ಕರ್ನಾಟಕ

karnataka

ETV Bharat / bharat

ಮುಖ್ಯಮಂತ್ರಿ ಸ್ಥಾನಕ್ಕೆ ಚಂಪೈ ಸೊರೇನ್ ರಾಜೀನಾಮೆ: ಮತ್ತೆ ಸಿಎಂ ಆಗಲಿರುವ ಹೇಮಂತ್ ಸೊರೇನ್ - Chief Minister of Jharkhand

ಜಾರ್ಖಂಡ್‌ನಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆಯಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಚಂಪೈ ಸೊರೇನ್ ಅವರು ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇದೀಗ ಹೇಮಂತ್ ಸೊರೇನ್ ಅವರು, ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ರಾಜೀನಾಮೆ ನೀಡಿದ ಬಳಿಕ ಹೇಮಂತ್ ಸೊರೇನ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.

By ETV Bharat Karnataka Team

Published : Jul 3, 2024, 8:28 PM IST

Updated : Jul 3, 2024, 9:19 PM IST

CHIEF MINISTER OF JHARKHAND  CM CHAMPAI SOREN  HEMANT SOREN  JHARKHAND
ಜಾರ್ಖಂಡ್‌: ಮುಖ್ಯಮಂತ್ರಿ ಸ್ಥಾನಕ್ಕೆ ಚಂಪೈ ಸೊರೇನ್ ರಾಜೀನಾಮೆ, ಮತ್ತೆ ಸಿಎಂ ಆಗಲಿರುವ ಹೇಮಂತ್ ಸೊರೇನ್ (ETV Bharat)

ರಾಂಚಿ (ಜಾರ್ಖಂಡ್):ಜಾರ್ಖಂಡ್ ರಾಜಕೀಯದಲ್ಲಿ ಮತ್ತೆ ನಾಯಕತ್ವದ ಬದಲಾವಣೆಯಾಗಿದೆ. ಸಿಎಂ ಸ್ಥಾನಕ್ಕೆ ಚಂಪೈ ಸೊರೇನ್ ರಾಜೀನಾಮೆ ನೀಡಿದ್ದಾರೆ. ರಾಜಭವನಕ್ಕೆ ತೆರಳಿ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ರಾಜೀನಾಮೆ ನೀಡಿದ ಬಳಿಕ ಹೇಮಂತ್ ಸೊರೇನ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.

ಮೂಲಗಳ ಪ್ರಕಾರ, ಹೇಮಂತ್ ಸೊರೇನ್ ಅವರ ನಿವಾಸದಲ್ಲಿ ನಡೆದ ಆಡಳಿತಾರೂಢ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕರಾಗಿ ಮರು ಆಯ್ಕೆಯಾಗಿದ್ದಾರೆ. ಇದೀಗ ಹೇಮಂತ್ ಸೊರೇನ್ ಅವರು ರಾಜ್ಯದ 13ನೇ ಮುಖ್ಯಮಂತ್ರಿಯಾಗಿ ಶೀಘ್ರದಲ್ಲೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಭೂ ಹಗರಣ ಪ್ರಕರಣದಲ್ಲಿ ಜನವರಿ 31 ರಂದು ಇಡಿ ಬಂಧಿಸಿದ ನಂತರ ಹೇಮಂತ್ ಸೊರೇನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಸ್ಥಾನದಲ್ಲಿ ಪಕ್ಷದ ಹಿರಿಯ ನಾಯಕ ಚಂಪೈ ಸೊರೇನ್ ಫೆಬ್ರವರಿ 2ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೇ ವೇಳೆ ಹೇಮಂತ್ ಸೊರೇನ್ ಜಾಮೀನು ಪಡೆದು ಜೈಲಿನಿಂದ ಹೊರ ಬಂದರೂ ಅಧಿಕಾರ ಬದಲಾವಣೆ ಆಗುವುದಿಲ್ಲ ಎಂಬ ನಿರಂತರ ಚರ್ಚೆ ನಡೆಯುತ್ತಿತ್ತು. ಆದ್ರೆ, ಜಾರ್ಖಂಡ್‌ ರಾಜ್ಯದಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆಯಾಗಿದೆ.

ಚಂಪೈ ಸೊರೇನ್ ಸಿಎಂ ಸ್ಥಾನಕ್ಕೆ ರಾಜೀನಾಮೆ: ಚಂಪೈ ಸೊರೇನ್ ಅವರು ಇಂದು (ಬುಧವಾರ) ರಾಜಭವನಕ್ಕೆ ತೆರಳಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಚಂಪೈ ಸೊರೇನ್ ಸಿಎಂ ಆಗಿ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಸಿಎಂ ಆಗಿದ್ದಾಗಲೂ ಅವರು ತಮ್ಮ ಕೆಲಸವನ್ನು ಅತ್ಯಂತ ಸರಳತೆಯಿಂದ ಮಾಡುತ್ತಿದ್ದರು.

ಚಂಪೈ ಸೊರೇನ್ ನಡೆದು ಬಂದ ಹಾದಿ:ಹೇಮಂತ್ ಸೊರೇನ್ ರಾಜೀನಾಮೆ ನಂತರ ಚಂಪೈ ಸೊರೇನ್ ಮುಖ್ಯಮಂತ್ರಿಯಾದರು. ಅವರು ಸತತ ನಾಲ್ಕು ಅವಧಿಗೆ ಸೆರೈಕೆಲಾದಿಂದ ಶಾಸಕರಾಗಿದ್ದಾರೆ. ಆದರೆ, 2000ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಆ ನಂತರ ಸತತ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದರು. ಜಾರ್ಖಂಡ್ ಸರ್ಕಾರದಲ್ಲಿ ಸಚಿವರೂ ಆದರು. ಚಂಪೈ ಸೊರೇನ್ ಸಾಮಾನ್ಯ ರೈತ ಕುಟುಂಬಕ್ಕೆ ಸೇರಿದವರು. ಅವರು ತಮ್ಮ ಕುಟುಂಬದಲ್ಲಿ ಹಿರಿಯ ಮಗು. ಹತ್ತನೇ ತರಗತಿವರೆಗೆ ಓದಿದ್ದು, ಸರ್ಕಾರಿ ಶಾಲೆಯಲ್ಲಿ ಮಾತ್ರ. ಜಿಲಿಂಗಗೋರ ಗ್ರಾಮದಲ್ಲಿ ತಂದೆಯೊಂದಿಗೆ ವಾಸವಿದ್ದ ಇವರು ತಂದೆಗೆ ಸಹಾಯ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ಮದುವೆಯಾದರು. ಅವರಿಗೆ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ.

ಜಾರ್ಖಂಡ್ ಚಳವಳಿಯಲ್ಲಿ ಚಂಪೈ ಸೊರೇನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಚಂಪೈ ಸೊರೇನ್, ಶಿಬು ಸೊರೇನ್ ಅವರೊಂದಿಗೆ ಪ್ರತ್ಯೇಕ ರಾಜ್ಯಕ್ಕಾಗಿ ಚಳವಳಿಯನ್ನು ಸೇರಿದರು. ಅವರಿಗೆ ಜನರು ಜಾರ್ಖಂಡ್ ಹುಲಿ ಎಂದು ಕರೆಯುತ್ತಾರೆ. ಮೊದಲ ಬಾರಿಗೆ ಅವರು ಸೆರೈಕೆಲಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಶಾಸಕರಾದರು. ನಂತರ ಅವರು ಜಾರ್ಖಂಡ್ ಮುಕ್ತಿ ಮೋರ್ಚಾ ಸೇರಿದರು.

2010 ರಿಂದ 13ರ ಅವಧಿಯಲ್ಲಿ ಅವರು ಅರ್ಜುನ್ ಮುಂಡಾ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆದುಹಾಕಿದ ನಂತರ ರಚನೆಯಾದ ಜೆಎಂಎಂ ಸರ್ಕಾರದಲ್ಲಿ ಅವರು ಮತ್ತೊಮ್ಮೆ ಸಚಿವರಾಗಿದ್ದರು. 2019ರಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಸರ್ಕಾರ ರಚನೆಯಾದಾಗ, ಅವರನ್ನು ಮತ್ತೆ ಹೇಮಂತ್ ಸಂಪುಟದಲ್ಲಿ ಮಂತ್ರಿ ಮಾಡಲಾಯಿತು. ಇದರೊಂದಿಗೆ ಜೆಎಂಎಂ ಉಪಾಧ್ಯಕ್ಷರೂ ಆಗಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಿಂದ ವಿಜಯವಾಡಕ್ಕೆ ಮರಳಿದ ಜಗನ್ ಮೋಹನ್ ರೆಡ್ಡಿ - jagan returned to vijayawada

Last Updated : Jul 3, 2024, 9:19 PM IST

ABOUT THE AUTHOR

...view details