ಕರ್ನಾಟಕ

karnataka

ETV Bharat / bharat

ಜೈಲಿಂದಲೇ ಲಾರೆನ್ಸ್​ ಬಿಷ್ಣೋಯಿ ಸಂದರ್ಶನ: ಇಬ್ಬರು ಡಿಎಸ್​ಪಿ ಸೇರಿ 7 ಅಧಿಕಾರಿಗಳ ಅಮಾನತು

ಜೈಲಿಂದಲೇ ಲಾರೆನ್ಸ್​ ಬಿಷ್ಣೋಯಿಯನ್ನು ಖಾಸಗಿ ವಾಹಿನಿ ಸಂದರ್ಶನ ನಡೆಸಿದ್ದು, ಇದಕ್ಕೆ ಸಹಕರಿಸಿದ ಪಂಜಾಬ್​ ಪೊಲೀಸ್​ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಲಾರೆನ್ಸ್​ ಬಿಷ್ಣೋಯಿ
ಲಾರೆನ್ಸ್​ ಬಿಷ್ಣೋಯಿ (ETV Bharat)

By ANI

Published : 6 hours ago

ಚಂಡೀಗಢ (ಪಂಜಾಬ್):ಹಲವು ಹತ್ಯೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಗ್ಯಾಂಗ್​​ಸ್ಟರ್​ ಲಾರೆನ್ಸ್​ ಬಿಷ್ಣೋಯಿಯನ್ನು ಜೈಲಿನಲ್ಲಿ ಸಂದರ್ಶನ ಮಾಡಲು ಅವಕಾಶ ನೀಡಿದ್ದಕ್ಕೆ ಇಬ್ಬರು ಡಿಎಸ್​ಪಿಗಳು ಸೇರಿದಂತೆ 7 ಮಂದಿ ಪೊಲೀಸ್​ ಅಧಿಕಾರಿಗಳನ್ನು ಪಂಜಾಬ್​ ಸರ್ಕಾರ ಅಮಾನತು ಮಾಡಿದೆ.

ಗುರ್ಶರ್ ಸಿಂಗ್ (ಡಿಎಸ್‌ಪಿ), ಸಮರ್ ವಿನೀತ್ (ಡಿಎಸ್‌ಪಿ), ರೀನಾ (ಎಸ್‌ಐ), ಜಗಪಾಲ್ ಜಂಗು (ಎಸ್‌ಐ), ಶಹಗಿಂತ್ ಸಿಂಗ್ (ಎಸ್‌ಐ), ಮುಕ್ತಿಯಾರ್ ಸಿಂಗ್ (ಎಎಸ್‌ಐ), ಓಂ ಪ್ರಕಾಶ್ (ಹೆಡ್​ಕಾನ್ಸ್‌ಟೇಬಲ್) ಅಮಾನತಾದ ಅಧಿಕಾರಿಗಳು. ಲಾರೆನ್ಸ್ ಬಿಷ್ಣೋಯ್ ಸಂದರ್ಶನಕ್ಕೆ ಸಹಕರಿಸಿದ ಏಳು ಅಧಿಕಾರಿಗಳ ಅಮಾನತಿನ ಆದೇಶವನ್ನು ಪಂಜಾಬ್ ಗೃಹ ಕಾರ್ಯದರ್ಶಿ ಹೊರಡಿಸಿದ್ದಾರೆ.

ಜೈಲಿಂದಲೇ ಲಾರೆನ್ಸ್​ ಬಿಷ್ಣೋಯಿ ಸಂದರ್ಶನ: ಇಬ್ಬರು ಡಿಎಸ್​ಪಿ ಸೇರಿ 7 ಅಧಿಕಾರಿಗಳ ಅಮಾನತು (ANI)

ಪೊಲೀಸ್​ ಕಸ್ಟಡಿಯಲ್ಲಿರುವ ಲಾರೆನ್ಸ್​ ಬಿಷ್ಣೋಯಿ ಸದ್ಯ ಗುಜರಾತ್​​ನ ಸಬರಮತಿ ಜೈಲಿನಲ್ಲಿದ್ದಾನೆ. ಇದಕ್ಕೂ ಮೊದಲು ಆತನನ್ನು ಪಂಜಾಬ್​​ನ ಜೈಲಿನಲ್ಲಿ ಇಡಲಾಗಿತ್ತು. ಈ ವೇಳೆ 2022 ರ ಸೆಪ್ಟೆಂಬರ್​​ 3 ಮತ್ತು 4 ರಂದು ವಿಡಿಯೋ ಕಾನ್ಫ್​​ರೆನ್ಸ್​ ಮೂಲಕ ಖಾಸಗಿ ವಾಹಿನಿಯೊಂದು ಲಾರೆನ್ಸ್​​ ಸಂದರ್ಶನ ನಡೆಸಿತ್ತು.

ಬಳಿಕ ಅದನ್ನು 2023 ರ ಮಾರ್ಚ್​ನಲ್ಲಿ ಪ್ರಸಾರ ಮಾಡಿತ್ತು. ಬಳಿಕ ಅದರ ವಿಡಿಯೋವನ್ನು ವಾಹಿನಿಯು ಅಳಿಸಿ ಹಾಕಿತ್ತು. ಇದು ದೇಶದಲ್ಲಿ ಭಾರೀ ಸಂಚಲನ ಉಂಟು ಮಾಡಿತ್ತು. ಜೈಲಿನಲ್ಲಿ ಇರುವ ಪಾತಕಿಯನ್ನು ವಾಹಿನಿ ಸಂದರ್ಶನ ನಡೆಸಿದ್ದರ ತನಿಖೆಗೆ ಅಲ್ಲಿನ ಸರ್ಕಾರ ಎಸ್​​ಐಟಿ ರಚಿಸಿತ್ತು. ವಿಚಾರಣೆಯಲ್ಲಿ ಲಾರೆನ್ಸ್​ ವಿಡಿಯೋ ಸಂದರ್ಶನ ನಡೆಸಿದ್ದು, ಪತ್ತೆಯಾಗಿದೆ.

ಜೈಲಿಂದಲೇ ಕೊಲೆಗಳಿಗೆ ಸ್ಕೆಚ್​:ಇನ್ನು, ಹಲವಾರು ವರ್ಷಗಳಿಂದ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್, ಇತ್ತೀಚೆಗೆ ನಡೆದ ಎನ್​​ಸಿಪಿ ನಾಯಕ ಬಾಬಾ ಸಿದ್ಧಿಕಿ ಅವರ ಹತ್ಯೆಯ ಹಿಂದಿನ ರೂವಾರಿ ಎಂಬ ಆರೋಪವಿದೆ. ತನ್ನ ಬೆಂಬಲಿಗರ ಜೊತೆ ಜೈಲಿಂದಲೇ ಸಂಪರ್ಕ ಸಾಧಿಸಿ ಕೊಲೆಗೆ ಯೋಜನೆ ರೂಪಿಸುತ್ತಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

ಅಕ್ರಮವಾಗಿ ತನ್ನ ಬ್ಯಾರಕ್‌ಗೆ ಮೊಬೈಲ್​ ತರಿಸಿಕೊಂಡು ತನ್ನ ಅನುಯಾಯಿಗಳೊಂದಿಗೆ ಸಂಪರ್ಕದಲ್ಲಿದ್ದಾನೆ. ಪಂಜಾಬ್​ ಗಾಯಕ ಸಿಧು ಮೂಸೆವಾಲಾ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಮೇಲೆ ದಾಳಿಗೆ ಈತನೇ ಸೂಚಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಲವು ಬಾರಿ ಬೆದರಿಕೆ ಹಾಕಿದೆ. ಇತ್ತೀಚೆಗೆ ನಟನ ಮನೆಯ ಮೇಲೆ ಗುಂಡಿನ ದಾಳಿ ನಡೆಸಿತ್ತು. ಇದಾದ ಬಳಿಕ ಖಾನ್​ಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಸಾಮಾಜಿಕ ಮಾಧ್ಯಮ ಮತ್ತು ಇಮೇಲ್‌ಗಳ ಮೂಲಕವೂ ಬೆದರಿಕೆಗಳನ್ನು ರವಾನಿಸಲಾಗುತ್ತಿದೆ.

ಇದನ್ನೂ ಓದಿ:ಗ್ಯಾಂಗ್​​ಸ್ಟರ್​​ ಲಾರೆನ್ಸ್​ ಬಿಷ್ಣೋಯಿ ಹತ್ಯೆಗೆ ₹1,11,11,111 ಬಹುಮಾನ ಘೋಷಿಸಿದ ಕರ್ಣಿ ಸೇನೆ

ABOUT THE AUTHOR

...view details