ಕರ್ನಾಟಕ

karnataka

By ETV Bharat Karnataka Team

Published : 4 hours ago

ETV Bharat / bharat

ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾ ಹತ್ಯೆ ಖಂಡಿಸಿ ಚುನಾವಣಾ ಪ್ರಚಾರ ನಿಲ್ಲಿಸಿದ ಮೆಹಬೂಬಾ ಮುಫ್ತಿ - Mehbooba Mufti

ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆ ಖಂಡಿಸಿ ಮೆಹಬೂಬಾ ಮುಫ್ತಿ ಒಂದು ದಿನ ಚುನಾವಣಾ ಪ್ರಚಾರ ಸ್ಥಗಿತಗೊಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ (IANS)

ಶ್ರೀನಗರ:ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಭಾನುವಾರ (ಸೆಪ್ಟಂಬರ್ 29, 2024) ಒಂದು ದಿನ ತಮ್ಮ ಚುನಾವಣಾ ಪ್ರಚಾರವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಲೆಬನಾನ್​​ನಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆಯನ್ನು ಖಂಡಿಸಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

"ಲೆಬನಾನ್ ಮತ್ತು ಗಾಜಾದ ಹುತಾತ್ಮರಿಗೆ, ವಿಶೇಷವಾಗಿ ಹಸನ್ ನಸರುಲ್ಲಾ ಅವರಿಗೆ ಬೆಂಬಲವಾಗಿ ನಾಳೆ ನನ್ನ ಪ್ರಚಾರ ಕಾರ್ಯಕ್ರಮಗಳನ್ನು ರದ್ದುಗೊಳಿಸುತ್ತಿದ್ದೇನೆ. ಅಪಾರ ದುಃಖ ಮತ್ತು ಪ್ರತಿರೋಧದ ಈ ಸಮಯದಲ್ಲಿ ನಾವು ಪ್ಯಾಲೆಸ್ಟೈನ್ ಮತ್ತು ಲೆಬನಾನ್ ಜನರ ಬೆಂಬಲಕ್ಕೆ ನಿಲ್ಲುತ್ತೇವೆ" ಎಂದು ಮುಫ್ತಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಏತನ್ಮಧ್ಯೆ, ನಸ್ರಲ್ಲಾ ಹತ್ಯೆಯನ್ನು ಖಂಡಿಸಿ ಶನಿವಾರ (ಸೆಪ್ಟಂಬರ್ 28, 2024) ಇಲ್ಲಿನ ಹಲವಾರು ಭಾಗಗಳಲ್ಲಿ ಇಸ್ರೇಲ್ ವಿರೋಧಿ ಪ್ರತಿಭಟನೆಗಳು ನಡೆದಿವೆ. ನಗರದ ಹಸನಾಬಾದ್, ರೈನಾವರಿ, ಸೈದಕಡಲ್, ಮೀರ್ ಬೆಹ್ರಿ ಮತ್ತು ಆಶೈಬಾಗ್ ಪ್ರದೇಶಗಳಲ್ಲಿ ಮಕ್ಕಳು ಸೇರಿದಂತೆ ದೊಡ್ಡ ಸಂಖ್ಯೆಯ ಜನರು ಕಪ್ಪು ಬಾವುಟಗಳನ್ನು ಹಿಡಿದು ರಸ್ತೆಗಳಲ್ಲಿ ಜಮಾಯಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೆಬನಾನ್ ಮೂಲದ ಉಗ್ರಗಾಮಿ ಗುಂಪಿನ ಉನ್ನತ ನಾಯಕನ ಹತ್ಯೆಯನ್ನು ಖಂಡಿಸಿದ ಪ್ರತಿಭಟನಾಕಾರರು ಇಸ್ರೇಲ್ ಮತ್ತು ಯುಎಸ್ ವಿರೋಧಿ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಗಳು ಶಾಂತಿಯುತವಾಗಿ ನಡೆದಿವೆ. ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದ ಶ್ರೀನಗರದ ಲೋಕಸಭಾ ಸದಸ್ಯ ಆಗಾ ರುಹುಲ್ಲಾ ಕೂಡ ನಸ್ರಲ್ಲಾ ಹತ್ಯೆಯನ್ನು ಖಂಡಿಸಿ ತಮ್ಮ ಪ್ರಚಾರವನ್ನು ಸ್ಥಗಿತಗೊಳಿಸಿದ್ದಾರೆ.

ಹಿಂದಿನ ದಿನ ಬೈರುತ್​ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸಂಘಟನೆಯ ಸ್ಥಾಪಕರಲ್ಲಿ ಒಬ್ಬರಾದ ನಸ್ರಲ್ಲಾ ಕೊಲ್ಲಲ್ಪಟ್ಟಿದ್ದಾರೆ ಎಂದು ಹಿಜ್ಬುಲ್ಲಾ ಶನಿವಾರ ದೃಢಪಡಿಸಿದೆ. ನಸ್ರಲ್ಲಾ ಹುತಾತ್ಮರೊಂದಿಗೆ ಸೇರಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಶತ್ರುಗಳ ವಿರುದ್ಧ ಮತ್ತು ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಿ ಪವಿತ್ರ ಯುದ್ಧವನ್ನು ಮುಂದುವರಿಸುವುದಾಗಿ ಹಿಜ್ಬುಲ್ಲಾ ಇದೇ ಸಂದರ್ಭದಲ್ಲಿ ಪ್ರತಿಜ್ಞೆ ಮಾಡಿದೆ. ಕಳೆದ ಕೆಲವು ದಿನಗಳಿಂದ ಇಸ್ರೇಲ್ ಲೆಬನಾನ್ ಮೇಲೆ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದ್ದು, ಇದರ ಪರಿಣಾಮವಾಗಿ 800ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಸ್ಥಳಾಂತರಗೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್​ಗಾಗಿ ದಲಿತರು ಮತ ವ್ಯರ್ಥ ಮಾಡಿಕೊಳ್ಳಬೇಡಿ: ಹರಿಯಾಣ, ಕಾಶ್ಮೀರದ ಜನತೆಗೆ ಮಾಯಾವತಿ ಮನವಿ - BSP Chief Mayawati Appeal

ABOUT THE AUTHOR

...view details