ಕರ್ನಾಟಕ

karnataka

ಅಗ್ನಿಪಥ್​ ಯೋಜನೆಯಲ್ಲಿ ಬದಲಾವಣೆಗೆ ಮುಂದಾದ ಕೇಂದ್ರ ಸರ್ಕಾರ: ಈ ನಿಯಮಗಳು ಪರಿಷ್ಕರಣೆ ಸಾಧ್ಯತೆ - AGNIPATH SCHEME

By ETV Bharat Karnataka Team

Published : Sep 5, 2024, 9:15 PM IST

ಅಗ್ನಿಪಥ್​ ಯೋಜನೆಯ ಈಗಿರುವ ನಿಯಮಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತರಲು ಮುಂದಾಗಿದೆ. ಸೇನೆಯ ಬಲವನ್ನು ಹೆಚ್ಚಿಸಲು ಇದು ಸಹಕಾರಿ ಎಂಬ ಸಲಹೆಗಳು ಬಂದಿವೆ.

ಅಗ್ನಿಪಥ್​ ಯೋಜನೆಯಲ್ಲಿ ಬದಲಾವಣೆ
ಅಗ್ನಿಪಥ್​ ಯೋಜನೆಯಲ್ಲಿ ಬದಲಾವಣೆ (ETV Bharat)

ನವದೆಹಲಿ:ಲೋಕಸಭೆ ಸಾರ್ವತ್ರಿಕ ಚುನಾವಣೆಯ ವೇಳೆ ಉತ್ತರ ಭಾರತದ ರಾಜ್ಯಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದ ಅಗ್ನಿಪಥ್ ಯೋಜನೆಯಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ಅಗ್ನಿವೀರರ ಸಂಖ್ಯೆ, ಸಂಬಳ ಸೇರಿ ಮತ್ತಿತರ ನಿಯಮಗಳನ್ನು ಪರಿಷ್ಕರಿಸಲಿದೆ ಎಂದು ಹೇಳಲಾಗಿದೆ.

ಅಗ್ನಿಪಥ್‌ ಯೋಜನೆಯ ಪ್ರಸ್ತುತ ನಿಯಮಗಳ ಪ್ರಕಾರ, 4 ವರ್ಷಗಳ ತರಬೇತಿಯ ಬಳಿಕ ಶೇಕಡಾ 75 ಅಗ್ನಿವೀರರು ನಿವೃತ್ತಿ ಹೊಂದಬೇಕು. 25 ಪ್ರತಿಶತದಷ್ಟು ಯುವಕರನ್ನು ಸೇನೆಗೆ ಆಯ್ಕೆಯಾಗುತ್ತಾರೆ. ಈ ನಿಯಮಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಜೊತೆಗೆ ಎನ್​ಡಿಎ ಮಿತ್ರಪಕ್ಷಗಳು ಸಹ ಅಗ್ನಿಪಥ್ ನಿಯಮಗಳನ್ನು ಮರುಪರಿಶೀಲಿಸಲು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಡುವ ಸಾಧ್ಯತೆ ಇದೆ.

4 ವರ್ಷಗಳ ಅವಧಿಯ ಬಳಿಕ ಅಗ್ನಿವೀರರು ನಿವೃತ್ತಿ ಮತ್ತು ಸೇನೆಗೆ ಸೇರುವವರ ಸಂಖ್ಯೆಯನ್ನು ಶೇಕಡಾ 50: 50 ರಷ್ಟು ಆಗಲಿದೆ. ಈಗಿರುವ 21 ವರ್ಷ ವಯೋಮಿತಿ ಬದಲಿಗೆ 23 ವರ್ಷಕ್ಕೆ ಅರ್ಹತೆ ಹೆಚ್ಚಳವಾಗಲಿದೆ ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವೇತನದಲ್ಲೂ ಬದಲಾವಣೆ ತರುವ ಯೋಜನೆ ಇದೆ ಎಂದರು.

ಸೇನಾ ಬಲ ಕುಗ್ಗುವ ಸಾಧ್ಯತೆ:ಆಂತರಿಕ ಸಮೀಕ್ಷೆಗಳನ್ನು ನಡೆಸಿರುವ ಸೇನೆಯು, ಅಗ್ನಿಪಥ್ ಯೋಜನೆಯಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರಕ್ಕೆ ಹಲವು ಪ್ರಸ್ತಾವನೆಗಳನ್ನು ಸಲ್ಲಿಸಿದೆ. ಅಗ್ನಿವೀರರು ಶೇಕಡಾ 25 ರಷ್ಟು ಮಾತ್ರ ಸೇನೆ ಸೇರುವುದರಿಂದ ಅದರ ಬಲವೂ ಕುಗ್ಗುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ಸೇನೆಗೆ ಆಯ್ಕೆಯಾಗುವ ಯುವಕರ ಸಂಖ್ಯೆಯನ್ನು ದುಪ್ಪಟ್ಟು ಮಾಡಲು ಶಿಫಾರಸು ಮಾಡಲಾಗಿದೆ. 4 ವರ್ಷ ಕಠಿಣ ತರಬೇತಿ ಪಡೆದ ಸೈನಿಕರ ಸಾಮರ್ಥ್ಯವನ್ನು ಸೇನೆ ಬಳಸಿಕೊಳ್ಳಬೇಕು ಎಂದು ನಿವೃತ್ತ ನೌಕಾಪಡೆ ಅಧಿಕಾರಿಯೊಬ್ಬರು ತಿಳಿಸಿದರು.

2022 ರ ಜೂನ್​ನಲ್ಲಿ ಕೇಂದ್ರ ಸರ್ಕಾರವು ಮೂರು ಪಡೆಗಳಲ್ಲಿ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಯನ್ನು ಜಾರಿಗೆ ತಂದಿತು. 17 ರಿಂದ 21 ವರ್ಷದೊಳಗಿನ ಯುವಕ-ಯುವತಿಯರು ಮಾತ್ರ ಅಗ್ನಿವೀರರಾಗಿ ಕರ್ತವ್ಯ ನಿರ್ವಹಿಸಲು ಅರ್ಹರು ಎಂದು ಕೇಂದ್ರ ಹೇಳಿದೆ. ನಾಲ್ಕು ವರ್ಷ ಪೂರ್ಣಗೊಂಡ ನಂತರ ಸೇವೆಯಿಂದ ನಿವೃತ್ತಿಯಾಗುವ ಯುವಕರಿಗೆ ಸಂಬಳ ಮತ್ತು ಮೊತ್ತವನ್ನು ನೀಡಲಾಗುತ್ತಿದೆ. ನಿವೃತ್ತಿ ಬಳಿಕ ಯಾವುದೇ ಪಿಂಚಣಿ ಸೌಲಭ್ಯ ಸಿಗುವುದಿಲ್ಲ. ಇದು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗ್ನಿವೀರರಿಗೆ ಹಲವು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಲು ನಿರ್ಧರಿಸಿವೆ.

ಇದನ್ನೂ ಓದಿ:ಅಗ್ನಿಪಥ್ ಯೋಜನೆಯಿಂದ ಸೇನೆಗೆ ಯಾವುದೇ ಪ್ರಯೋಜನವಿಲ್ಲ: ಪ್ರಧಾನಿಗೆ ಕಾಂಗ್ರೆಸ್ ತಿರುಗೇಟು - Agnipath Scheme

ABOUT THE AUTHOR

...view details