ಕರ್ನಾಟಕ

karnataka

ಕೇದಾರನಾಥದಲ್ಲಿ ಭೂಕುಸಿತ: ಐವರು ಯಾತ್ರಾರ್ಥಿಗಳ ಸಾವು, ಮೂವರಿಗೆ ಗಾಯ - landslide in kedarnath

By ETV Bharat Karnataka Team

Published : Sep 10, 2024, 5:33 PM IST

ಉತ್ತರಾಖಂಡದ ಕೇದಾರನಾಥದಲ್ಲಿ ಉಂಟಾದ ಭೂಕುಸಿತದಲ್ಲಿ ಸಾವನ್ನಪ್ಪಿದರ ಸಂಖ್ಯೆ 5ಕ್ಕೆ ಏರಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಕೇದಾರನಾಥದಲ್ಲಿ ಭೂಕುಸಿತ
ಕೇದಾರನಾಥದಲ್ಲಿ ಭೂಕುಸಿತ (ETV Bharat)

ರುದ್ರಪ್ರಯಾಗ (ಉತ್ತರಾಖಂಡ):ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯಕ್ಕೆ ಮತ್ತೊಂದು ದುರಂತ ಸಂಭವಿಸಿದೆ. ಕೇದಾರನಾಥ ಮಾರ್ಗದ ಗೌರಿಕುಂಡ ಎಂಬಲ್ಲಿ ಸೋಮವಾರ ಸಂಜೆ ಭೂಕುಸಿತ ಉಂಟಾಗಿ ಐವರು ಯಾತ್ರಾರ್ಥಿಗಳು ಸಾವಿಗೀಡಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಇನ್ನಷ್ಟು ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಸೋಮವಾರ ಸಂಜೆ ವೇಳೆ ಯಾತ್ರಾರ್ಥಿಗಳ ತಂಡ ಕೇದಾರನಾಥದಿಂದ ಗೌರಿಕುಂಡದ ಕಡೆಗೆ ಬರುತ್ತಿದ್ದಾಗ ಸೋನಪ್ರಯಾಗದಿಂದ 1 ಕಿಮೀ ದೂರದಲ್ಲಿ ಗುಡ್ಡಕುಸಿತ ಉಂಟಾಗಿದೆ. ಯಾತ್ರಾರ್ಥಿಗಳ ಮೇಲೆ ಗುಡ್ಡ ಜಾರಿದ್ದರಿಂದ ಹಲವರು ಅವಶೇಷಗಳಡಿ ಮಣ್ಣಾಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್​ಡಿಆರ್​ಎಫ್​) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್​​) ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ.

ಸೋಮವಾರ ಸಂಜೆ ಇಬ್ಬರ ಶವಗಳನ್ನು ಹೊರತೆಗೆಯಲಾಗಿತ್ತು. ಇಂದು ಮೂವರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ನಿನ್ನೆ ಸೋಮವಾರ ಸಂಜೆ ಮಳೆ ಮತ್ತು ಗುಡ್ಡಜರಿತ ಮುಂದುವರಿದಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಜೊತೆಗೆ ಹೆದ್ದಾರಿಯನ್ನೂ ಬಂದ್​ ಮಾಡಲಾಗಿತ್ತು. ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಬೆಳಗ್ಗೆ ಹವಾಮಾನ ನಿಚ್ಚಳವಾಗಿ ಗುಡ್ಡದಿಂದ ಕಲ್ಲುಗಳು ಬೀಳುವುದು ನಿಂತ ಬಳಿಕ, ರಕ್ಷಣಾ ತಂಡಗಳು ಕಾರ್ಯಾಚರಣೆ ಪ್ರಾರಂಭಿಸಿದವು. ಈ ವೇಳೆ, ಸ್ಥಳದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷನನ್ನು ಪತ್ತೆ ಮಾಡಿದರು. ವೈದ್ಯರು ತಪಾಸಣೆ ನಡೆಸಿದ ಬಳಿಕ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ಮೃತರನ್ನು ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ನೇಪಾಳದ ಯಾತ್ರಾರ್ಥಿಗಳು ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ, ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್​​ ಸಿಂಗ್​ ಧಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಬೇಕಾದ ಅಗತ್ಯ ಕ್ರಮಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸಾ ವ್ಯವಸ್ಥೆಗೂ ನಿರ್ದೇಶಿಸಿದ್ದಾರೆ.

ಇದನ್ನು ಓದಿ;ಉತ್ತರಾಖಂಡ​ದಲ್ಲಿ ಮಳೆ ಅಬ್ಬರ: ಕೇದಾರನಾಥದಲ್ಲಿ 700ಕ್ಕೂ ಹೆಚ್ಚು ಯಾತ್ರಾರ್ಥಿಗಳ ಸ್ಥಳಾಂತರ - Heavy rain in Uttarakhand

ABOUT THE AUTHOR

...view details