ಕರ್ನಾಟಕ

karnataka

9ನೇ ಬಾರಿಗೆ ಸಿಎಂ ಆಗಿ ನಿತೀಶ್​ಕುಮಾರ್ ಪ್ರಮಾಣ; ಬಿಜೆಪಿಯ ಇಬ್ಬರಿಗೆ ಡಿಸಿಎಂ ಸ್ಥಾನ

By ETV Bharat Karnataka Team

Published : Jan 28, 2024, 7:42 PM IST

ದಾಖಲೆಯ 9ನೇ ಬಾರಿಗೆ ಸಿಎಂ ಆಗಿ ನಿತೀಶ್​ಕುಮಾರ್​ ಪ್ರಮಾಣವಚನ ಸ್ವೀಕರಿಸಿದರು. ಬಿಜೆಪಿಯ ಇಬ್ಬರು ಡಿಸಿಎಂಗಳಾಗಿ ಬೋಧನೆ ಪಡೆದರು.

ನಿತೀಶ್​ಕುಮಾರ್
ನಿತೀಶ್​ಕುಮಾರ್

ಪಾಟ್ನಾ (ಬಿಹಾರ):ಆರ್​ಜೆಡಿ, ಕಾಂಗ್ರೆಸ್​ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡು ಇಂದು ಮಧ್ಯಾಹ್ನ ರಾಜೀನಾಮೆ ನೀಡಿದ್ದ ಜೆಡಿಯು ನಾಯಕ ನಿತೀಶ್​ಕುಮಾರ್​ ಸಂಜೆ ವೇಳೆ ಬಿಜೆಪಿ ಬೆಂಬಲದೊಂದಿಗೆ ದಾಖಲೆಯ 9ನೇ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು.

ರಾಜಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಪ್ರಮಾಣವಚನ ಬೋಧಿಸಿದರು. ಜೊತೆಗೆ ಬಿಜೆಪಿ ನಾಯಕರಾದ ವಿಜಯ್ ಕುಮಾರ್ ಸಿನ್ಹಾ ಮತ್ತು ಸಾಮ್ರಾಟ್ ಚೌಧರಿ ಡಿಸಿಎಂಗಳಾಗಿ ಪ್ರತಿಜ್ಞಾವಿಧಿ ಪಡೆದರು. 6 ಮಂದಿ ಸಚಿವರೂ ಅಧಿಕಾರ ಬೋಧನೆ ಮಾಡಿದರು. ಈ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಬಿಕ್ಕಟ್ಟಿಗೆ ತೆರೆಬಿತ್ತು.

ನಿತೀಶ್ ಕುಮಾರ್ ನೇತೃತ್ವದ ಹೊಸ ಸರ್ಕಾರದಲ್ಲಿ 8 ನಾಯಕರು ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಅದರಲ್ಲಿ ಬಿಜೆಪಿಯ ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹಾ ಡಿಸಿಎಂ ಆಗಿ, ಪ್ರೇಮ್ ಕುಮಾರ್ ಸಚಿವರಾಗಿ ಬೋಧನೆ ಪಡೆದರು. ಜೆಡಿಯುನಿಂದ ವಿಜಯ್ ಕುಮಾರ್ ಚೌಧರಿ, ಬಿಜೇಂದ್ರ ಪ್ರಸಾದ್ ಯಾದವ್, ಶ್ರವೋನ್ ಕುಮಾರ್, ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಅಧ್ಯಕ್ಷ ಸಂತೋಷ್ ಕುಮಾರ್ ಸುಮನ್ ಮತ್ತು ಪಕ್ಷೇತರ ಶಾಸಕ ಸುಮಿತ್ ಕುಮಾರ್ ಸಿಂಗ್ ಅವರೂ ಪ್ರತಿಜ್ಞಾವಿಧಿ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸೇರಿದಂತೆ ವಿವಿಧ ನಾಯಕರು ಹಾಜರಿದ್ದರು. ಬೆಳಗ್ಗೆಯಷ್ಟೇ ಆರ್​ಜೆಡಿ, ಕಾಂಗ್ರೆಸ್​ ಜೊತೆಗಿನ 18 ತಿಂಗಳ ಮೈತ್ರಿಗೆ ತಿಲಾಂಜಲಿ ಹೇಳಿದ ನಿತೀಶ್​ಕುಮಾರ್​, ಮಧ್ಯಾಹ್ನ ರಾಜ್ಯಪಾಲ ರಾಜೇಂದ್ರ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. ಬಳಿಕ ಬಿಜೆಪಿ ಜೊತೆಗೆ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಸಂಜೆ 5 ಗಂಟೆಗೆ ಪ್ರಮಾಣ ವಚನಕ್ಕಾಗಿ ಆಹ್ವಾನಿಸಲಾಗಿತ್ತು.

ನಿತೀಶ್​ಗೆ ಮೋದಿ ಅಭಿನಂದನೆ:ಬಿಹಾರದಲ್ಲಿ ಎನ್​ಡಿಎ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ರಾಜ್ಯದ ಅಭಿವೃದ್ಧಿ ಮತ್ತು ಜನರ ಆಶೋತ್ತರಗಳನ್ನು ಈಡೇರಿಸುವತ್ತ ಕೆಲಸ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತ್ತೊಮ್ಮೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಅವರನ್ನು ಅಭಿನಂದಿಸಿದ್ದಾರೆ. ಹೊಸ ತಂಡ ರಾಜ್ಯದ ಆಶೋತ್ತರಗಳಿಗೆ ಬದ್ಧರಾಗಿ ಸೇವೆ ಸಲ್ಲಿಸಲಿದೆ ಎಂದು ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಒಟ್ಟಾಗಿ ಸರ್ಕಾರ ರಚನೆ:ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿಎಂ ಹಾಗೂ ಡಿಸಿಎಂಗಳು ಮಾಧ್ಯಮಗಳ ಜೊತೆ ಜಂಟಿಯಾಗಿ ಮಾತನಾಡಿ, 8 ನಾಯಕರು ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಉಳಿದವರು ಶೀಘ್ರದಲ್ಲಿ ಪ್ರಮಾಣವಚನ ಪಡೆಯಲಿದ್ದಾರೆ. ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಅವರನ್ನು ಉಪ ಮುಖ್ಯಮಂತ್ರಿಗಳಾಗಿ ನೇಮಕ ಮಾಡಲಾಗಿದೆ. ಎಲ್ಲರೂ ಒಟ್ಟಾಗಿ ಸರ್ಕಾರವನ್ನು ಮುನ್ನಡೆಸುತ್ತೇವೆ ಎಂದು ಸಿಎಂ ನಿತೀಶ್ ಕುಮಾರ್​ ಹೇಳಿದರು.

ಬಿಹಾರದ ಎಲ್ಲಾ 40 ಲೋಕಸಭಾ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕತ್ವ ನಮ್ಮ ಮೇಲೆ ನಂಬಿಕೆ ಇಟ್ಟಿದೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ ಎಂದು ಡಿಸಿಎಂಗಳಾದ ವಿಜಯ್ ಸಿನ್ಹಾ, ಸಾಮ್ರಾಟ್ ಚೌಧರಿ ಹೇಳಿದರು.

ಇದನ್ನೂ ಓದಿ:ಇಂಡಿಯಾ ಕೂಟ, ಆರ್​ಜೆಡಿ ಜೊತೆ ಕೆಲಸ ಮಾಡಲಾಗಲ್ಲ: ನಿತೀಶ್​ಕುಮಾರ್​

ABOUT THE AUTHOR

...view details