ಕರ್ನಾಟಕ

karnataka

ETV Bharat / bharat

ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಕೇಜ್ರಿವಾಲ್​ಗೆ ಜಾಮೀನು - Kejriwal Gets Bail - KEJRIWAL GETS BAIL

ಅಬಕಾರಿ ನೀತಿ ಹಗರಣ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಅವರಿಗೆ ದೆಹಲಿ ಕೋರ್ಟ್ ಬಿಗ್​ ರಿಲೀಫ್ ನೀಡಿದೆ.

Arvind Kejriwal
ಅರವಿಂದ್ ಕೇಜ್ರಿವಾಲ್​ (ANI)

By PTI

Published : Jun 20, 2024, 10:48 PM IST

ನವದೆಹಲಿ: ಬಹು ವಿವಾದಿತ ಹಾಗೂ ಚರ್ಚಿತ ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ರಾಷ್ಟ್ರೀಯ ಸಂಚಾಲಕ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರಿಗೆ ದೆಹಲಿ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ. ತಿಹಾರ್​ ಜೈಲಿನಲ್ಲಿರುವ ಸಿಎಂಗೆ 1 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್​ ಇಡುವಂತೆ ಸೂಚಿಸಿರುವ ಕೋರ್ಟ್​, ನಿರ್ದಿಷ್ಟ ಷರತ್ತುಗಳನ್ನೂ ವಿಧಿಸಿದೆ.

ಪ್ರಕರಣವೇನು?: ಹೊಸ ಅಬಕಾರಿ ನೀತಿಯನ್ನು ಕೇಜ್ರಿವಾಲ್​ ನೇತೃತ್ವದ ಸರ್ಕಾರ ತರಲು ಮುಂದಾಗಿತ್ತು. ಬಳಿಕ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ನೀತಿಯನ್ನು ರದ್ದುಪಡಿಸಲಾಗಿದೆ. ಆದರೆ, ಈ ಪ್ರಕರಣದಲ್ಲಿ ಸಿಬಿಐ, ಜಾರಿ ನಿರ್ದೇಶನಾಲಯದ ತನಿಖೆ ಮುಂದುವರೆದಿದೆ. ಇದು ಸಿಎಂ, ಡಿಸಿಎಂ ಅವರಿಂದ ಹಿಡಿದು ಪ್ರಮುಖ ಆಪ್​ ನಾಯಕರು, ಉದ್ಯಮಿಗಳು, ಆಂಧ್ರ, ತೆಲಂಗಾಣದ ರಾಜಕಾರಣಿಗಳಿಗೂ ಉರುಳಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಮಾರ್ಚ್​ 21ರಂದು ಇಡಿ ಅಧಿಕಾರಿಗಳು ಖುದ್ದು ದೆಹಲಿ ಸಿಎಂ ಕೇಜ್ರಿವಾಲ್​ ಅವರನ್ನು ಬಂಧಿಸಿದ್ದರು. ನಂತರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್​ ಚುನಾವಣಾ ಪ್ರಚಾರಕ್ಕೆಂದು ಮೇ 10ರಂದು ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಇದರ ಅವಧಿಯು ಜೂನ್​ 2ರಂದು ಮುಗಿದಿತ್ತು. ಹೀಗಾಗಿ ಅವರು ಮರಳಿ ಜೈಲಿಗೆ ಶರಣಾಗಿದ್ದರು.

ಕೋರ್ಟ್​ ವಿಧಿಸಿದ ಷರತ್ತುಗಳು:ಇಂದು ದೆಹಲಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ನಿಯಾಯ್ ಬಿಂದು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಇದೇ ವೇಳೆ, ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಹಾಗೂ ಕಾನೂನು ಪರಿಹಾರಗಳಿಗಾಗಿ 48 ಗಂಟೆಗಳ ಕಾಲ ಜಾಮೀನು ಆದೇಶವನ್ನು ಅಮಾನತುಗೊಳಿಸುವಂತೆ ಕೋರಿದ ಜಾರಿ ನಿರ್ದೇಶನಾಲಯದ ಮನವಿಯನ್ನು ಕೋರ್ಟ್​ ತಿರಸ್ಕರಿಸಿದೆ.

ಮತ್ತೊಂದೆಡೆ, ತನಿಖೆಗೆ ಅಡ್ಡಿಪಡಿಸಬಾರದು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂದು ಕೇಜ್ರೀವಾಲ್​ ಅವರಿಗೆ ಕೋರ್ಟ್​ ತಾಕೀತು ಮಾಡಿದೆ. ಜೊತೆಗೆ ಅಗತ್ಯವಿದ್ದಾಗ ನ್ಯಾಯಾಲಯಕ್ಕೆ ಹಾಜರಾಗುವಂತೆ ಮತ್ತು ತನಿಖೆಗೆ ಸಹಕರಿಸುವಂತೆಯೂ ಸೂಚಿಸಲಾಗಿದೆ. ಕೇಜ್ರಿವಾಲ್​ ಪರ ವಕೀಲರು ಒಂದು ಲಕ್ಷ ರೂಪಾಯಿಗಳ ಬಾಂಡ್​ಅನ್ನು ನಾಳೆ (ಶುಕ್ರವಾರ) ಕೋರ್ಟ್​ಗೆ ಸಲ್ಲಿಸುವ ಸಾಧ್ಯತೆ ಇದೆ. ಇದಾದ ಬಳಿಕ ತಿಹಾರ್​ ಜೈಲಿನಿಂದ ಹೊರಬರುವ ನಿರೀಕ್ಷೆ ಇದೆ. ಇದೇ ವೇಳೆ, ಕೋರ್ಟ್ ಆದೇಶವನ್ನು ಆಮ್​ ಆದ್ಮಿ ಪಕ್ಷವು ಸ್ವಾಗತಿಸಿ, ''ಸತ್ಯಕ್ಕೆ ತೊಂದರೆಯಾಗಬಹುದು, ಸೋಲಿಲ್ಲ. ಸತ್ಯಮೇವ ಜಯತೇ'' ಎಂದು ಹೇಳಿದೆ.

ಇದನ್ನೂ ಓದಿ:ಕೋರ್ಟ್​ ಕಲಾಪದ ವಿಡಿಯೋ ತೆಗೆದುಹಾಕಿ: ಕೇಜ್ರಿವಾಲ್ ಪತ್ನಿ ಸುನೀತಾಗೆ ಹೈಕೋರ್ಟ್ ತಾಕೀತು

ABOUT THE AUTHOR

...view details