ಕರ್ನಾಟಕ

karnataka

By ETV Bharat Karnataka Team

Published : 14 hours ago

ETV Bharat / bharat

ಬಿಹಾರದಲ್ಲಿ ಪವಿತ್ರ ಸ್ನಾನದ ವೇಳೆ ದುರಂತ: ನೀರಿನಲ್ಲಿ ಮುಳುಗಿ 40 ಮಂದಿ ಸಾವು - Bihar Tragedy

ಬಿಹಾರದಲ್ಲಿ ಪವಿತ್ರ ಸ್ನಾನದ ವೇಳೆ ದುರಂತ ಸಂಭವಿಸಿದ್ದು, 40 ಮಂದಿ ಸಾವನ್ನಪ್ಪಿದ್ದಾರೆ. ಔರಂಗಾಬಾದ್‌ನಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿದ್ದು, ಒಟ್ಟು ಸಾವುಗಳ ಪೈಕಿ ಮಕ್ಕಳ ಸಂಖ್ಯೆಯೇ ಅಧಿಕವಾಗಿದೆ.

40 people died in 14 districts of Bihar during bathing on Jitiya Vrat
ಪಾಟ್ನಾದಲ್ಲಿ ಗಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ದೋಣಿಗಳ ಮೂಲಕ ಸುರಕ್ಷಿತ ಸ್ಥಳಗಳತ್ತ ಸ್ಥಳಾಂತರಗೊಳ್ಳುತ್ತಿರುವ ಗ್ರಾಮಸ್ಥರು. (ANI)

ಪಾಟ್ನಾ (ಬಿಹಾರ):ಮಕ್ಕಳ ಆರೋಗ್ಯ, ವಿದ್ಯೆ, ಉತ್ತಮ ಭವಿಷ್ಯಕ್ಕಾಗಿ ತಾಯಂದಿರು ಕೈಗೊಳ್ಳುವ ಜೀವಿತ ಪುತ್ರಿಕಾ (Jitiya Festival) ವೃತದ ಅಂತ್ಯದಲ್ಲಿ ಭಾರಿ ದುರ್ಘಟನೆ ನಡೆದಿದೆ. ಉಪವಾಸ ಕುಳಿತು ಬಳಿಕ ಮಾಡುವ ಪುಣ್ಯ ಸ್ನಾನದ ವೇಳೆ ಒಟ್ಟು 40 ಮಂದಿ ಮೃತಪಟ್ಟ ಘಟನೆ ಬಿಹಾರ ರಾಜ್ಯದಲ್ಲಿ ನಡೆದಿದೆ.

ವಿವಿಧ ಜಿಲ್ಲೆಗಳಿಂದ ಒಟ್ಟಾರೆ 40 ಮಂದಿ ಸಾವು:ಬೇರೆ ಬೇರೆ ಜಿಲ್ಲೆಗಳಲ್ಲಿ ಈ ದುರಂತ ಸಂಭವಿಸಿದ್ದು, 40 ಮಂದಿ ಮೃತಪಟ್ಟರೆ ಮೂವರು ನಾಪತ್ತೆಯಾಗಿದ್ದಾರೆ. ಮೃತರ ಪೈಕಿ ಮಕ್ಕಳೇ ಹೆಚ್ಚಾಗಿದ್ದಾರೆ. ಔರಂಗಾಬಾದ್‌ನಲ್ಲಿ 10, ಇಥಾತ್ ಹಳ್ಳಿಯಿಂದ 5, ಮದನ್‌ಪುರ ಬ್ಲಾಕ್‌ನ ಕುಶಾಹ ಗ್ರಾಮದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. 14 ಜಿಲ್ಲೆಗಳಲ್ಲಿ ಈ ರೀತಿಯ ಅವಘಡ ಸಂಭವಿಸಿದೆ.

ಸಿಎಂ ಸಂತಾಪ:ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಪ್ರತಿ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಯಾವ್ಯಾವ ಜಿಲ್ಲೆಗಳಿಂದ ಸಾವಿನ ವರದಿ:ಪೂರ್ವ ಚಂಪಾರಣ್‌, ನಳಂದ, ಔರಂಗಬಾದ್, ಕೈಮೂರ್, ಬುಕ್ಸಾರ್, ಸಿವಾನ್, ರೋಹ್ಟಾಸ್, ಸರನ್, ಪಾಟ್ನಾ, ವೈಶಾಲಿ, ಮುಝಾಫರಪುರ್, ಸಮಸ್ತಿಪುರ್, ಗೋಪಾಲ್‌ಗಂಜ್, ಬೇಗುಸರಾಯ್‌ ಹಾಗೂ ಅರ್ವಾಲ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ.

ಕೈಮೂರ್‌ನ ವಿವಿಧಡೆ ನಾಲ್ವರು ಯುವಕರು ಸೇರಿದಂತೆ ಏಳು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ರುಪ್ಪುರ್ ಗ್ರಾಮದವಾರದ ಕಿಶನ್ ಕುಮಾರ್ (16), ಸತ್ಯಂ ಕುಮಾರ್ (16), ಅಭೈಡೆ ಗ್ರಾಮದ ಸುಮಿತ್ ಕುಮಾರ್ (15), ದಾದರ್ ಗ್ರಾಮದ ಆನಂದ್ ಗುಪ್ತಾ (15), ತರ್ಹಾನಿ ಗ್ರಾಮದ ರೋಹನ್ ಬಿಂದ್ (10), ಕಲ್ಯಾಣಪುರ ಗ್ರಾಮದ ಅನ್ಮೋಲ್ ಗುಪ್ತಾ (8) ಮೃತ ದೈರ್ದೈವಿಗಳೆಂದು ಗುರುತಿಸಲಾಗಿದೆ. ಸರನ್ ಜಿಲ್ಲೆಯ ಛಪ್ರಾದಲ್ಲಿ ಬುಧವಾರ ಐವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ಪಾಟ್ನಾದಲ್ಲಿ ಹಬ್ಬದ ವೇಳೆ ನೀರಿನಲ್ಲಿ ಮುಳುಗಿ 4 ಮಹಿಳೆಯರು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಬುಧವಾರ ಸಂಜೆ ಹಲ್ಕೋರಿಯಾ ಚಾಕ್ ಗ್ರಾಮದಲ್ಲಿ ಸ್ನಾನಕ್ಕೆ ಹೋಗಿದ್ದ ನಾಲ್ವರು ಯುವತಿಯರು ನೀರಿನ ರಭಸಕ್ಕೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಅವರ ಮೃತದೇಹ ಕೂಡ ಪತ್ತೆಯಾಗಿವೆ. ಈ ಘಟನೆಗೂ ಮುನ್ನ ರಾಜಾಚಕ್ ಗ್ರಾಮದ ಯುವಕನೊಬ್ಬ ಡಿಯೋರಿಯಾ ಸೇತುವೆ ಬಳಿಯ ಪನ್‌ಪುನ್ ನದಿಗೆ ಜಾರಿ ಮುಳುಗಿ ಅಸುನೀಗಿದ್ದಾನೆ. ಮಂಗಳವಾರ ಬೆಳಗ್ಗೆ ಈತನ ಮೃತದೇಹ ಪತ್ತೆಯಾಗಿದೆ.

ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗರೀಬಾ ಪಂಚಾಯತ್‌ನ ಕುಟುಂಬವೊಂದು ಪುನ್ಯ ಸ್ನಾನಕ್ಕೆ ತೆರಳಿದ್ದಾಗ ಮಕ್ಕಳು ಕಾಲುಜಾರಿ ಸೋಮಾವತಿ ನದಿಗೆ ಬಿದ್ದಿದ್ದಾರೆ. ಅದೇ ದಿನ ವೃಂದಾವನ ಪಂಚಾಯತ್‌ನಲ್ಲಿ ನೀರು ತುಂಬಿದ ಹೊಂಡದಲ್ಲಿ ಮುಳುಗಿ ತಾಯಿ - ಮಗಳು ಮೃತಪಟ್ಟ ವರದಿ ಕೂಡ ಆಗಿದೆ. ಮತ್ತೊಂದೆಡೆ ಮಗುವೊಂದು ಹರ್ಸಿದ್ಧಿ ಪೊಲೀಸ್ ಠಾಣೆ ವ್ಯಾಪ್ತಿಯ ವಿಶುನ್‌ಪುರವಾ ಕೊಳದಲ್ಲಿ ಮೃತಪಟ್ಟರೆ, ಪಶ್ಚಿಮ ಚಂಪಾರಣ್‌ನಲ್ಲಿ ಮೂವರು ಅದೇ ರೀತಿ ಪ್ರಾಣ ಕಳೆದುಕೊಂಡಿದ್ದಾರೆ. ರೋಹ್ತಾಸ್ ಜಿಲ್ಲೆಯ ಡೆಹ್ರಿಯಲ್ಲಿ ಸೋನ್ ನದಿಯಲ್ಲಿಯೂ ಸಹ ಮುಳುಗಿ ಮೂವರು ಮೃತಪಟ್ಟ ವರದಿಯಾಗಿದೆ.

ಬೇಗುಸರಾಯ್‌ನಲ್ಲಿ ಬುಧವಾರ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು 18 ಗಂಟೆಗಳ ಸುದೀರ್ಘ ಶೋಧದ ನಂತರ ಅವರ ಮೃತದೇಹಗಳನ್ನು ಹೊರತೆಗೆಯಲಾಯಿತು. ಚಕಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾ ಘಾಟ್‌ನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಶಿವಸ್ಥಾನ ಗ್ರಾಮದ ಭೋಲಾ ಸಿಂಗ್ ಅವರ ಪುತ್ರ ಕನ್ಹಯ್ಯಾ ಕುಮಾರ್ (14) ಮತ್ತು ಬೆಹತ್ ಮುನ್ಸಿಪಲ್ ಕೌನ್ಸಿಲ್‌ನ ವಿಜಯ್ ಜೈಸ್ವಾಲ್ ಅವರ ಪುತ್ರ ರಿಷಬ್ ಕುಮಾರ್ ಎಂದು ಗುರುತಿಸಲಾಗಿದೆ.

ಬೈಕ್​ ಅಪಘಾತದಲ್ಲಿ ಒಂದೇ ಗ್ರಾಮದ ಮೂವರ ದಾರುಣ ಸಾವು: ಬೈಕ್ ಅಪಘಾತದಲ್ಲಿ ಒಂದೇ ಗ್ರಾಮದ ಮೂವರು ಯುವಕರು ದಾರುಣವಾಗಿ ಮೃತಪಟ್ಟ ಮತ್ತೊಂದು ಘಟನೆ ಜಿಲ್ಲೆಯ ಸರೀಬಾದ್ ಗ್ರಾಮದಲ್ಲಿ ಬುಧವಾರ ನಡೆದಿದೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬ ಚಿಕಿತ್ಸೆಗಾಗಿ ಪಾಟ್ನಾಗೆ ಕರೆದೊಯ್ಯುತ್ತಿದ್ದಾಗ ಸಾವನ್ನಪ್ಪಿದ್ದಾನೆ. ಸರೆಬಾದ್ ಗ್ರಾಮದ ಮನೋಜ್ ಯಾದವ್ ಅವರ ಪುತ್ರ ಬಿಟ್ಟು ಕುಮಾರ್, ವಕೀಲ ಯಾದವ್ ಅವರ ಪುತ್ರ ಬಿಕ್ಕಿ ಕುಮಾರ್ ಸ್ಥಳದಲ್ಲೇ ಮೃತಪಟ್ಟರೆ, ಜನಾರ್ದನ್ ಯಾದವ್ ಅವರ 15 ವರ್ಷದ ಮಗ ನೀರಜ್ ಕುಮಾರ್ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸರಾಬಾದ್ ಗ್ರಾಮದ ಮೂವರೂ ಯುವಕರು ಒಂದೇ ಬೈಕ್‌ನಲ್ಲಿ ಜಮುಯಿ ಕಡೆಗೆ ಹೋಗುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ.

ಮೂರು ದಿನಗಳ ಹಬ್ಬ ಇದಾಗಿದ್ದು ಈ ಸಂದರ್ಭದಲ್ಲಿ ಮಹಿಳೆಯರು ತಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ಉಪವಾಸ ಮಾಡುತ್ತಾರೆ. ಬಳಿಕ ನದಿ, ಕೊಳ, ಅಥವಾ ಇತರೆ ಜಲಮೂಲಗಳಲ್ಲಿ ಸಾಮೂಹಿಕ ಪವಿತ್ರ ಸ್ನಾನ ಮಾಡುತ್ತಾರೆ. ಈ ಪವಿತ್ರ ಸ್ನಾನದ ವೇಳೆ ದುರಂತ ಸಂಭವಿಸಿದೆ. ಬುಧವಾರ ನಡೆದ ಉತ್ಸವದಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ ಈ ಘಟನೆಗಳು ಸಂಭವಿಸಿದೆ. ಕೆಲವರು ನಾಪತ್ತೆಯಾದ ವರದಿ ಕೂಡ ಇದೆ. ಘಟನೆ ಕುರಿತು ಬಿಹಾರ ಸರ್ಕಾರ ತನಿಖೆಗೆ ಆದೇಶಿಸಿದೆ. ಹಲವು ಜಿಲ್ಲೆಗಳಲ್ಲಿ ಈ ರೀತಿಯ ಘಟನೆ ಸಂಭವಿಸಿದೆ. ಹೀಗಾಗಿ ಈ ದುರಂತದ ಕುರಿತು ತನಿಖೆಯ ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಚ್ಚರಿಯಾದ್ರೂ ನಿಜ; ಜಾಗತಿಕವಾಗಿ ಪ್ರತಿ ಗಂಟೆಗೆ 26 ಮಂದಿ ನೀರಿನಲ್ಲಿ ಮುಳುಗಿ ಸಾವು! - WORLD DROWNING PREVENTION DAY

ABOUT THE AUTHOR

...view details