ಕರ್ನಾಟಕ

karnataka

ಉತ್ತಮ ಮುಂಗಾರು: ಭತ್ತ, ಧಾನ್ಯ, ಕಬ್ಬು ಬಿತ್ತನೆ ಪ್ರಮಾಣ ಹೆಚ್ಚಳ - Monsoon Boosts Paddy Sowing

By ETV Bharat Karnataka Team

Published : Sep 3, 2024, 12:41 PM IST

ಉತ್ತಮ ಮುಂಗಾರು ಮಳೆಯ ಕಾರಣದಿಂದ ಈ ವರ್ಷ ಭತ್ತದ ಬಿತ್ತನೆಯ ಪ್ರಮಾಣ ಹೆಚ್ಚಾಗಿದೆ.

ಕೃಷಿ ಕೆಲಸ
ಕೃಷಿ ಕೆಲಸ (IANS)

ನವದೆಹಲಿ: ಈ ವರ್ಷ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದರಿಂದ ದೇಶದಲ್ಲಿ ಭತ್ತದ ಬಿತ್ತನೆ ಪ್ರಮಾಣ ಹೆಚ್ಚಾಗಿದೆ. ಈ ವರ್ಷದ ಭತ್ತ ಬಿತ್ತನೆಯು ಕಳೆದ ಐದು ವರ್ಷಗಳ ಸರಾಸರಿ ಪ್ರದೇಶವನ್ನು ಮೀರಿಸಿದೆ. ಈ ಬಾರಿ ದೇಶದ ಒಟ್ಟು 408.72 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತಲಾಗಿದ್ದು, (ಸೆಪ್ಟೆಂಬರ್ 2ರ ಹೊತ್ತಿಗೆ), ಇದು ಸರಾಸರಿ 401.55 ಲಕ್ಷ ಹೆಕ್ಟೇರ್​ಗಳನ್ನು ಮೀರಿದೆ. ಕಳೆದ ವರ್ಷ 393.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆಯಾಗಿತ್ತು. ಈ ಬಾರಿ ಬಿತ್ತನೆ ಶೇ 3.84ರಷ್ಟು ಹೆಚ್ಚಳವಾಗಿದೆ.

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಪ್ರಕಾರ, ಖಾರಿಫ್ ಬೆಳೆ ಬಿತ್ತನೆ ಶೇಕಡಾ 1.91ರಷ್ಟು ವಿಸ್ತರಿಸಿ 1,087.33 ಲಕ್ಷ ಹೆಕ್ಟೇರ್​ಗೆ ತಲುಪಿದೆ. ಇದು ಕಳೆದ ವರ್ಷ ಇದೇ ಸಮಯದಲ್ಲಿ ಆಗಿದ್ದ 1,066.89 ಲಕ್ಷ ಹೆಕ್ಟೇರ್​ಗಿಂತ ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿನ 116.66 ಲಕ್ಷ ಹೆಕ್ಟೇರ್ ಗೆ ಹೋಲಿಸಿದರೆ ಈ ವರ್ಷ 125.13 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಯಲಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಇನ್ನು ಈ ವರ್ಷ 187.74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಒರಟು ಧಾನ್ಯಗಳನ್ನು ಬಿತ್ತನೆ ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 181.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಒರಟು ಧಾನ್ಯ ಬಿತ್ತಲಾಗಿತ್ತು.

ಆಗಸ್ಟ್ 30 ರ ವೇಳೆಗೆ 190.63 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳನ್ನು ಬಿತ್ತನೆ ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಪ್ರಮಾಣ 188.83 ಲಕ್ಷ ಹೆಕ್ಟೇರ್ ಆಗಿತ್ತು.

ಕಳೆದ ವರ್ಷದ ಇದೇ ಅವಧಿಯಲ್ಲಿನ 57.11 ಲಕ್ಷ ಹೆಕ್ಟೇರ್ ಗೆ ಹೋಲಿಸಿದರೆ ಈ ಬಾರಿ 57.68 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ ಎಂದು ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಉತ್ತಮ ಮುಂಗಾರು ಮಳೆಯಿಂದಾಗಿ ದೇಶದ ಕೃಷಿಭೂಮಿಯ ಶೇಕಡಾ 50ರಷ್ಟನ್ನು ಹೊಂದಿರುವ ನೀರಾವರಿ ರಹಿತ ಪ್ರದೇಶಗಳಲ್ಲಿ ಬಿತ್ತನೆಗೆ ಅನುಕೂಲವಾಗಿದ್ದರಿಂದ ಪ್ರಸಕ್ತ ಋತುವಿನಲ್ಲಿ ಬಿತ್ತನೆ ಪ್ರದೇಶ ಹೆಚ್ಚಾಗಿದೆ.

ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ರ ಬಜೆಟ್​ನಲ್ಲಿ 1.52 ಲಕ್ಷ ಕೋಟಿ ರೂ.ಗಳ ಅನುದಾನವನ್ನು ಘೋಷಿಸಿರುವುದರಿಂದ ಕೃಷಿ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ಸಿಗುವ ನಿರೀಕ್ಷೆಯಿದೆ. ಕೃಷಿ ಕ್ಷೇತ್ರದ ಉತ್ಪಾದಕತೆಯನ್ನು ಹೆಚ್ಚಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ತೈಲ ಬೀಜಗಳಿಗೆ 'ಆತ್ಮನಿರ್ಭರ' ಮತ್ತು ತರಕಾರಿ ಉತ್ಪಾದನೆಗಾಗಿ ದೊಡ್ಡ ಪ್ರಮಾಣದ ಕ್ಲಸ್ಟರ್​ಗಳ ನಿರ್ಮಾಣ ಮುಂತಾದ ಯೋಜನೆಗಳನ್ನು ಘೋಷಿಸಲಾಗಿದೆ.

ಇದನ್ನೂ ಓದಿ: ದೆಹಲಿ - ಲಂಡನ್ ಹೀಥ್ರೂ ಮಾರ್ಗದಲ್ಲಿ ಹೊಸ ಏರ್ ಬಸ್ ಎ 350 - 900 ವಿಮಾನಯಾನ ಆರಂಭಿಸಿದ ಏರ್​ ಇಂಡಿಯಾ - Airbus A350 aircraft

ABOUT THE AUTHOR

...view details