ಕರ್ನಾಟಕ

karnataka

ETV Bharat / bharat

ಮಹಾಕುಂಭಮೇಳದ ಕೊನೆಯ ದಿನ ಖಗೋಳ ವಿಸ್ಮಯ : ಸಪ್ತ ಗ್ರಹಗಳು ಒಂದೇ ಸಾಲಿನಲ್ಲಿ ಗೋಚರ - MAHA KUMBH

ಮಹಾಕುಂಭಮೇಳವು ಮಹಾಶಿವರಾತ್ರಿಯಂದು ಕೊನೆಗೊಳ್ಳಲಿದೆ. ಅಂದು ಸೌರವ್ಯೂಹದಲ್ಲಿ ಮಹತ್ತರ ವಿಸ್ಮಯ ಜರುಗಲಿದೆ.

ಸಪ್ತ ಗ್ರಹಗಳು ಒಂದೇ ಸಾಲಿನಲ್ಲಿ ಗೋಚರ
ಸಪ್ತ ಗ್ರಹಗಳು ಒಂದೇ ಸಾಲಿನಲ್ಲಿ ಗೋಚರ (GETTY IMAGES)

By ETV Bharat Karnataka Team

Published : Feb 23, 2025, 10:53 PM IST

ಪ್ರಯಾಗರಾಜ್ (ಉತ್ತರ ಪ್ರದೇಶ) :ಸನಾತನಿಗಳ ಬೃಹತ್​ ಧಾರ್ಮಿಕ ಉತ್ಸವ ಮಹಾ ಕುಂಭಮೇಳಕ್ಕೆ ನಾಲ್ಕೇ ದಿನ ಬಾಕಿ ಉಳಿದಿದೆ. ತ್ರಿವೇಣಿ ಸಂಗಮದಲ್ಲಿ ಭಕ್ತರ ದಂಡು ಸೇರುತ್ತಲೇ ಇದೆ. ಫೆಬ್ರವರಿ 26ರ ಮಹಾಶಿವರಾತ್ರಿಯಂದು ಅಮೃತ ಸ್ನಾನಕ್ಕೆ ರಾಜ್ಯ ಸರ್ಕಾರ ಸಿದ್ಧತೆಗಳನ್ನು ಪ್ರಾರಂಭಿಸಿದೆ.

ಅಂದಿನ ಪುಣ್ಯದಿನದಂದು, ಏಳು ಗ್ರಹಗಳು ಒಂದೇ ಪಥದಲ್ಲಿ ಕಾಣಿಸಲಿವೆ. ಅಪರೂಪದ ಆಕಾಶ ವಿಸ್ಮಯವು ಅಂದು ಜರುಗಲಿದೆ. ಅಸಾಧಾರಣ ಖಗೋಳ ವಿದ್ಯಮಾನದ ಮೂಲಕ ಮಹಾಕುಂಭವೂ ಸಂಪನ್ನವಾಗಲಿದೆ.

ಜನವರಿ 13 ರಿಂದ ಆರಂಭವಾಗಿರುವ ಮಹಾಕುಂಭ ಮೇಳದಲ್ಲಿ ಇಲ್ಲಿಯವರೆಗೆ 60 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಫೆಬ್ರವರಿ 26 ರಂದು ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಒಟ್ಟಿಗೆ ಒಂದೇ ಪಥದಲ್ಲಿ ಬರಲಿವೆ. ಈ ವಿದ್ಯಮಾನವು ಆಧ್ಯಾತ್ಮಿಕ ಉತ್ಸವಕ್ಕೆ ಮತ್ತಷ್ಟು ವಿಶೇಷ ಮೆರುಗು ನೀಡಲಿದೆ. ಈ ಖಗೋಳ ವಿಸ್ಮಯವು ನಕಾರಾತ್ಮಕ ಗ್ರಹಗಳ ಪ್ರಭಾವ ಕಡಿಮೆ ಮಾಡಿ, ಜಗತ್ತಿಗೆ ಶಾಂತಿ, ಸಾಮರಸ್ಯ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಮಹಾಶಿವರಾತ್ರಿಯ ಮೇಲೆ ಗ್ರಹಗಳ ಪ್ರಭಾವ :ಜ್ಯೋತಿಷಿ ಆಚಾರ್ಯ ಹರಿಕೃಷ್ಣ ಶುಕ್ಲರು ತಿಳಿಸುವಂತೆ, 'ಜಗತ್ ಸರ್ವಂ ಗ್ರಹಧೀನಂ'. ಅಂದರೆ ಇಡೀ ವಿಶ್ವವು ಗ್ರಹಗಳಿಂದ ನಿಯಂತ್ರಿಸಲ್ಪಡುತ್ತದೆ. ಋಷಿಗಳು, ಸಪ್ತರ್ಷಿಗಳು ಈ ಗ್ರಹಗಳ ಪ್ರಭಾವದ ಬಗ್ಗೆ ವಿವರಿಸಿದ್ದಾರೆ.

ಪ್ರಯಾಗರಾಜ್‌ನಲ್ಲಿ ಮಹಾಕುಂಭ ಮೇಳ ಆರಂಭದಲ್ಲಿ ಸೂರ್ಯ ಮತ್ತು ಚಂದ್ರರು ಮಕರ ರಾಶಿಯಲ್ಲಿ, ಶನಿಯು ಕುಂಭ ರಾಶಿಯಲ್ಲಿ ಮತ್ತು ಗುರುವು ವೃಷಭ ರಾಶಿಯಲ್ಲಿ ಇದ್ದರು. ಇವೆಲ್ಲವೂ ಶುಭ ಸಂಕೇತಗಳು. ಮಹಾಕುಂಭದ ಕೊನೆಯ ಅಮೃತ ಸ್ನಾನದಂದು ಚಂದ್ರ, ಬುಧ, ಸೂರ್ಯ ಮತ್ತು ಶನಿಯು ಕುಂಭ ರಾಶಿಯಲ್ಲಿದ್ದರೆ, ಶುಕ್ರ ಮತ್ತು ರಾಹು ಮೀನ ರಾಶಿಯಲ್ಲಿರುತ್ತಾರೆ. ಗುರುವು ವೃಷಭ ರಾಶಿಯಲ್ಲಿ, ಮಂಗಳ ಮಿಥುನ ರಾಶಿಯಲ್ಲಿರುತ್ತದೆ. ಈ ಜೋಡಣೆಗಳು ಅತ್ಯಂತ ಶುಭವಾಗಿದ್ದು, ನಕಾರಾತ್ಮಕತೆಯು ದೂರವಾಗಲಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.

ನಕಾರಾತ್ಮಕತೆಯ ಅಂತ್ಯ, ಸಕಾರಾತ್ಮಕತೆಯ ಉದಯ :ಜ್ಯೋತಿಷಿಗಳ ಪ್ರಕಾರ, ಸೂರ್ಯ-ಶನಿ ಯೋಗವು ಜಾಗತಿಕ ಶಾಂತಿ ಮತ್ತು ಸಮೃದ್ಧಿಯನ್ನು ತಂದುಕೊಡಲಿದೆ. ಐದು ವರ್ಷಗಳ ಸಂಕಷ್ಟದ ಬಳಿಕ ಜಗತ್ತು ಸಂತಸ ಕಾಣಲಿದೆ. ಮಾರ್ಚ್ 30 ರ ಹೊತ್ತಿಗೆ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಕೊನೆಗೊಳ್ಳುವ ಸಾಧ್ಯತೆಯಿದೆ.

ಫೆಬ್ರವರಿ 26 ರಂದು ಏಳು ಗ್ರಹಗಳು ಒಂದಾಗುತ್ತಿದ್ದಂತೆ, ಮಹಾ ಕುಂಭಕ್ಕೆ ಹಾಜರಾಗುವ ಕೋಟ್ಯಂತರ ಭಕ್ತರು ಹೊಸ ಸಕಾರಾತ್ಮಕತೆಯೊಂದಿಗೆ ಮನೆಗೆ ಮರಳುತ್ತಾರೆ. ಭಾರತದಲ್ಲಿ ಮಾನವೀಯ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಗಳ ಪ್ರಾಬಲ್ಯ ಹೆಚ್ಚಾಗುತ್ತದೆ. ಇದು ಹಿಂಸೆಯನ್ನು ಕಡಿಮೆ ಮಾಡುತ್ತದೆ. ಏಕತೆಯನ್ನು ಬೆಳೆಸುತ್ತದೆ.

ಮಹಾ ಕುಂಭ ಮಹಾಶಿವರಾತ್ರಿಯೊಂದಿಗೆ ಕೊನೆ :ಮಹಾಕುಂಭ ಮೇಳದ ಅವಧಿಯನ್ನು ವಿಸ್ತರಿಸಬೇಕೆ ಎಂಬ ಪ್ರಶ್ನೆಗೆ ಜ್ಯೋತಿಷಿ ಆಚಾರ್ಯ ಹರಿಕೃಷ್ಣ ಶುಕ್ಲ ಅವರು, ಸೂರ್ಯ ದೇವರು ಬ್ರಹ್ಮಾಂಡದ ಆತ್ಮ. ಒಂಬತ್ತು ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತವೆ. ಮಹಾ ಕುಂಭವು ಈ ಗ್ರಹಗಳ ಶಕ್ತಿಗಳೊಂದಿಗೆ ಹೊಂದಿಕೆಯಾಗುತ್ತದೆ. ಅದರ ಶಕ್ತಿಯು ಮಹಾಶಿವರಾತ್ರಿಯವರೆಗೆ ಮಾತ್ರ ಪರಿಣಾಮಕಾರಿಯಾಗಿರುತ್ತದೆ. ಫೆಬ್ರವರಿ 26 ರ ನಂತರ ಮಹಾ ಕುಂಭವನ್ನು ನಿಯಂತ್ರಿಸುವ ವಿಶ್ವ ಶಕ್ತಿಗಳು ಚದುರಿಹೋಗುತ್ತವೆ. ಹೀಗಾಗಿ, ಅವಧಿ ವಿಸ್ತರಣೆ ಬೇಡ ಎಂದಿದ್ದಾರೆ.

ಏನಿದು ಗ್ರಹಗಳ ಜೋಡಣೆ ?ಸೌರವ್ಯೂಹದಲ್ಲಿ ಎಲ್ಲಾ ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತವೆ. ಇವುಗಳು ಒಂದು ಸರಳ ರೇಖೆಯಲ್ಲಿ ಬಂದಾಗ, ಈ ವಿದ್ಯಮಾನವನ್ನು ಗ್ರಹಗಳ ಜೋಡಣೆ ಎಂದು ಕರೆಯಲಾಗುತ್ತದೆ. ಇದು ಶತಮಾನಕ್ಕೊಮ್ಮೆ ಮಾತ್ರ ಸಂಭವಿಸುವ ಅಪರೂಪದ ವಿಸ್ಮಯವಾಗಿದೆ.

ಇದನ್ನೂ ಓದಿ:ಮಹಾ ಕುಂಭಮೇಳ: 75 ಜೈಲುಗಳಲ್ಲಿರುವ ಕೈದಿಗಳಿಗೆ ಗಂಗಾ ನದಿ ನೀರಿನ ಸ್ನಾನ ಭಾಗ್ಯ

ಆರ್ಥಿಕ ಅಭಿವೃದ್ಧಿಗೆ ಸಾಕ್ಷ್ಯಿಯಾದ ಮಹಾ ಕುಂಭಮೇಳ: ಹಲವು ಉದ್ಯೋಗಗಳ ಸೃಷ್ಟಿ- ಹೀಗೆ ಹೇಳುತ್ತಿವೆ ಅಂಕಿ - ಅಂಶಗಳು!

ABOUT THE AUTHOR

...view details