ರಾಜಸ್ಥಾನ:ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ಬರ್ಬರ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ಜಾವೇದ್ ಎಂಬಾತನಿಗೆ ರಾಜಸ್ಥಾನ ಹೈಕೋರ್ಟ್ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಶನಿವಾರ ಅಜ್ಮೇರ್ ಜೈಲಿನಿಂದ ಹೊರ ಬಂದಿದ್ದಾನೆ. ಇಂದು ಬೆಳಗ್ಗೆ 8:15ಕ್ಕೆ ಜೈಲಿನಿಂದ ಹೊರಬಂದ ಜಾವೇದ್, ಮುಖ ಮರೆಸಿಕೊಂಡು ತನ್ನ ಸಹೋದರ ಮೊಹಮ್ಮದ್ ಶಂಶೇರ್ ಜತೆ ಕಾರಿನಲ್ಲಿ ತೆರಳಿದನು.
ಮೊಹಮ್ಮದ್ ಜಾವೇದ್ಗೆ 2 ಲಕ್ಷ ರೂಪಾಯಿ ಮತ್ತು 1 ಲಕ್ಷ ರೂಪಾಯಿಯ ಶ್ಯೂರಿಟಿ ಪಡೆದು, ಅನುಮತಿಯಿಲ್ಲದೆ ಭಾರತದ ಹೊರಗೆ ಪ್ರಯಾಣಿಸದಂತೆ ಮತ್ತು ತನಿಖೆಗೆ ಸಹಕರಿಸುವಂತೆ ಕೆಲವು ಶರತ್ತು ವಿಧಿಸಿ ರಾಜಸ್ಥಾನ ಹೈಕೋರ್ಟ್ ಗುರುವಾರ ಜಾಮೀನು ಆದೇಶ ನೀಡಿತ್ತು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಂಕಜ್ ಭಂಡಾರಿ ಮತ್ತು ನ್ಯಾಯಮೂರ್ತಿ ಪ್ರವೀರ್ ಭಟ್ನಾಗರ್ ಅವರಿದ್ದ ಹೈಕೋರ್ಟ್ನ ವಿಭಾಗೀಯ ಪೀಠ, ಪೂರಕ ಸಾಕ್ಷ್ಯಗಳಿಲ್ಲದ ಕಾರಣ ಕಸ್ಟಡಿಯಲ್ಲಿಡುವ ಅಗತ್ಯವಿಲ್ಲವೆಂದು ತಿಳಿಸಿ ಜಾಮೀನು ಮಂಜೂರು ಮಾಡಿದ್ದರು. ಆದರೆ, ಕೆಲವು ಕಾರಣಗಳಿಂದ ಜೈಲಿನಿಂದ ಬಿಡುಗಡೆಯಾಗಲಿಲಿಲ್ಲ. ಇಂದು ಬೆಳಗ್ಗೆ ಅಜ್ಮೇರ್ ಜೈಲಿನಿಂದ ಹೊರ ಬಂದಿದ್ದಾನೆ. ಕನ್ಹಯ್ಯಾ ಲಾಲ್ ಅವರ ಶಿರಚ್ಛೇದದ ಪ್ರಮುಖ ಶಂಕಿತರೊಂದಿಗೆ ಸಂಚು ರೂಪಿಸಿದ ಆರೋಪ ಜಾವೇದ್ ಮೇಲಿತ್ತು.
ವಾದ-ಪ್ರತಿವಾದ: ಮೊಬೈಲ್ ಲೊಕೇಶನ್ ಮತ್ತು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆತನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೂ, ಕರೆ ವಿವರಗಳ ಆಧಾರದ ಮೇಲೆ ಎನ್ಐಎ ಆತನನ್ನು ಬಂಧಿಸಿದೆ ಎಂದು ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಬಹಳ ದಿನಗಳಿಂದ ಜೈಲಿನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಜಾವೇದ್ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು. ಇವರ ವಾದಕ್ಕೆ ವಿರೋಧಿಸಿದ ಸರ್ಕಾರಿ ವಕೀಲರು, ಆರೋಪಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಅಂಗಡಿಯಲ್ಲಿ ಕನ್ಹಯ್ಯಾಲಾಲ್ ಇರುವ ಬಗ್ಗೆ ಪ್ರಮುಖ ಆರೋಪಿಗೆ ಬಹಳ ಮಾಹಿತಿ ನೀಡಿದ್ದ. ಇಂತಹ ಪರಿಸ್ಥಿತಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗುವಂತಿಲ್ಲ ಎಂದು ವಾದಿಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ, ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತು.