ಮುಂಬೈ: ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಠಾಕ್ರೆ ಕುಟುಂಬದ ಮತ್ತೊಂದು ಕುಡಿ ಎಂಟ್ರಿಯಾಗಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಅಧ್ಯಕ್ಷ ರಾಜ್ ಎಸ್ ಠಾಕ್ರೆ ಅವರು ತಮ್ಮ ಪುತ್ರ ಅಮಿತ್ (32) ಅವರನ್ನು ಮಾಹಿಮ್ ವಿಧಾನಸಭಾ ಕ್ಷೇತ್ರದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ.
ಮರಾಠಿಗರ ಭದ್ರಕೋಟೆಯಾಗಿರುವ ಮಾಹಿಮ್ ಕ್ಷೇತ್ರದಲ್ಲಿ ಎಂಎನ್ಎಸ್ನ ಹಿರಿಯ ನಾಯಕ ನಿತಿನ್ ಸರದೇಸಾಯಿ 2009 ರಲ್ಲಿ ಗೆದ್ದಿದ್ದರು. ನಂತರ 2014 ಮತ್ತು 2019 ರಲ್ಲಿ (ಅವಿಭಜಿತ) ಶಿವಸೇನೆಯ ಸದಾನಂದ ಎಸ್ ಸರ್ವಾಂಕರ್ ವಿರುದ್ಧ ಇವರು ಸೋತರು. ಈಗಾಗಲೇ ಮೂರು ಬಾರಿ ಶಾಸಕರಾಗಿರುವ ಆಡಳಿತಾರೂಢ ಶಿವಸೇನೆ ಮೈತ್ರಿಕೂಟದ ಹಾಲಿ ಶಾಸಕ ಸರ್ವಾಂಕರ್ (ದಾದರ್ನಿಂದ ಒಮ್ಮೆ ಮತ್ತು ಮಾಹಿಮ್ನಿಂದ ಎರಡು ಬಾರಿ) ಮತ್ತೆ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈಗ ಠಾಕ್ರೆ ಉತ್ತರಾಧಿಕಾರಿಯು ಕಣಕ್ಕೆ ಧುಮುಕಿರುವುದರಿಂದ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಎದುರಾಗಿದೆ.
ಒಂದು ಕಾಲದಲ್ಲಿ ಠಾಕ್ರೆ ಕುಟುಂಬಸ್ಥರು ನೇರವಾಗಿ ಯಾವತ್ತೂ ರಾಜಕೀಯಕ್ಕೆ ಇಳಿದಿರಲಿಲ್ಲ. ಆದರೆ ಬಾಳಾಸಾಹೇಬ ಠಾಕ್ರೆ ಅವರ ನಂತರ ಅವರ ಪುತ್ರ ಉದ್ಧವ್ ಠಾಕ್ರೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದರು. ಈಗ ಅಮಿತ್ ಅವರು ರಾಜಕೀಯ ಪ್ರವೇಶಿಸಿದ ಠಾಕ್ರೆ ಕುಟುಂಬದ ನಾಲ್ಕನೇ ಸದಸ್ಯರಾಗಿದ್ದಾರೆ.