ಕರ್ನಾಟಕ

karnataka

ETV Bharat / bharat

ಸವಾಲು, ಅಪಹಾಸ್ಯ ಮೆಟ್ಟಿ ನಿಂತು ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೇರಿದ ತೃತೀಯಲಿಂಗಿ

ಸಮಾಜದಿಂದ ಹಲವು ರೀತಿಯ ಸವಾಲು, ಅಪಹಾಸ್ಯಗಳನ್ನು ಎದುರಿಸಿದ ತೃತೀಯಲಿಂಗಿ ಸಬ್​ ಇನ್​ಸ್ಪೆಕ್ಟರ್​ ರೋನಿತ್​ ಝಾ ಅವರ ಬೆಂಬಲಕ್ಕೆ ನಿಂತವರು ಅವರ ತಂದೆ ತಾಯಿ. ಇವರ ಬದುಕಿನ ಸ್ಫೂರ್ತಿದಾಯಕ ಕಥೆಯನ್ನು ಮುಂದೆ ಓದಿ.

Bihar transgender sub-inspector Ronit
ಬಿಹಾರದ ತೃತೀಯಲಿಂಗಿ ಸಬ್​ ಇನ್​ಸ್ಪೆಕ್ಟರ್​ ರೋನಿತ್‌ (ETV Bharat)

By ETV Bharat Karnataka Team

Published : 4 hours ago

ಪಾಟ್ನಾ: ಬಿಹಾರ ಸರ್ಕಾರ ಸೋಮವಾರ 1239 ಸಬ್​ ಇನ್​ಸ್ಪೆಕ್ಟರ್​ಗಳನ್ನು ನೇಮಕಗೊಳಿಸಿದ್ದು, ಐತಿಹಾಸಿಕ ಎಂಬಂತೆ ಈ ಪೈಕಿ ಮೂವರು ತೃತೀಯಲಿಂಗಿಗಳಿದ್ದಾರೆ. ತೃತೀಯಲಿಂಗಿಗಳಾದ ರೋನಿತ್​ ಝಾ, ಮಾನ್ವಿ ಮಧು ಕಶ್ಯಪ್​ ಹಾಗೂ ಬಂಟಿ ಕುಮಾರ್​ ಅವರಿಗೆ ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇಮಕಾತಿ ಪತ್ರ ಹಸ್ತಾಂತರಿಸಿದರು.

ಇವರಲ್ಲಿ ರೋನಿತ್​ ಝಾ ಹಾಗೂ ಬಂಟಿ ಕುಮಾರ್ ಇಬ್ಬರೂ ಟ್ರಾನ್ಸ್​ಮೆನ್​ ಆಗಿದ್ದರೆ, ಮಾನ್ವಿ ಮಧು ಕಶ್ಯಪ್​ ಟ್ರಾನ್ಸ್​ವುಮನ್​ ಆಗಿದ್ದಾರೆ. ಸ್ನಾತಕೋತ್ತರ ಶಿಕ್ಷಣದವರೆಗೆ ಹೆಣ್ಣಾಗಿಯೇ ಜೀವಿಸಿ, ನಂತರ ಜಗತ್ತಿಗೆ ತನ್ನ ನಿಜವಾದ ಗುರುತನ್ನು ಬಹಿರಂಗಪಡಿಸಲು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೋನಿತ್​ ಝಾ ಅವರು ತಮ್ಮಂತಹ ಅನೇಕರಿಗೆ ಈಗ ಸ್ಫೂರ್ತಿಯ ಸೆಲೆ.

ವಿದ್ಯಾರ್ಥಿ ನಾಯಕತ್ವದಿಂದ ಪೊಲೀಸ್​ ಅಧಿಕಾರಿಯವರೆಗೆ: ವಿದ್ಯಾರ್ಥಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ರೋನಿತ್​, ಪ್ರಾರಂಭದಲ್ಲಿ ಸ್ವತಂತ್ರವಾಗಿ ನಂತರ NSUI ಬ್ಯಾನರ್​ ಅಡಿಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿದ್ದರು. ಈ ಹಿಂದೆ ಮಾನ್ಸಿ ಝಾ ಆಗಿ ಅಧ್ಯಯನ ಮಾಡುತ್ತಿದ್ದಾಗ ತಮ್ಮ ನಿಜವಾದ ಲಿಂಗದ ಗುರುತಿಸುವಿಕೆಯ ಬಗ್ಗೆ ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಿದ್ದರು. ಮಗಧ್​ ಮಹಿಳಾ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ ಬಳಿಕ ಅವರು ಸಲಹೆಗಾರರಾಗಿ ಕೆಲಸ ಮಾಡಿದರು.

ತಂದೆ ತಾಯಿಗೆ ಏಕೈಕ ಮಗುವಾಗಿದ್ದ ರೋನಿತ್,​ ಸೀತಾಮರ್ಹಿ ಎನ್ನುವ ಪ್ರದೇಶದಲ್ಲಿ ಜನಿಸಿದರು. ಸೀತಾಮರ್ಹಿಯಲ್ಲೇ ತಮ್ಮ ಶಾಲಾ ಶಿಕ್ಷಣ ಪೂರೈಸಿ, ನಂತರ ಪಾಟ್ನಾದಲ್ಲಿ ಉನ್ನತ ಶಿಕ್ಷಣ ಮುಗಿಸಿದರು.

"ಜೀವನದುದ್ದಕ್ಕೂ ನಾನು ಅಗಾಧ ಸವಾಲುಗಳು ಮತ್ತು ಅಪಹಾಸ್ಯವನ್ನು ಅನುಭವಿಸಿದೆ. ಆದರೆ ನನ್ನ ಹೆತ್ತವರು ಸದಾ ನನ್ನ ಬೆಂಬಲಕ್ಕೆ ನಿಂತರು. ನಾನು ಹೆಣ್ಣಾಗಿ ಜೀವಿಸುತ್ತಿದ್ದೆ, ಆದರೆ ಇದು ನನ್ನ ಗುರುತು ಅಲ್ಲ ಎಂದರಿತುಕೊಂಡೆ. ಇದನ್ನು ಎಲ್ಲರಿಗೂ ತಿಳಿಸಬೇಕು ಎನ್ನುವ ನಿಟ್ಟಿನಲ್ಲಿ ನನ್ನ ಕುಟುಂಬಕ್ಕೆ ತಿಳಿಸಿದೆ. ಅವರು ನನ್ನ ಬೆಂಬಲಕ್ಕೆ ನಿಂತರು. ನಂತರ ನಾನು ಟ್ರಾನ್ಸ್​ಮ್ಯಾನ್​ ಎನ್ನುವ ಗುರುತನ್ನು ಸಾರ್ವಜನಿಕವಾಗಿ ಒಪ್ಪಿಕೊಂಡೆ" ಎನ್ನುತ್ತಾರೆ ರೋನಿತ್​.

ಬಿಹಾರದ ತೃತೀಯಲಿಂಗಿ ಸಬ್​ ಇನ್​ಸ್ಪೆಕ್ಟರ್​ ರೋನಿತ್‌ (ETV Bharat)

"ನನ್ನ ನಿಜವಾದ ಗುರುತಿನ ಬಗ್ಗೆ ಬಹಿರಂಗಪಡಿಸಿದಾಗ ಜನರು ನನ್ನನ್ನು ವಿಚಿತ್ರವಾಗಿ ನೋಡಲಾರಂಭಿಸಿದರು. ಜನರ ಮಧ್ಯೆ ಹೋದಾಗ ನಾನು ಅನ್ಯಗ್ರಹದ ಜೀವಿಯಂತಿದ್ದೆ. ಸೀತಾಮರ್ಹಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಾಯಿಗೆ ಅಲ್ಲಿನ ಜನ ಅಪಹಾಸ್ಯ ಮಾಡಿ ಕಿರುಕುಳ ನೀಡಿದ್ದರು. ಜನರು ನೀಡಿದ ಮಾನಸಿಕ ಹಿಂಸೆ ನನ್ನ ಹೆತ್ತವರ ಮೇಲೆ ಪರಿಣಾಮ ಬೀರಿತು. ಸರ್ಕಾರಿ ಕೆಲಸ ಪಡೆಯಲು ಮುಂದಾದಾಗ ನಾನು ಲಿಂಗ ಪರಿವರ್ತನೆ ಮಾಡಿಕೊಂಡಿದ್ದೇನೆ ಎನ್ನುವ ಆರೋಪ ಬಂತು. ಆದರೆ ಹೆತ್ತವರ ಸಹಕಾರದಿಂದ ಎಲ್ಲವನ್ನೂ ಎದುರಿಸಿ ನಿಂತೆ" ಎಂದು ತಮ್ಮ ಹಾದಿಯನ್ನು ವಿವರಿಸಿದರು.

"ನಮ್ಮದು ಮಧ್ಯಮ ವರ್ಗದ ಕುಟುಂಬ. ನನ್ನ ನಿಜವಾದ ಗುರುತನ್ನು ಬಹಿರಂಗಪಡಿಸಿದ ನಂತರ ಆರ್ಥಿಕವಾಗಿ ಸ್ವತಂತ್ರವಾಗಲು, ಸರ್ಕಾರಿ ಕೆಲಸಕ್ಕೆ ತಯಾರಿ ನಡೆಸಲು ಪ್ರಾರಂಭಿಸಿದೆ. ಇದಕ್ಕೂ ನನ್ನ ಕುಟುಂಬ ಸಂಪೂರ್ಣ ಬೆಂಬಲ ನೀಡಿತು. ಅದರ ಫಲವಾಗಿ ನಾನು ಇದೀಗ ಸಬ್​ ಇನ್​ಸ್ಪೆಕ್ಟರ್​ ಆಗಿ ನೇಮಕಾತಿ ಪತ್ರ ಸ್ವೀಕರಿಸಿದ್ದೇನೆ. ಈ ಬಗ್ಗೆ ನನಗೆ ಬಹಳ ಸಂತೋಷವಾಗಿದೆ. ಇದಕ್ಕಾಗಿ ನಾನು ಬಿಹಾರ ಸಿಎಂ ನಿತೀಶ್​ ಕುಮಾರ್​ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಸರ್ಕಾರಿ ಉದ್ಯೋಗಗಳಲ್ಲಿ ತೃತೀಯಲಿಂಗಿಗಳಿಗೂ ಪಾಲು ಇರುವ ರಾಜ್ಯದಲ್ಲಿ ಜೀವಿಸುತ್ತಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ" ಎಂದರು.

"ಎಲ್ಲರೂ ನಾವು ನಮ್ಮದೇ ದೇಹದಲ್ಲಿದ್ದೇವೆ ಎಂದು ಭಾವಿಸುತ್ತಾರೆ. ಆದರೆ ನನಗೆ ಮಾತ್ರ ಶಸ್ತ್ರಚಿಕಿತ್ಸೆ ನಂತರ ನನಗೆ ನನ್ನ ದೇಹವನ್ನು ಮರಳಿ ಪಡೆದ ಅನುಭವವಾಯಿತು. ಇತರ ರಾಜ್ಯಗಳು ಕೂಡ ಬಿಹಾರದಂತೆಯೇ ಈ ಉಪಕ್ರಮವನ್ನು ತೆಗೆದುಕೊಳ್ಳಬೇಕು. ಎಲ್ಲ ಸರ್ಕಾರಗಳು ಸರ್ಕಾರಿ ಉದ್ಯೋಗಗಳಲ್ಲಿ ತೃತೀಯಲಿಂಗಿಗಳಿಗೆ ಮೀಸಲು ಸೀಟುಗಳನ್ನು ಕೊಟ್ಟರೆ, ಇದರಿಂದ ಅವರು ಕೂಡ ಆರ್ಥಿಕವಾಗಿ ಸ್ವತಂತ್ರರಾಗುತ್ತಾರೆ ಮತ್ತು ಸಾಮಾಜಿಕ ಕಳಂಕವನ್ನು ಕೊನೆಗೊಳಿಸಬಹುದು" ಎಂದು ಹೇಳಿದರು.

ಇದನ್ನೂ ಓದಿ:ಬದುಕಿನ ಪಥ ಬದಲಿಸಿದ ತೃತೀಯ ಲಿಂಗಿ; ಅನಂತಪುರದ ಹನ್ನಾ ಸ್ಪೇನ್​ನಲ್ಲಿ ವಿಜ್ಞಾನಿಯಾಗಿ ಬೆಳೆದ ಸ್ಫೂರ್ತಿಯ ಕಥೆ

ABOUT THE AUTHOR

...view details