ಹಾವೇರಿ: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಕನ್ನಡ ಸೀಸನ್ 11' ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಹಳ್ಳಿ ಹೈದ ಹನುಮಂತು 5 ಕೋಟಿಗೂ ಹೆಚ್ಚು ಮತಗಳಿಂದ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹನುಮಂತ ಲಮಾಣಿ ಅವರ ಸ್ವಾಗತಕ್ಕೆ ಗ್ರಾಮದಲ್ಲಿ ಭರ್ಜರಿ ತಯಾರಿ ನಡೆದಿದೆ.
ಬಿಗ್ ಬಾಸ್ 11ರ ವಿಜೇತ ಹನುಮಂತು ಸ್ನೇಹಿತರ ಬಳಗದಲ್ಲೀಗ ಸಂಭ್ರಮದ ವಾತಾವರಣವಿದೆ. ಜಿಲ್ಲೆಯ ಸವಣೂರು ತಾಲೂಕು ಚಿಲ್ಲೂರುಬಡ್ನಿಗೆ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಬೆಂಗಳೂರಿನಿಂದ ನಿನ್ನೆ ರಾತ್ರಿ ಹನುಮಂತು ಅವರ ಅಣ್ಣ ಮಾರುತಿ ವಾಪಸಾಗಿದ್ದಾರೆ. ತಂದೆ-ತಾಯಿ, ಸ್ನೇಹಿತರು ಸಹ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ.
ಅವನು ಇಷ್ಟಪಟ್ಟ ಹುಡುಗಿಯೊಂದಿಗೆ ಮದುವೆ : ಹನುಮಂತು ಅಣ್ಣ ಮಾರುತಿ ಮಾತನಾಡಿ, ತಮ್ಮ ಸಂತಸ ವ್ಯಕ್ತಪಡಿಸಿದರು. ಹನುಮಂತು ಯಾವ ಹುಡುಗಿ ಇಷ್ಟಪಟ್ಟಿದ್ದಾನೋ ಅದೇ ಹುಡುಗಿ ಜೊತೆಗೆ ಮದುವೆ ಮಾಡುತ್ತೇವೆ. ಸಹೋದರನಾಗಿ ನಾನು ಮುಂದೆ ನಿಂತು ಮದುವೆ ಮಾಡಿಸುತ್ತೇನೆ. ಎಲ್ಲರನ್ನೂ ಮದುವೆಗೆ ಕರೆಯುತ್ತೇವೆ ಎಂದು ತಿಳಿಸಿದರು.
ನಟ ಸುದೀಪ್ ಸರ್ ಅವರನ್ನು ವೇದಿಕೆ ಮೇಲೆ ನೋಡಿದ್ದು ತುಂಬಾನೇ ಖುಷಿಯಾಯ್ತು. ಹನುಮಂತನ ಸ್ನೇಹಿತರು ಭಜನೆ ಮಾಡಿದ್ದು ಬಹಳ ಸಂತೋಷವಾಯ್ತು. ಚಿಕ್ಕವಯಸ್ಸಿನಲ್ಲೇ ಜಾನಪದ ಹಾಡು, ಭಜನೆ ಮಾಡಿಕೊಂಡು ಇಷ್ಟು ಎತ್ತರಕ್ಕೆ ಬೆಳೆದಿದ್ದಾನೆ. 5 ಕೋಟಿಗೂ ಹೆಚ್ಚು ಮತಗಳು ಬಂದಿವೆ. ಅಭಿಮಾನಿಗಳ ಆಶೀರ್ವಾದ ಹನುಮಂತು ಮೇಲಿದೆ. ಕರುನಾಡಿನ ಜನರ ಮನಗೆದ್ದಿದ್ದಾನೆ. ಅವನ ಸ್ನೇಹಿತರು ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದಾರೆ ಎಂದು ಮಾರುತಿ ತಿಳಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಬೆನ್ನಲ್ಲೇ ಶಿವರಾಜ್ಕುಮಾರ್ ಭೇಟಿಯಾದ ಡಾಲಿ ಧನಂಜಯ್ - ಫೋಟೋ ಇಲ್ಲಿದೆ
ಹನುಮಂತು ಅವರ ಭಜನಾ ತಂಡದವರು ಭಜನೆ ಮಾಡುವ ಮೂಲಕ ಸಂಭ್ರಮಾಚರಿಸಿದರು. ತಮ್ಮ ತಂಡದ ಸದಸ್ಯ ಹನುಮಂತು ಬಿಗ್ ಬಾಸ್ 11ರ ವಿಜೇತನಾಗಿದ್ದಾನೆ ಎಂದು ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: 5.23 ಕೋಟಿಗೂ ಹೆಚ್ಚು ಮತ ಪಡೆದ ಬಿಗ್ಬಾಸ್ ವಿನ್ನರ್ ಹನುಮಂತುಗೆ ಸಿಕ್ಕ ಹಣವೆಷ್ಟು?
ಹನುಮಂತು ತನ್ನ ಗ್ರಾಮದ ಹೆಸರನ್ನು ಇಡೀ ರಾಜ್ಯಕ್ಕೆ ಪರಿಚಯಿಸಿದ್ದಾನೆ. ನಮ್ಮೂರ ಹುಡುಗ ನಮ್ಮ ಭಜನಾ ತಂಡದ ಸದಸ್ಯ ಬಿಗ್ ಬಾಸ್ ವಿಜೇತನಾಗಿದ್ದು, ನಮಗೆ ಸಂತಸ ತಂದಿದೆ. ಹನುಮಂತು ಶೀಘ್ರವೇ ಆಗಮನಿಸಲಿದ್ದಾನೆ. ಅವನನ್ನು ತೆರೆದ ವಾಹನದಲ್ಲಿ ವಿವಿಧ ಕಲಾತಂಡಗಳ ಜೊತೆ ವಿಜೃಂಭಣೆಯಿಂದ ಬರಮಾಡಿಕೊಳ್ಳುವುದಾಗಿ ಭಜನಾ ತಂಡದ ಸದಸ್ಯರು ತಿಳಿಸಿದರು.
ಗ್ರ್ಯಾಂಡ್ ಫಿನಾಲೆ ವೇದಿಕೆ ತಲುಪಿದ ಫೈನಲಿಸ್ಟ್ ಪಡೆದುಕೊಂಡ ಸ್ಥಾನಗಳು :
- ಬಿಗ್ ಬಾಸ್ ಕನ್ನಡ ಸೀಸನ್ 11 ವಿಜೇತ : ಹನುಮಂತ ಲಮಾಣಿ
- ಎರಡನೇ ಸ್ಥಾನ (ರನ್ನರ್ ಅಪ್): ತ್ರಿವಿಕ್ರಮ್
- ಮೂರನೇ ಸ್ಥಾನ : ರಜತ್ ಕಿಶನ್
- ನಾಲ್ಕನೇ ಸ್ಥಾನ : ಮೋಕ್ಷಿತಾ
- ಐದನೇ ಸ್ಥಾನ : ಮಂಜು
- ಆರನೇ ಸ್ಥಾನ : ಭವ್ಯಾ