ಕರ್ನಾಟಕ

karnataka

By ETV Bharat Karnataka Team

Published : Feb 3, 2024, 6:22 AM IST

Updated : Feb 3, 2024, 9:53 AM IST

ETV Bharat / bharat

ಜಾರ್ಖಂಡ್​ ಸರ್ಕಾರವನ್ನ ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ; ರಾಹುಲ್​ ಗಾಂಧಿ

ಕೇಂದ್ರ ಸರ್ಕಾರದ ವಿರುದ್ಧ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಜಾರ್ಖಂಡ್ ಸರ್ಕಾರವನ್ನು ಬೀಳಿಸಲು ಮೋದಿ ಸರ್ಕಾರ ಪಿತೂರಿ ಮಾಡಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಜಾರ್ಖಂಡ್​ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿದೆ; ರಾಹುಲ್​ ಗಾಂಧಿ
ಬಿಜೆಪಿ ಜಾರ್ಖಂಡ್​ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿದೆ; ರಾಹುಲ್​ ಗಾಂಧಿ

ಪಾಕುರ್ (ಜಾರ್ಖಂಡ್): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಶುಕ್ರವಾರ ಜಾರ್ಖಂಡ್‌ ಪ್ರವೇಶಿಸಿದೆ. ಜಾರ್ಖಂಡ್​​ಗೆ ಯಾತ್ರೆ ಪ್ರವೇಶ ಮಾಡುತ್ತಿದ್ದಂತೆ ರಾಹುಲ್​ ಗಾಂಧಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದರು. ಜಾರ್ಖಂಡ್ ಸರ್ಕಾರವನ್ನು ಬೀಳಿಸಲು ಭಾರತೀಯ ಜನತಾ ಪಕ್ಷ ಪ್ರಯತ್ನಿಸಿದೆ ಎಂದು ಆರೋಪಿಸಿದರು. ಇದೊಂದು ಪಿತೂರಿ ಎಂದೂ ಗಂಭೀರ ಆರೋಪ ಮಾಡಿದರು.

"ಜಾರ್ಖಂಡ್‌ನಲ್ಲಿ, ಜನರಿಂದ ಆಯ್ಕೆಯಾದ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನ ಮಾಡಿದೆ. ಆದರೆ ಈ ಯತ್ನ ಸಫಲವಾಗಿಲ್ಲ. ನೀವೆಲ್ಲ ಸೇರಿಕೊಂಡು ಬಿಜೆಪಿಯ ಈ ಪಿತೂರಿಯನ್ನು ಧೈರ್ಯದಿಂದ ಎದುರಿಸಿದ್ದೀರಿ. ನಿಮ್ಮ ಸಹಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನಾವು ಬಿಜೆಪಿಗೆ ಹೆದರುವುದಿಲ್ಲ ಎಂದು ರಾಹುಲ್​ ಗಾಂಧಿ ಇದೇ ವೇಳೆ ಗುಡುಗಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಭಾರತದಲ್ಲಿ ಕೋಟ್ಯಂತರ ಜನರಿಗೆ 'ಅನ್ಯಾಯ'ವಾಗುತ್ತಿದೆ. ಇಂದಿನ ಭಾರತದಲ್ಲಿ, ಯುವಕರು ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನರೇಂದ್ರ ಮೋದಿ ಜಿ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯನ್ನು ಜಾರಿಗೆ ತರುವ ಮೂಲಕ ಸಣ್ಣ ಉದ್ಯಮಿಗಳನ್ನು ನಾಶಪಡಿಸಿದ್ದಾರೆ. ಅದಕ್ಕಾಗಿಯೇ ನಾವು ಆರ್ಥಿಕ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ನಿಮ್ಮೊಂದಿಗೆ ಮಾತನಾಡಲು ಈ ಯಾತ್ರೆಯನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.

ಬಿಜೆಪಿ ಎಲ್ಲಿ ದ್ವೇಷದ ಮಾರುಕಟ್ಟೆಯನ್ನು ತೆರೆಯುತ್ತದೆಯೋ ಅಲ್ಲಿ ಕಾಂಗ್ರೆಸ್ ಪ್ರೀತಿಯ ಅಂಗಡಿ ತೆರೆಯುತ್ತದೆ ಎಂದು ರಾಹುಲ್​ ಹೇಳಿದರು. ನ್ಯಾಯಕ್ಕಾಗಿ ಈ ಹೋರಾಟವು ಸಾರ್ವಜನಿಕ ಸಹಭಾಗಿತ್ವವನ್ನು ಒಳಗೊಂಡಿದೆ. ನಿಮ್ಮ ಬೆಂಬಲವೇ ನಮ್ಮ ಶಕ್ತಿ. ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ನಿಮ್ಮ ಶಕ್ತಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ಅವರು ಇದೇ ವೇಳೆ ಜಾರ್ಜಂಡ್ ಜನತೆಯನ್ನು ಉದ್ದೇಶಿಸಿ ಹೇಳಿದರು.

ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಸಿಕ್ಕ ದಿನದಂದೇ ರಾಹುಲ್​ ಗಾಂಧಿ ನ್ಯಾಯ ಯಾತ್ರೆ ಜಾರ್ಖಂಡ್ ತಲುಪಿದ್ದು ವಿಶೇಷ. ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಕೂಡ ಪಾಕುರ್‌ನಲ್ಲಿ ನಡೆದ ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಬಿಹಾರ ಮತ್ತು ಪಶ್ಚಿಮ ಬಂಗಾಳದ ಸೀಮಾಂಚಲ್ ಪ್ರದೇಶದ ಜನರಿಂದ ಅದ್ದೂರಿ ಸ್ವಾಗತ ದೊರೆಯಿತು. ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆ ಅಸ್ಸೋಂ, ಪಶ್ಚಿಮಬಂಗಾಳದಲ್ಲಿ ಪ್ರವೇಶ ಮಾಡಿ ಇದೀಗ ಜಾರ್ಖಂಡ್​​ಗೆ ಬಂದಿದೆ.

ಇದನ್ನು ಓದಿ:ಉತ್ತರಪ್ರದೇಶ: ಭಾರತ್ ಜೋಡೋ ನ್ಯಾಯ ಯಾತ್ರೆಗೆ ಕೈ ಜೋಡಿಸುವಂತೆ ಎಲ್ಲ ಮಿತ್ರಪಕ್ಷಗಳಿಗೆ ಕರೆ ಕೊಟ್ಟ ಕಾಂಗ್ರೆಸ್​​

Last Updated : Feb 3, 2024, 9:53 AM IST

ABOUT THE AUTHOR

...view details