ಕರ್ನಾಟಕ

karnataka

ETV Bharat / bharat

2025ರಲ್ಲಿ ಜನಗಣತಿಗೆ ಕೇಂದ್ರ ಸರ್ಕಾರ ಸಿದ್ಧತೆ: ಜಾತಿ ಗಣತಿ ಗೊಂದಲ ಮುಂದುವರಿಕೆ

2025ರಲ್ಲಿ ಜನಗಣತಿ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ಶುರು ಮಾಡಿದೆ. ಆದರೆ, ಜಾತಿ ಗಣತಿಯ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ.

2025 ರಲ್ಲಿ ಜನಗಣತಿಗೆ ಕೇಂದ್ರ ಸರ್ಕಾರ ಸಿದ್ಧತೆ
ಜನಗಣತಿಗೆ ಸಿದ್ಧತೆ (ETV Bharat)

By ETV Bharat Karnataka Team

Published : 5 hours ago

ನವದೆಹಲಿ:ಬಹುನಿರೀಕ್ಷಿತ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ-ಎನ್‌ಪಿಆರ್ ನವೀಕರಣ ಮುಂದಿನ ವರ್ಷ ಪ್ರಾರಂಭವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 2026ರವರೆಗೆ ಈ ಪ್ರಕ್ರಿಯೆ ನಡೆಯಲಿದೆ. ವರ್ಷದ ಕೊನೆಯಲ್ಲಿ ವಿವರಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಇದರ ಜೊತೆಗೆ, ಜನಗಣತಿ ನಡೆಸುವ ಚಕ್ರವೂ ಬದಲಾಗಲಿದೆ. ಅಂದರೆ ಈ ಗಣತಿಯನ್ನು 2025-2035ರ ನಡುವಿನ ಲೆಕ್ಕಾಚಾರ ಮಾಡಿದರೆ, ಮುಂದಿನ ಬಾರಿ 2035-2045ರ ಅವಧಿಯಲ್ಲಿ ಎಣಿಕೆ ಮಾಡಬೇಕಾಗುತ್ತದೆ. ಈ ಮಧ್ಯೆ, ಜಾತಿ ಗಣತಿ ಬಗ್ಗೆ ಸರ್ಕಾರ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.

ಗಣತಿಯಲ್ಲಿ ಕೇಳುವ ಪ್ರಶ್ನೆಗಳೇನು?:ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯು ಈಗಾಗಲೇ 31 ಪ್ರಶ್ನೆಗಳನ್ನು ಸಿದ್ಧಪಡಿಸಿದೆಯಂತೆ. ಅವನ್ನು ಈ ಗಣತಿಯಲ್ಲಿ ಜನರಿಗೆ ಕೇಳಲಾಗುತ್ತದೆ. ಹಿಂದಿನ ಜನಗಣತಿಯಲ್ಲಿ ಕುಟುಂಬದ ಮುಖ್ಯಸ್ಥರು, ಯಾವ ವರ್ಗ, ಕುಟುಂಬದಲ್ಲಿ ವಾಸಿಸುವ ಜನರ ಸಂಖ್ಯೆ, ಕುಟುಂಬದ ಮುಖ್ಯಸ್ಥರು ಯಾರು? (ಹೆಣ್ಣು-ಗಂಡು), ಮನೆಯಲ್ಲಿರುವ ಕೋಣೆಗಳ ಸಂಖ್ಯೆ, ವಿವಾಹಿತ ದಂಪತಿ ಸಂಖ್ಯೆ ಸೇರಿದಂತೆ ಮುಂತಾದ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಇದರ ಜೊತೆಗೆ, ಮನೆಯವರ ದೂರವಾಣಿ, ಇಂಟರ್ನೆಟ್ ಸಂಪರ್ಕ, ಮೊಬೈಲ್/ಸ್ಮಾರ್ಟ್‌ಫೋನ್, ಬೈಸಿಕಲ್, ಸ್ಕೂಟರ್ ಅಥವಾ ಮೋಟಾರ್ ಸೈಕಲ್, ಮೊಪೆಡ್, ಕಾರು, ಜೀಪ್ ಅಥವಾ ವ್ಯಾನ್ ಹೊಂದಿರುವ ಬಗ್ಗೆ ಪ್ರಶ್ನೆಗಳು ಬರಲಿವೆ.

ಜನ ಗಣತಿಯಲ್ಲಿ ಕೇಳುವ ಇತರ ಪ್ರಶ್ನೆಗಳಿವು

  • ಮನೆಯಲ್ಲಿ ಯಾವ ಧಾನ್ಯಗಳ ಬಳಕೆ ಮಾಡಲಾಗುತ್ತದೆ
  • ಕುಡಿಯುವ ನೀರಿನ ಪ್ರಮುಖ ಮೂಲಗಳ ವಿವರ
  • ವಿದ್ಯುತ್​​ ಸಂಪರ್ಕದ ಮೂಲವೇನು?
  • ಶೌಚಾಲಯ ಮತ್ತು ಅದರ ಪ್ರಕಾರವೇನು?
  • ತ್ಯಾಜ್ಯ ನೀರು ನಿರ್ವಹಣೆ ಸೌಲಭ್ಯ, ಸ್ನಾನಗೃಹದ ಸೌಲಭ್ಯಗಳ ಲಭ್ಯತೆ
  • ಅಡುಗೆ ಮನೆ, ಎಲ್​​ಪಿಜಿ/ಪಿಎನ್​ಜಿ ಸಂಪರ್ಕದ ಲಭ್ಯತೆ, ಅಡುಗೆಗೆ ಬಳಸುವ ಮುಖ್ಯ ಇಂಧನ
  • ರೇಡಿಯೋ, ಟ್ರಾನ್ಸಿಸ್ಟರ್, ಟಿವಿ ಇತ್ಯಾದಿಗಳ ಲಭ್ಯತೆ

ಲೋಕಸಭೆ ಕ್ಷೇತ್ರ ಪುನರ್​​ವಿಂಗಡಣೆ:ಜನಗಣತಿಯ ನಂತರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಯಲಿದೆ. 2028ರ ವೇಳೆಗೆ ಇದನ್ನು ಮುಗಿಸುವ ಸಾಧ್ಯತೆ ಇದೆ. ಜನಸಂಖ್ಯೆ ಅನುಗುಣವಾಗಿ ಪುನರ್​​ವಿಂಗಡಣೆ ನಡೆದಲ್ಲಿ ಸ್ಥಾನಗಳು ಕಳೆದುಕೊಳ್ಳುವ ಬಗ್ಗೆ ದಕ್ಷಿಣ ಭಾರತದ ರಾಜ್ಯಗಳು ಆತಂಕಕ್ಕೀಡಾಗಿವೆ. ಜನಸಂಖ್ಯೆ ನಿಯಂತ್ರಣ ಮಾಡಿರುವ ಈ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳೂ ಸಹಜವಾಗಿ ಕಡಿಮೆಯಾಗಲಿವೆ. ಇದರಿಂದ ದೇಶದ ರಾಜಕೀಯದಲ್ಲಿ ದಕ್ಷಿಣದ ಪ್ರಾಮುಖ್ಯತೆ ಕಡಿಮೆಯಾಗಲಿದೆ ಎಂಬುದು ಈ ಭಾಗದ ಕಳವಳವಾಗಿದೆ.

ಜಾತಿ ಗಣತಿಗಾಗಿ ಪ್ರತಿಪಕ್ಷಗಳ ಪಟ್ಟು:ಆರ್‌ಜೆಡಿ, ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಜನಗಣತಿಯ ಜೊತೆಗೆ ಜಾತಿ ಗಣತಿ ನಡೆಸುವಂತೆಯೂ ಒತ್ತಾಯಿಸುತ್ತಿವೆ. ಈ ಬಾರಿ ನಡೆಯಲಿರುವ ಜನಗಣತಿಯಲ್ಲಿ ಜಾತಿ ಗಣತಿ ಸೇರಿದೆಯೇ ಅಥವಾ ಲೋಕಸಭೆಯಲ್ಲಿ ರಾಜ್ಯಗಳ ಪ್ರಾತಿನಿಧ್ಯವನ್ನು ಇದೇ ಲೆಕ್ಕಾಚಾರ ಬಳಸಲಾಗುವುದೇ ಎಂಬುದರ ಬಗ್ಗೆ ಕೇಂದ್ರಕ್ಕೆ ಕಾಂಗ್ರೆಸ್ ಸ್ಪಷ್ಟನೆ ಕೇಳಿದೆ. ಈ ಬಗ್ಗೆ ಸರ್ವಪಕ್ಷ ಸಭೆ ಕರೆಯುವಂತೆಯೂ ಸೂಚಿಸಲಾಗಿದೆ.

ಇದನ್ನೂ ಓದಿ:ಆ ಮೂರು ದೇಶಗಳಿಂದ 'ಡಿಜಿಟಲ್​​ ಅರೆಸ್ಟ್​' ವಂಚನೆ: ₹120 ಕೋಟಿ ಕಳೆದುಕೊಂಡ ಭಾರತೀಯರು

ABOUT THE AUTHOR

...view details