ಶಿಮ್ಲಾ(ಹಿಮಾಚಲ ಪ್ರದೇಶ):ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದ ಕಾಂಗ್ರೆಸ್ನ 6 ಮಂದಿ ಬಂಡಾಯ ಶಾಸಕರು ಮತ್ತು ಮೂವರು ಪಕ್ಷೇತರ ಶಾಸಕರು ಶೀಘ್ರದಲ್ಲೇ ಬಿಜೆಪಿ ಸೇರುವ ನಿರೀಕ್ಷೆ ಇದೆ. ಗುರುವಾರ ರಾತ್ರಿ ಕಾಂಗ್ರೆಸ್ನ 6 ಮಂದಿ ಬಂಡಾಯ ಶಾಸಕರು ಹಾಗೂ 3 ಪಕ್ಷೇತರ ಶಾಸಕರು ದೆಹಲಿಗೆ ಆಗಮಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದರು. ಶಾಸಕರು ನಡ್ಡಾ ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಹಿಮಾಚಲದ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಬಿಂದಾಲ್ ಉಪಸ್ಥಿತರಿದ್ದರು. ಜೆಪಿ ನಡ್ಡಾ ಅವರಿಗಿಂತ ಮೊದಲು, ಈ ಎಲ್ಲ ಶಾಸಕರು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿದ್ದರು.
ಹಿಮಾಚಲ ಬಿಜೆಪಿ ಶಾಸಕಾಂಗ ಪಕ್ಷದ ಸಭೆ:ಇಂದು ಸಂಜೆ ಹಿಮಾಚಲ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಎಲ್ಲಾ ಶಾಸಕರು ಸಭೆಯಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ನ ಆರು ಬಂಡಾಯ ಶಾಸಕರು ಮತ್ತು ಮೂವರು ಪಕ್ಷೇತರ ಶಾಸಕರ ಪಕ್ಷ ಸೇರ್ಪಡೆಯ ಬಗ್ಗೆ ಚರ್ಚೆ ನಡೆಯಲಿದೆ.
ಉಪಚುನಾವಣೆಗೆ ಬಿಜೆಪಿ ಸಜ್ಜು: ಮಾರ್ಚ್ 17 ರಂದು ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯ ಜೊತೆಗೆ ಕೆಲವು ರಾಜ್ಯ ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆಯ ದಿನಾಂಕಗಳನ್ನು ಘೋಷಿಸಿತ್ತು. ಕಾಂಗ್ರೆಸ್ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ ನಂತರ ಹಿಮಾಚಲ ಪ್ರದೇಶದಲ್ಲಿ ಖಾಲಿ ಇದ್ದ 6 ಸ್ಥಾನಗಳೂ ಇದರಲ್ಲಿ ಸೇರಿವೆ. ಈಗ ಬಂಡಾಯ ಶಾಸಕರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಈ ಉಪಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಹಿಮಾಚಲ ಪ್ರದೇಶದ ಉಪಚುನಾವಣೆಗೆ ಜೂನ್ 1 ರಂದು ಲೋಕಸಭಾ ಚುನಾವಣೆಯ ಜೊತೆಗೆ ಮತದಾನ ನಡೆಯಲಿದೆ.
ಮತ್ತೊಂದೆಡೆ, ಕಾಂಗ್ರೆಸ್ 6 ಮಂದಿ ಬಂಡಾಯ ಶಾಸಕರ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ 6ಕ್ಕೆ ನಿಗದಿಪಡಿಸಿದೆ. ಆದರೆ, ಬಿಜೆಪಿಗೆ ಸೇರಿದ ನಂತರ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್ನಿಂದ ತಮ್ಮ ಅರ್ಜಿಯನ್ನು ಹಿಂತೆಗೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದು ಉಪಚುನಾವಣೆ ದಾರಿ ಸುಗಮವಾಗಿಸಲಿದೆ. ಈ 6 ಮಂದಿಯಲ್ಲಿ ಎಷ್ಟು ಜನರನ್ನು ಬಿಜೆಪಿ ಉಪಚುನಾವಣೆಯ ಕಣಕ್ಕಿಳಿಸಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಹಿರಿಯ ಪತ್ರಕರ್ತ ಧನಂಜಯ್ ಶರ್ಮಾ ಅವರ ಪ್ರಕಾರ, " ಜೆ.ಪಿ.ನಡ್ಡಾ ಅವರೊಂದಿಗಿನ ಸಭೆಯ ನಂತರ, ಕಾಂಗ್ರೆಸ್ ಬಂಡಾಯ ಶಾಸಕರು ಯಾವುದೇ ಸಮಯದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗುವು ಖಚಿತವಾಗಿದೆ. ಪಕ್ಷಕ್ಕೆ ಸೇರ್ಪಡೆಗೆ ಸಂಬಂಧಿಸಿದಂತೆ ಎಲ್ಲಾ ಮಾತುಕತೆಗಳು ಈಗಾಗಲೇ ಪೂರ್ಣಗೊಂಡಿವೆ. ಹೀಗಾಗಿ ಕಾಂಗ್ರೆಸ್ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್ನಿಂದ ತಮ್ಮ ಅರ್ಜಿಯನ್ನು ಹಿಂತೆಗೆದುಕೊಳ್ಳಬಹುದು. ಉಪಚುನಾವಣೆಯಲ್ಲಿ, ಬಿಜೆಪಿ ಅವರೆಲ್ಲರಿಗೂ ಟಿಕೆಟ್ ನೀಡಬಹುದು. ಶಾಸಕರಿಗೆ ಅವರ ಸ್ವಂತ ಬೆಂಬಲಿಗರಲ್ಲದೇ, ಬಿಜೆಪಿ ಕಾರ್ಯಕರ್ತರ ಬೆಂಬಲವೂ ಸಿಗುತ್ತದೆ. ಒಟ್ಟಾರೆಯಾಗಿ, ಲೋಕಸಭೆ ಚುನಾವಣೆಗಿಂತ ಹೆಚ್ಚಾಗಿ ಹಿಮಾಚಲ ಉಪಚುನಾವಣೆಯ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿವೆ ಎಂದು ಹೇಳಿದ್ದಾರೆ.
ಶಾಸಕರು ಬಂಡಾಯ ಎದ್ದಿದ್ದು ಹೇಗೆ?: ಹಿಮಾಚಲ ಪ್ರದೇಶದ ಒಂದು ರಾಜ್ಯಸಭಾ ಸ್ಥಾನಕ್ಕೆ ಫೆಬ್ರವರಿ 27 ರಂದು ಮತದಾನ ನಡೆದಿತ್ತು. ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಖ್ಯಾತ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರನ್ನು ಕಣಕ್ಕಿಳಿಸಿತ್ತು. 4 ದಶಕಗಳ ಕಾಲ ಕಾಂಗ್ರೆಸ್ನಲ್ಲಿದ್ದ ಹರ್ಷ ಮಹಾಜನ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಹರ್ಷ್ ಮಹಾಜನ್ ಅವರು 2022 ರ ವಿಧಾನಸಭಾ ಚುನಾವಣೆಗೆ ಕೆಲ ದಿನ ಹಿಂದೆ ಬಿಜೆಪಿ ಸೇರಿದ್ದರು. ಹಿಮಾಚಲದಲ್ಲಿ ಕಾಂಗ್ರೆಸ್ 40 ಸ್ಥಾನಗಳೊಂದಿಗೆ ಸಂಪೂರ್ಣ ಬಹುಮತದ ಸರ್ಕಾರವನ್ನು ರಚಿಸಿತು. ಈ ಅಂಕಿ - ಅಂಶಗಳ ಪ್ರಕಾರ, ರಾಜ್ಯಸಭೆಯ ಸ್ಥಾನವು ಕಾಂಗ್ರೆಸ್ ಹೋಗುವುದು ಖಚಿತವಾಗಿತ್ತು. ಆದರೆ, ಮತದಾನದ ಸಮಯದಲ್ಲಿ 6 ಕಾಂಗ್ರೆಸ್ ಮತ್ತು 3 ಪಕ್ಷೇತರ ಶಾಸಕರು ಅಡ್ಡ ಮತದಾನ ಮಾಡಿದ್ದರು. ಇದರಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು.
ಶಾಸಕರ ಅಡ್ಡ ಮತದಾನದ ನಂತರ, ಸಂಸದೀಯ ವ್ಯವಹಾರಗಳ ಸಚಿವ ಹರ್ಷವರ್ಧನ್ ಚೌಹಾಣ್ ಅವರ ದೂರಿನ ಮೇರೆಗೆ, ಹಿಮಾಚಲ ಅಸೆಂಬ್ಲಿ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರು ವಿಪ್ ಉಲ್ಲಂಘಿಸಿದ 6 ಮಂದಿ ಶಾಸಕರನ್ನು ತಪ್ಪಿತಸ್ಥರು ಎಂದು ಪರಿಗಣಿಸಿ, ಫೆಬ್ರವರಿ 29 ರಂದು 6 ಶಾಸಕರನ್ನು ಅನರ್ಹಗೊಳಿಸಿದ್ದರು. ಈ ಶಾಸಕರ ವಜಾಗೊಂಡ ನಂತರ 68 ಶಾಸಕರಿರುವ ವಿಧಾನಸಭೆಯಲ್ಲಿ 6 ಸ್ಥಾನಗಳು ತೆರವಾದವು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಸ್ಥಾನಗಳಿಗೆ ಉಪಚುನಾವಣೆ ಘೋಷಿಸಿದೆ.
ಇದನ್ನೂ ಓದಿ:ಕೇಜ್ರಿವಾಲ್ ಸಿಎಂ ಆಗಿ ಮುಂದುವರೆಯಬಹುದೇ?; ಜೈಲಿನಿಂದ ಆಡಳಿತ ಕಾರ್ಯಸಾಧ್ಯವೇ?; ತಜ್ಞರ ಅಭಿಪ್ರಾಯ ಹೀಗಿದೆ - Kejriwal Arrest