ಕರ್ನಾಟಕ

karnataka

ETV Bharat / bharat

BMW ಕಾರು ಡಿಕ್ಕಿ ಹೊಡೆದು ಪತ್ನಿ ಸಾವು, ಪತಿ ಗಂಭೀರ; ನ್ಯಾಯ ಎಲ್ರಿಗೂ ಒಂದೇ ಎಂದ ಸಿಎಂ - Mumbai Hit And Run

ಮುಂಬೈನ ವರ್ಲಿ ಪ್ರದೇಶದಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ನಡೆದಿದೆ. ಶಿವಸೇನೆ ಮುಖಂಡರೊಬ್ಬರ ಕಾರು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ಡಿಕ್ಕಿ ಹೊಡೆದಿದೆ.

By ETV Bharat Karnataka Team

Published : Jul 7, 2024, 5:49 PM IST

SHIV SENA LEADER CAR SEIZED  CASE ON SHIV SENA LEADER SON  HIT AND RUN CASE  ACCIDENT IN MUMBAI WORLI
ಡಿಕ್ಕಿ ಹೊಡೆದ ಬಿಎಂಡಬ್ಲ್ಯೂ ಕಾರು, ಮೃತಪಟ್ಟ ಮಹಿಳೆ (ETV Bharat)

ಮುಂಬೈ(ಮಹಾರಾಷ್ಟ್ರ):ಮುಂಬೈನಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್ ಪ್ರಕರಣ ಬೆಳಕಿಗೆ ಬಂದಿದೆ. ವರ್ಲಿ ಪ್ರದೇಶದಲ್ಲಿ ವೇಗವಾಗಿ ಬಂದ ಐಷಾರಾಮಿ ಬಿಎಂಡಬ್ಲ್ಯು ಕಾರು ಬೈಕ್‌ನಲ್ಲಿ ತೆರಳುತ್ತಿದ್ದ ಮೀನುಗಾರ ದಂಪತಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಮೃತರನ್ನು ಕಾವೇರಿ ನಖ್ವಾ (45) ಎಂದು ಗುರುತಿಸಲಾಗಿದೆ. ಇವರ ಪತಿ ಪ್ರದೀಪ್ ನಖ್ವಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ದಂಪತಿ ಮೀನು ಸಂಗ್ರಹಿಸಲು ತಮ್ಮ ಬೈಕ್‌ನಲ್ಲಿ ಸಸೂನ್ ಡಾಕ್‌ಗೆ ಹೋಗಿ ಮಾರುಕಟ್ಟೆಗೆ ತೆರಳುತ್ತಿದ್ದರು. ಈ ವೇಳೆ, ವರ್ಲಿಯ ಏಟ್ರಿಯಾ ಮಾಲ್‌ನ ಮುಂಭಾಗ ಹಿಂದಿನಿಂದ ಬಂದ ಕಾರು ಇವರಿದ್ದ ಬೈಕ್‌ಗೆ ಡಿಕ್ಕಿಯಾಗಿದೆ.

ಅಪಘಾತದ ನಂತರ ಸ್ಥಳದಲ್ಲಿದ್ದ ಜನರು ದಂಪತಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಾಗಲೇ ಮಹಿಳೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪತಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಆಡಳಿತ ಪಕ್ಷದ ನಾಯಕನ ಕಾರು: ನೋಂದಣಿ ಸಂಖ್ಯೆಯ ಆಧಾರದ ಮೇಲೆ ವಾಹನದ ಮಾಲೀಕರನ್ನು ಗುರುತಿಸಲಾಗಿದೆ. ಈ ಕಾರು ಶಿವಸೇನಾ ಶಿಂಧೆ ಬಣದ ಪಾಲ್ಘರ್ ನಾಯಕರೊಬ್ಬರಿಗೆ ಸೇರಿದೆ. ಪೊಲೀಸರು ಅವರಿಗೆ ನೋಟಿಸ್ ಜಾರಿ ಮಾಡಿ ಠಾಣೆಗೆ ಬರುವಂತೆ ಸೂಚಿಸಿದ್ದಾರೆ. ಅಪಘಾತದ ಸಮಯದಲ್ಲಿ ತನ್ನ ಮಗ ಚಾಲಕನೊಂದಿಗೆ ಕಾರಿನಲ್ಲಿ ಕುಳಿತಿದ್ದ ಎಂದು ಶಿವಸೇನೆ ನಾಯಕ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಹೇಳಿಕೆ ಆಧರಿಸಿ ಪೊಲೀಸರು ಅವರ ಪುತ್ರ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರನ್ನು ಯಾರು ಚಲಾಯಿಸುತ್ತಿದ್ದರು ಎಂಬುದು ಸ್ಪಷ್ಟವಾಗಿಲ್ಲ. ರಾಜಕೀಯ ನಾಯಕನ ಮಗ ವಯಸ್ಕನೋ ಅಥವಾ ಅಪ್ರಾಪ್ತನೋ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನ್ಯಾಯಸಮ್ಮತ ಕ್ರಮ-ಸಿಎಂ:ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನಾಗ್ಪುರದಲ್ಲಿ ಪ್ರತಿಕ್ರಿಯಿಸಿ, ಆರೋಪಿಗಳು ಯಾರೇ ಆಗಿರಲಿ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಗುಜರಾತ್​ನಲ್ಲಿ ಬಹುಮಹಡಿ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ ಏಳಕ್ಕೆ ಏರಿಕೆ - Gujarat Building Collapse

ABOUT THE AUTHOR

...view details