ಕರ್ನಾಟಕ

karnataka

ವಯನಾಡ್​ ಘಟನೆಯಿಂದ ಗೋವಾ ಪಾಠ ಕಲಿಯಬೇಕು: ಸಚಿವ ಮಾನ್ಸೆರೆಟ್ - Wayanad Eye Opening For Goa

By ETV Bharat Karnataka Team

Published : Aug 1, 2024, 7:57 PM IST

ವಯನಾಡ್​ನಲ್ಲಿ ಸಂಭವಿಸಿದ ಭೂಕುಸಿತ ಗೋವಾ ರಾಜ್ಯಕ್ಕೆ ಒಂದು ಪಾಠ ಎಂದು ರಾಜ್ಯ ಕಂದಾಯ ಸಚಿವ ಅಟಾನಾಸಿಯೊ ಮಾನ್ಸೆರೆಟ್ ಹೇಳಿದ್ದಾರೆ.

ವಯನಾಡ್​ ಭೂಕುಸಿತದ ಒಂದು ದೃಶ್ಯ
ವಯನಾಡ್​ ಭೂಕುಸಿತದ ಭಯಾನಕ ದೃಶ್ಯ (IANS)

ಪಣಜಿ:ಕೇರಳದ ವಯನಾಡ್​ನಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಘಟನೆಗಳಿಂದ ಗೋವಾ ಪಾಠ ಕಲಿಯಬೇಕಿದೆ ಎಂದಿರುವ ರಾಜ್ಯ ಕಂದಾಯ ಸಚಿವ ಅಟಾನಾಸಿಯೊ ಮಾನ್ಸೆರೆಟ್, ಗೋವೆಯ ಪರಿಸರವನ್ನು ರಕ್ಷಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ವಯನಾಡ್​ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನೂರಾರು ಜನ ಸಾವನ್ನಪ್ಪಿದ ಬಗ್ಗೆ ಸದನದಲ್ಲಿ ಪ್ರತಿಪಕ್ಷದ ನಾಯಕ ಯೂರಿ ಅಲೆಮಾವೊ ಮತ್ತು ಇತರ ಇಬ್ಬರು ಶಾಸಕರು ಎತ್ತಿದ ಗಮನ ಸೆಳೆಯುವ ಪ್ರಶ್ನೆಗೆ ಸಚಿವರು ಉತ್ತರಿಸಿ ಮಾತನಾಡಿದರು.

"ಭಾರತದ ಇತರ ಭಾಗಗಳಲ್ಲಿ ಇದೇ ರೀತಿಯ ಭೂಕುಸಿತಗಳು ನಡೆದಿವೆ. ಗೋವಾದಲ್ಲಿ ಕೂಡ ಇದೇ ರೀತಿಯ ಘಟನೆಗಳು ಕಂಡುಬಂದಿವೆ. ಗೋವಾದ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಯೋಜಿತವಲ್ಲದ ಮತ್ತು ಅತಿಯಾದ ಅಭಿವೃದ್ಧಿಯು ಇಂತಹ ಭೂಕುಸಿತಗಳಿಗೆ ಕಾರಣವಾಗುತ್ತದೆ" ಎಂದು ಅಲೆಮಾವೊ ಹೇಳಿದರು.

ವಯನಾಡ್ ಭೂಕುಸಿತ ಘಟನೆಯನ್ನು ಗೋವಾ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದಲ್ಲಿ ಅಂಥ ಘಟನೆಗಳು ನಡೆಯದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಸಚಿವ ಮಾನ್ಸೆರೆಟ್ ಹೇಳಿದರು.

"ವಯನಾಡ್ ಭೂಕುಸಿತ ಘಟನೆ ಗೋವಾದ ಕಣ್ಣು ತೆರೆಸುವಂತಿದೆ. ಪರಿಸರವನ್ನು ರಕ್ಷಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಸಮಯ ಇದಾಗಿದೆ. ಇಂತಹ ಘಟನೆಗಳನ್ನು ತಪ್ಪಿಸಲು ಸರ್ಕಾರವು ಯೋಜನೆ ಮತ್ತು ಅಭಿವೃದ್ಧಿ ಪ್ರಾಧಿಕಾರಗಳು ಹಾಗೂ ಎಲ್ಲಾ ಸ್ಥಳೀಯ ಸಂಸ್ಥೆಗಳು ವಿಶೇಷವಾಗಿ ನಗರ ಮತ್ತು ಗ್ರಾಮೀಣ ಯೋಜನಾ ಇಲಾಖೆಗೆ ಅಭಿವೃದ್ಧಿ ಯೋಜನೆಗಳಿಗೆ ಅನುಮತಿ ನೀಡುವಾಗ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಲಹೆ ನೀಡಿದೆ" ಎಂದು ಸಚಿವರು ತಿಳಿಸಿದರು.

"ಅರಣ್ಯೀಕರಣಕ್ಕೆ ಒತ್ತು ನೀಡುವಂತೆ ಕೃಷಿ ಇಲಾಖೆಗೆ ತಿಳಿಸಲಾಗುವುದು. ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧ್ಯಯನ ನಡೆಸುವಂತೆ ಜಲಸಂಪನ್ಮೂಲ ಇಲಾಖೆಗೆ ಕೂಡ ಮನವಿ ಮಾಡಲಿದ್ದೇವೆ. ಈ ಉದ್ದೇಶಕ್ಕಾಗಿ ಕೇಂದ್ರದಿಂದ ಅಗತ್ಯ ನೆರವು ಕೋರಲಾಗುವುದು" ಎಂದು ಅವರು ಹೇಳಿದರು.

"ಗೋವಾದಲ್ಲಿ ಈ ಹಿಂದೆ ಸಂಭವಿಸಿದ ಭೂಕುಸಿತದ ಘಟನೆಗಳು ಜನರನ್ನು ಸ್ಥಳಾಂತರಿಸುವಷ್ಟರ ಮಟ್ಟಿಗೆ ಗಂಭೀರವಾಗಿರಲಿಲ್ಲ. ತುರ್ತು ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಅಗತ್ಯವಿದ್ದಾಗ ತಾತ್ಕಾಲಿಕ ವಸತಿ ಒದಗಿಸಲು ಸರ್ಕಾರವು ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ 11 ವಿವಿಧೋದ್ದೇಶ ಚಂಡಮಾರುತ ಆಶ್ರಯ ತಾಣಗಳನ್ನು ನಿರ್ಮಿಸಿದೆ. ಹೆಚ್ಚುವರಿಯಾಗಿ, ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ 259 ಶಾಲೆಗಳು ಮತ್ತು 132 ಸಮುದಾಯ ಭವನಗಳನ್ನು ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ತುರ್ತು ಕೇಂದ್ರಗಳಾಗಿ ಸರ್ಕಾರ ಗುರುತಿಸಿದೆ" ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ: ಹಿಮಾಚಲದಲ್ಲೂ ಭಾರಿ ಮೇಘಸ್ಫೋಟ: ಮೂವರು ಬಲಿ, 40 ಮಂದಿ ಕಣ್ಮರೆ.. ಮುಂದುವರಿದ ಕಾರ್ಯಾಚರಣೆ - Cloudburst in Himachal Pradesh

ABOUT THE AUTHOR

...view details