತಿಗೆ 'ಹಿಜ್ಡಾ' ಎಂದು ಮೂದಲಿಸುವುದು ಮಾನಸಿಕ ಕ್ರೌರ್ಯ: ಹೈಕೋರ್ಟ್​ ತೀರ್ಪು

ABOUT THE AUTHOR

...view details