ಕರ್ನಾಟಕ

karnataka

ETV Bharat / bharat

ಹೂಡಾ ಹಟಮಾರಿತನದಿಂದ ಹರಿಯಾಣದಲ್ಲಿ ಕಾಂಗ್ರೆಸ್​ ಸೋಲು: ರೈತ ಮುಖಂಡ ಟಿಕಾಯತ್

ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಅವರ ಹಟಮಾರಿತನದಿಂದ ಕಾಂಗ್ರೆಸ್​ ಸೋತಿದೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

By ETV Bharat Karnataka Team

Published : 5 hours ago

ರೈತ ಮುಖಂಡ ಟಿಕಾಯತ್
ರೈತ ಮುಖಂಡ ಟಿಕಾಯತ್ (IANS)

ನವದೆಹಲಿ: ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಅವರ ಹಟಮಾರಿತನದಿಂದ ಹರಿಯಾಣದಲ್ಲಿ ಕಾಂಗ್ರೆಸ್​ ಮುಳುಗುವಂತಾಯಿತು ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ರವಿವಾರ ಟೀಕಿಸಿದ್ದಾರೆ. ಹರಿಯಾಣದಲ್ಲಿ ಸರ್ಕಾರ ರಚಿಸುವಷ್ಟು ಬಹುಮತ ಪಡೆಯಲು ಕಾಂಗ್ರೆಸ್​ ವಿಫಲವಾದ ಹಿನ್ನೆಲೆಯಲ್ಲಿ ಟಿಕಾಯತ್ ಈ ಹೇಳಿಕೆ ನೀಡಿದ್ದಾರೆ.

ರೈತ ಮುಖಂಡ ಗುರ್ನಾಮ್ ಸಿಂಗ್ ಚಾರುನಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಟಿಕಾಯತ್, "ರೈತರಲ್ಲಿ ಅಸಮಾಧಾನವಿತ್ತು. ಹಾಗಂತ ರೈತರು ಇತರ ಪಕ್ಷಗಳಿಗೆ ಬೆಂಬಲ ನೀಡಲ್ಲ ಎಂದರ್ಥವಲ್ಲ. ರೈತರು ಪ್ರತಿಯೊಂದು ಪಕ್ಷಕ್ಕೂ ಮತ ಹಾಕಿದ್ದಾರೆ. ಚಳವಳಿಗೆ ಸೇರಿದ ಜನರಲ್ಲಿ ಅಸಮಾಧಾನವಿತ್ತು. ಚಳವಳಿಗೆ ಸೇರದವರು ಸರ್ಕಾರದ ಜೊತೆಗಿದ್ದಾರೆ" ಎಂದು ಹೇಳಿದರು.

"ಚುನಾವಣೆಗಳು ಪಕ್ಷ, ಧರ್ಮ ಮತ್ತು ಜಾತಿ ಆಧಾರದ ಮೇಲೆ ಹೋರಾಡಲ್ಪಡುತ್ತವೆ. ಜನರು ತಮ್ಮ ಸಮಾನ ಮನಸ್ಕ ಪಕ್ಷಗಳ ಪರವಾಗಿ ಮತ ಚಲಾಯಿಸುತ್ತಾರೆ. ರೈತ, ಕಾರ್ಮಿಕ ಅಥವಾ ವ್ಯಾಪಾರಿಯೊಬ್ಬ ತನ್ನ ನಂಬಿಕೆಯನ್ನು ಪ್ರತಿಬಿಂಬಿಸುವ ಪಕ್ಷಕ್ಕೆ ಮತ ಚಲಾಯಿಸುತ್ತಾನೆ. ರೈತರು ಒಂದು ಸಂಘಟನೆಯಲ್ಲಿ ಒಟ್ಟಾಗಿರುತ್ತಾರೆ. ಆದರೆ ಸಂಘಟನೆಯಲ್ಲಿನ ಜನರೆಲ್ಲರೂ ತನ್ನ ಪರವಾಗಿದ್ದಾರೆ ಎಂದು ಯಾರಾದರೂ ತಿಳಿದುಕೊಂಡರೆ ಅದು ತಪ್ಪು" ಎಂದು ಅವರು ಹೇಳಿದರು.

ಇವಿಎಂಗಳ ಸಾಚಾತನದ ಬಗ್ಗೆಯೂ ಟಿಕಾಯತ್ ಪ್ರಶ್ನೆಗಳನ್ನು ಎತ್ತಿದರು. "ಇಲ್ಲಿನ ಗಣಿತ ಎಲ್ಲರಿಗೂ ಅರ್ಥವಾಗಲಾರದು. ಜನತೆ ಮತ ಚಲಾಯಿಸುತ್ತಾರೆ... ಆದರೆ ಗೆಲ್ಲುವುದು ಬಿಜೆಪಿ ಮಾತ್ರ. ಯುಪಿಯಲ್ಲಿ ಕಬ್ಬು ಸಮಿತಿ ಚುನಾವಣೆಗಳು ನಡೆಯುವ ಹಾಗೆಯೇ ಇಲ್ಲೂ ಆಗುತ್ತಿದೆ. ಅಲ್ಲಿ ಬಿಜೆಪಿಯ ನೇರ ಆಟವೆಂದರೆ ಇತರ ಪಕ್ಷದ ಜನರ ನಾಮನಿರ್ದೇಶನಗಳನ್ನು ರದ್ದುಗೊಳಿಸುವುದು ಮತ್ತು ಚುನಾವಣೆಯಿಲ್ಲದೆ ಗೆಲ್ಲುವುದು" ಎಂದು ಅವರು ಐಎಎನ್ಎಸ್​ಗೆ ತಿಳಿಸಿದರು.

"ಚುನಾವಣೆಗಳನ್ನು ನಡೆಸುವುದರಲ್ಲಿ ಬಿಜೆಪಿಯವರು ನಿಷ್ಣಾತರಾಗುತ್ತಿದ್ದಾರೆ. ಕೋಲುಗಳಿಂದ, ಬುದ್ಧಿವಂತಿಕೆಯಿಂದ ಅಥವಾ ಜನರನ್ನು ಪರಸ್ಪರ ಹೋರಾಡುವಂತೆ ಮಾಡುವ ಮೂಲಕ ಅವರು ಚುನಾವಣೆಯಲ್ಲಿ ಗೆಲ್ಲುತ್ತಾರೆ. ನಾವು ಬಿಜೆಪಿ ಅಧಿಕಾರವನ್ನು ಬಿಟ್ಟುಕೊಡಬಾರದು ಎಂಬುದು ಬಿಜೆಪಿ ತಂತ್ರವಾಗಿದೆ." ಎಂದು ಟಿಕಾಯತ್ ಹೇಳಿದರು.

"ಹರಿಯಾಣ ಚುನಾವಣೆಯಲ್ಲಿ ಖಂಡಿತವಾಗಿಯೂ ಏನೋ ತಪ್ಪಾಗಿದೆ. ನಾವು ಇದನ್ನು ಈ ಹಿಂದೆಯೂ ಹೇಳಿದ್ದೆವು. ಇವಿಎಂಗಳನ್ನು ಎಲ್ಲೋ ಇಡಲಾಗುತ್ತದೆ ಮತ್ತು ನಂತರ ಚುನಾವಣೆಗಳು ನಡೆದಾಗ ಬೇರೆಡೆ ಇಡಲಾಗುತ್ತದೆ. ಇವಿಎಂಗಳನ್ನು ಬೂತ್​ಗಳಿಗೆ ಕಳುಹಿಸುವ ಮೊದಲು ಯಾವುದೇ ಪಕ್ಷಕ್ಕೆ ತೋರಿಸಲಾಗುತ್ತದೆಯೇ... ಎಂಜಿನಿಯರ್ ಗಳು ಎಲ್ಲಾ ಪ್ರೋಗ್ರಾಂ ಸೆಟ್ಟಿಂಗ್ ಮಾಡುತ್ತಾರೆ... ಹೌದು, ಇದೆಲ್ಲವೂ ಇವಿಎಂಗಳ ಆಟ. ನೀವು ಯಾವುದೇ ಬಟನ್ ಒತ್ತಿ... ಮತಗಳು ಅವರಿಗೆ (ಬಿಜೆಪಿ) ಮಾತ್ರ ಹೋಗುತ್ತವೆ" ಎಂದು ಅವರು ಹೇಳಿದರು.

ಇದನ್ನೂ ಓದಿ : ಬಾಲಿವುಡ್​ ನಂಟು, ಭವ್ಯ ಇಫ್ತಾರ್​ ಕೂಟ, ಸಾಮಾಜಿಕ ಕಾರ್ಯ: ಬಾಬಾ ಸಿದ್ದಿಕಿಯ ವೈವಿಧ್ಯಮಯ ವ್ಯಕ್ತಿತ್ವ

ABOUT THE AUTHOR

...view details