ಕರ್ನಾಟಕ

karnataka

ನ್ಯಾಯಾಲಯಗಳ 'ವಿಚಾರಣೆ ಮುಂದೂಡುವ ಸಂಸ್ಕೃತಿ' ಕೊನೆಯಾಗಲಿ: ರಾಷ್ಟ್ರಪತಿ ಮುರ್ಮು ಕರೆ - culture of adjournments

By PTI

Published : Sep 1, 2024, 7:52 PM IST

ನ್ಯಾಯಾಲಯಗಳು ವಿಚಾರಣೆಯನ್ನು ಮುಂದೂಡುವ ಸಂಸ್ಕೃತಿಯನ್ನು ಬದಲಾಯಿಸಿಕೊಳ್ಳಬೇಕಿದೆ ಎಂದು ರಾಷ್ಟ್ರಪತಿ ಮುರ್ಮು ಹೇಳಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು (IANS)

ನವದೆಹಲಿ: ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ದೊರಕುವಂತಾಗಲು ನ್ಯಾಯಾಲಯಗಳು ವಿಚಾರಣೆಯನ್ನು ಮುಂದೂಡುವ ಸಂಸ್ಕೃತಿಯಿಂದ ದೂರ ಸರಿಯುವ ಪ್ರಯತ್ನ ಮಾಡಬೇಕಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಹೇಳಿದ್ದಾರೆ. ಜಿಲ್ಲಾ ನ್ಯಾಯಾಂಗದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳು ಬಾಕಿ ಇರುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ ಎಂದರು.

"ನ್ಯಾಯಾಲಯಗಳಲ್ಲಿ ವಿಚಾರಣೆಯನ್ನು ಮುಂದೂಡುವ ಸಂಸ್ಕೃತಿಯನ್ನು ಬದಲಾಯಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕಾಗಿದೆ. ದೇಶದ ಎಲ್ಲಾ ನ್ಯಾಯಾಧೀಶರು ನ್ಯಾಯವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ" ಎಂದು ಅವರು ಹೇಳಿದರು.

ನ್ಯಾಯಾಲಯದ ಪ್ರಕ್ರಿಯೆಗಳಿಂದ ಜನರಲ್ಲಿ ಒತ್ತಡ ಹೆಚ್ಚಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಮುರ್ಮು, ಈ ವಿದ್ಯಮಾನವು "ಬ್ಲ್ಯಾಕ್ ಕೋಟ್ ಸಿಂಡ್ರೋಮ್" ಆಗಿದೆ ಎಂದರು. ಈ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ ಎಂದು ಅವರು ತಿಳಿಸಿದರು. ನ್ಯಾಯಾಂಗದಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಭಾಗಿಯಾಗಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಮಾತನಾಡಿ, ನ್ಯಾಯದ ಅನ್ವೇಷಣೆಯು ನಿರಂತರ ಪ್ರಯಾಣವಾಗಿದೆ ಮತ್ತು ಇದಕ್ಕೆ ಸಾಮೂಹಿಕ ಸಮರ್ಪಣೆ ಮತ್ತು ಅವಿರತ ಬದ್ಧತೆಯ ಅಗತ್ಯವಿದೆ. ದೇಶದ ಅತ್ಯಂತ ದೂರದ ಭಾಗಗಳಲ್ಲಿನ ಜನರಿಗೂ ನ್ಯಾಯ ಒದಗಿಸುವ ಧ್ಯೇಯದಲ್ಲಿ ಸುಪ್ರೀಂ ಕೋರ್ಟ್ ಆರಂಭದಿಂದಲೂ ದೃಢನಿಶ್ಚಯ ಹೊಂದಿದೆ ಎಂದು ಹೇಳಿದರು.

"ನ್ಯಾಯದ ಅನ್ವೇಷಣೆಯು ನಿರಂತರ ಪ್ರಯಾಣವಾಗಿದೆ, ಇದಕ್ಕೆ ಸಾಮೂಹಿಕ ಸಮರ್ಪಣೆ ಮತ್ತು ಅವಿರತ ಬದ್ಧತೆಯ ಅಗತ್ಯವಿದೆ. ಈ ಸಮ್ಮೇಳನದಲ್ಲಿ ವಿನಿಮಯವಾದ ಚರ್ಚೆಗಳು ಮತ್ತು ಆಲೋಚನೆಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿವೆ ಮತ್ತು ನ್ಯಾಯವು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ನಮಗೆ ಮತ್ತಷ್ಟು ಸ್ಫೂರ್ತಿ ನೀಡಲಿದೆ ಎಂದು ನನಗೆ ವಿಶ್ವಾಸವಿದೆ" ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು.

ಸುಪ್ರೀಂ ಕೋರ್ಟ್ ನ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಆಯೋಜಿಸಲಾದ ರಾಷ್ಟ್ರವ್ಯಾಪಿ ಸಮ್ಮೇಳನಗಳ ಮಹತ್ವವನ್ನು ಒತ್ತಿ ಹೇಳಿದ ಅವರು, ಇಂಥ ಸಮ್ಮೇಳನಗಳು ನ್ಯಾಯಾಂಗ ಅಧಿಕಾರಿಗಳಿಗೆ ಕಲಿಯಲು, ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಮತ್ತು ತಳಮಟ್ಟದಲ್ಲಿ ಒತ್ತಡದ ಸಮಸ್ಯೆಗಳನ್ನು ಪರಿಹರಿಸಲು ವೇದಿಕೆಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದರು.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಕೇಂದ್ರ ಕಾನೂನು ಮತ್ತು ನ್ಯಾಯ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್​ನ ಧ್ವಜ ಮತ್ತು ಚಿಹ್ನೆಯನ್ನು ಬಿಡುಗಡೆ ಮಾಡಿದರು.

ಇದನ್ನೂ ಓದಿ : ಕೇಂದ್ರ ವಾಯು ಕಮಾಂಡ್​ನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ದೀಕ್ಷಿತ್ ಅಧಿಕಾರ ಸ್ವೀಕಾರ - AIR MARSHAL DIXIT

ABOUT THE AUTHOR

...view details