ಕರ್ನಾಟಕ

karnataka

ETV Bharat / bharat

ಚೀನಾ-ಭಾರತ ನಡುವೆ ಮಹತ್ವದ ಬೆಳವಣಿಗೆ: ಪೂರ್ವ ಲಡಾಖ್‌ನ LAC ಉದ್ದಕ್ಕೂ ಸೇನಾ ಗಸ್ತಿಗೆ ಒಪ್ಪಂದ

ಭಾರತ ಮತ್ತು ಚೀನಾದ ನಡುವೆ ಮಹತ್ವದ ಬೆಳವಣಿಗೆ ನಡೆದಿದೆ. ಬಿಕ್ಕಟ್ಟಿನ ಮೂಲವಾಗಿದ್ದ ಪೂರ್ವ ಲಡಾಖ್​ನ ಎಲ್​ಎಸಿ ಉದ್ದಕ್ಕೂ ಗಸ್ತು ತಿರುಗಲು ಉಭಯ ಸೇನೆಗಳು ಒಪ್ಪಿಕೊಂಡಿವೆ.

ಚೀನಾ- ಭಾರತದ ನಡುವೆ ಮಹತ್ವದ ಬೆಳವಣಿಗೆ
ಭಾರತ- ಚೀನಾ ನಡುವೆ ಮಹತ್ವದ ಬೆಳವಣಿಗೆ (ETV Bharat)

By PTI

Published : 15 hours ago

ನವದೆಹಲಿ:ಭಾರತ ಮತ್ತು ಚೀನಾದ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿದ್ದ ಪೂರ್ವ ಲಡಾಖ್‌ನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಗಸ್ತು ತಿರುಗುವ ಬಗ್ಗೆ ಉಭಯ ರಾಷ್ಟ್ರಗಳು ಸಂಧಾನಕ್ಕೆ ಬಂದಿವೆ. ಎರಡೂ ದೇಶಗಳ ಯೋಧರು ಈ ಭಾಗದಲ್ಲಿ ಗಸ್ತು ತಿರುಗಲು ಒಪ್ಪಂದ ಮಾಡಿಕೊಂಡಿದ್ದಾಗಿ ಕೇಂದ್ರ ಸರ್ಕಾರ ಇಂದು ತಿಳಿಸಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, 2020ರಲ್ಲಿ ಉದ್ಭವಿಸಿದ ಸಮಸ್ಯೆಯಾದ ಪೂರ್ವ ಲಡಾಖ್‌ನ​ ಎಲ್​​ಎಸಿಯಲ್ಲಿ ಗಸ್ತು ತಿರುಗುವ ಬಗ್ಗೆ ಪರಿಹಾರ ಕಂಡುಕೊಳ್ಳಲಾಗಿದೆ. ಕಳೆದ ಕೆಲವು ವಾರಗಳಿಂದ ನಡೆಯುತ್ತಿರುವ ದ್ವಿಪಕ್ಷೀಯ ಸರಣಿ ಮಾತುಕತೆಯು ಫಲಪ್ರದವಾಗಿದೆ. ಎಲ್​​ಎಸಿ ಗಡಿಯಲ್ಲಿ ಗಸ್ತಿಗೆ ಸೇನೆಗಳು ಸಂಧಾನಕ್ಕೆ ಬಂದಿವೆ ಎಂದರು.

ಲಡಾಖ್​​ನ ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಲ್ಲಿ ಗಸ್ತು ತಿರುಗುವುದಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಮಧ್ಯೆ ಬಿಕ್ಕಟ್ಟು ಉಂಟಾಗಿತ್ತು. ಭಾರತ ಮತ್ತು ಚೀನಾದ ರಾಜತಾಂತ್ರಿಕರು ಮತ್ತು ಮಿಲಿಟರಿ ಸಂಧಾನಕಾರರು ಈ ಕುರಿತು ಮಾತುಕತೆ ನಡೆಸಿ, ಒಪ್ಪಂದಕ್ಕೆ ಬಂದಿದ್ದಾಗಿ ತಿಳಿಸಿದರು.

2020ರಿಂದ ಭಾರತ ಮತ್ತು ಚೀನಾದ ಸೇನೆಗಳು ಪೂರ್ವ ಲಡಾಖ್​​ನ ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಲ್ಲಿ ಗಸ್ತಿಗಾಗಿ ಸಂಘರ್ಷ ನಡೆಸಿದ್ದವು. ಜೂನ್​ ತಿಂಗಳಲ್ಲಿ ಗಲ್ವಾನ್ ಕಣಿವೆಯಲ್ಲಿ ಭೀಕರ ಘರ್ಷಣೆಯೂ ನಡೆದಿತ್ತು. ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಇದು ಗಂಭೀರ ಮಿಲಿಟರಿ ಸಂಘರ್ಷಕ್ಕೂ ದಾರಿ ಮಾಡಿಕೊಟ್ಟಿತ್ತು.

ಮೋದಿ ರಷ್ಯಾ ಭೇಟಿಗೂ ಮುನ್ನ ಮಹತ್ವದ ಬೆಳವಣಿಗೆ:ಬ್ರಿಕ್ಸ್​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಕಜಾನ್​ ನಗರಕ್ಕೆ ಅಕ್ಟೋಬರ್​ 22ರಂದು ಪ್ರಯಾಣ ಬೆಳೆಸಲಿದ್ದಾರೆ. ಇದಕ್ಕೂ ಒಂದು ದಿನ ಮೊದಲು ಈ ಮಹತ್ವದ ಬೆಳವಣಿಗೆ ನಡೆದಿದೆ.

ಉಭಯ ರಾಷ್ಟ್ರಗಳ ನಡುವಿನ ಈ ಒಪ್ಪಂದದ ಬಗ್ಗೆ ಅಧಿಕೃತ ಘೋಷಣೆ ಹೊರಬೀಳದಿದ್ದರೂ, ಬ್ರಿಕ್ಸ್​ ಶೃಂಗದಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ನಡುವೆ ನಡೆಯುವ ದ್ವಿಪಕ್ಷೀಯ ಸಭೆಯಲ್ಲಿ ಅಧಿಕೃತ ಪ್ರಕಟಣೆ ನಿರೀಕ್ಷಿಸಲಾಗಿದೆ.

ಚೀನಾದೊಂದಿಗೆ ಸುಮಾರು 75 ಪ್ರತಿಶತದಷ್ಟು ಸಮಸ್ಯೆಗಳು ಬಗೆಹರಿದಿವೆ. ಆದರೆ, ದೊಡ್ಡ ಸಮಸ್ಯೆಯೆಂದರೆ ಗಡಿಯಲ್ಲಿ ಹೆಚ್ಚುತ್ತಿರುವ ಮಿಲಿಟರೀಕರಣ. ಈ ಬಗ್ಗೆ ಮಾತುಕತೆಗಳು ಪ್ರಕ್ರಿಯೆಯಲ್ಲಿವೆ. ಬಿಕ್ಕಟ್ಟು ಪರಿಹರಿಸಿಕೊಳ್ಳಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಇತ್ತೀಚೆಗೆ ಹೇಳಿದ್ದರು.

ಇದನ್ನೂ ಓದಿ:10 ಕೋಟಿ ಸದಸ್ಯತ್ವ ದಾಖಲಿಸಿದ ಬಿಜೆಪಿ, ವರ್ಷಾಂತ್ಯದಲ್ಲಿ 11 ಕೋಟಿ ದಾಟುವ ಗುರಿ

ABOUT THE AUTHOR

...view details