ಮುಂಬೈ (ಮಹಾರಾಷ್ಟ್ರ):ಬದ್ಲಾಪುರ ಲೈಂಗಿಕ ದೌರ್ಜನ್ಯ ಆರೋಪಿ ಎನ್ಕೌಂಟರ್ ಪ್ರಕರಣದಲ್ಲಿ ಪೊಲೀಸರ ನಡೆಗೆ ಬಾಂಬೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಆರೋಪಿ ತಪ್ಪಿಸಿಕೊಳ್ಳುವಾಗ ತಲೆಗೆ ಗುಂಡಿಟ್ಟಿದ್ದೇಕೆ? ಕಾಲಿಗೆ, ಕೈಗಳಿಗೆ ಏಕೆ ಹೊಡೆಯಲಿಲ್ಲ ಎಂದು ಪ್ರಶ್ನಿಸಿದೆ. ಜೊತೆಗೆ ಆರೋಪಿಯನ್ನು ಜೈಲಿನಿಂದ ಕರೆದೊಯ್ದು, ಸಾವಿನವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಸಲ್ಲಿಸುವಂತೆ ಸೂಚಿಸಿದೆ.
ಆರೋಪಿ ಅಕ್ಷಯ್ ಶಿಂಧೆ ಸಾವಿನ ತನಿಖೆಯನ್ನು ಎಸ್ಐಟಿಗೆ ವಹಿಸಬೇಕು ಎಂದು ಕೋರಿ ಆತನ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ರೇವತಿ ಮೋಹಿತೆ ಡೇರೆ ಹಾಗೂ ನ್ಯಾ.ಪೃಥ್ವಿರಾಜ್ ಚವ್ಹಾಣ್ ಅವರಿದ್ದ ಪೀಠ, ಪೊಲೀಸರ ಕಾರ್ಯಚಟುವಟಿಕೆಗಳ ಬಗ್ಗೆ ಪೂರ್ಣ ಅನುಮಾನವಿಲ್ಲ. ಆದರೆ, ಪ್ರಕರಣವು ಎಲ್ಲ ಆಯಾಮಗಳಿಂದ ತನಿಖೆ ನಡೆಯಬೇಕಿದೆ. ಎನ್ಕೌಂಟರ್ ಪ್ರಕರಣದಲ್ಲಿ ಪೊಲೀಸರು ನ್ಯಾಯೋಚಿತ ಮತ್ತು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು ಎಂದು ಹೇಳಿದೆ.
ಪ್ರಕರಣದಲ್ಲಿ ನಡೆದ ಎನ್ಕೌಂಟರ್ ವಿಭಿನ್ನವಾಗಿದೆ. ಇದನ್ನು ಬರಿಯ ಎನ್ಕೌಂಟರ್ ಎಂದು ಕರೆಯಲಾಗದು. ಶೂಟ್ಔಟ್ ರೀತಿಯಲ್ಲಿದೆ. ಸಂಬಂಧಿತ ಪೊಲೀಸ್ ಅಧಿಕಾರಿ ವಿರುದ್ಧವೂ ಪ್ರಕರಣ ದಾಖಲಿಸಬೇಕು. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಸಲ್ಲಿಸಿ. ಪಾಯಿಂಟ್ ಬ್ಲಾಕ್ನಲ್ಲಿ ಶೂಟೌಟ್ ಮಾಡಲಾಗಿದೆಯೇ ಎಂದು ಪೀಠ ಪ್ರಶ್ನಿಸಿತು.
ಆರೋಪಿ ಶಿಂಧೆಯು ಪೊಲೀಸ್ ಅಧಿಕಾರಿಯಿಂದ ಪಿಸ್ತೂಲ್ ಕಸಿದುಕೊಂಡ ಎಂದು ನಂಬಲು ಕಷ್ಟ. ಕಾರಣ ಪೊಲೀಸರ ಪಿಸ್ತೂಲ್ ಅನ್ನು ಲಾಕ್ ಮಾಡಲಾಗಿರುತ್ತದೆ. ಅದನ್ನು ಅನ್ಲಾಕ್ ಮಾಡಿ ಗುಂಡು ಹಾರಿಸುವುದು ಆರೋಪಿಗಳಿಗೆ ಕಷ್ಟದ ಕೆಲಸ. ಹೀಗಾಗಿ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು. ಇಲ್ಲವಾದಲ್ಲಿ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಕೋರ್ಟ್ ಹೇಳಿ, ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿತು.