ಭಾರತದಲ್ಲಿ ನಾಣ್ಯಗಳ ಬಳಕೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ನಾಣ್ಯಗಳು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿವೆ. ಅವು ಕಾಲಕಾಲಕ್ಕೆ ಬದಲಾವಣೆ ಕಂಡಿವೆ. ನಾಣ್ಯಗಳು ಬಹುವೇಗದ ಬದಲಾವಣೆ ಹೊಂದಿದ್ದು ಸಿಂಧು ನಾಗರಿಕತೆಯ ಕಾಲದಲ್ಲಂತೆ. ಹಿಂದಿನ ರಾಜರುಗಳು, ಮೊಘಲರ ಆಳ್ವಿಕೆಯ ಕಾಲದಲ್ಲೆಲ್ಲಾ ನಾಣ್ಯಗಳ ಮೂಲಕ ವಹಿವಾಟು ಜೋರಾಗಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಬ್ರಿಟಿಷ್ ಆಡಳಿತಾವಧಿಯಲ್ಲೂ ನಾಟ್ಯಗಳ ಭರಾಟೆ ಕಡಿಮೆ ಇರಲಿಲ್ಲ.
ಸ್ವಾತಂತ್ರ್ಯಾ ನಂತರವೂ ನಾಣ್ಯಗಳ ಚಲಾವಣೆ ಮುಂದುವರೆಯಿತು. ಆದರೆ, ಈ ವೇಳೆ ಸಂಭವಿಸಿದ ಪ್ರಮುಖ ಬದಲಾವಣೆಯೆಂದರೆ, ಈ ಹಿಂದೆಲ್ಲಾ ನಾಣ್ಯಗಳಲ್ಲಿ ಮುದ್ರಿಸಲ್ಪಡುತ್ತಿದ್ದ ರಾಜರು ಮತ್ತು ಅವರ ಚಿಹ್ನೆಗಳು ನಿಂತವು. ಆರ್ಬಿಐ ನಾಣ್ಯಗಳ ಚಲಾವಣೆಯಲ್ಲಿ ಹಕ್ಕು ಪಡೆಯಿತು. ನಾಣ್ಯಗಳ ಮೇಲೆ ದೇಶದ ಹಲವು ನಾಯಕರ ಚಿತ್ರಣಗಳನ್ನು ಮುದ್ರಿಸಲಾಯಿತು. ಅನೇಕ ಸ್ವಾತಂತ್ರ್ಯ ಹೋರಾಟಗಾರರು, ವಿಶೇಷ ವ್ಯಕ್ತಿಗಳ ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆಗೊಳಿಸಿರುವುದನ್ನು ನಾವು ಕಾಣಬಹುದು. ಈ ಪೈಕಿ ಬಲು ಅಪರೂಪದ ನಾಣ್ಯಗಳ ಮೌಲ್ಯ ಇಂದು ಹೆಚ್ಚಿದೆ.
ತಿಲಕರ ನಾಣ್ಯ: ವಿಶೇಷ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವುಳ್ಳ ಮನೋಜ್ ಜೈನ್ ಅವರ ಪ್ರಕಾರ, 2007ರಲ್ಲಿ ಬಾಲಾ ಗಂಗಾಧರ್ ತಿಲಕ್ ಅವರ 150ನೇ ಜನ್ಮ ಜಯಂತಿ ಹಿನ್ನೆಲೆಯಲ್ಲಿ 5 ರೂಪಾಯಿಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಾಯಿತು. ಈ ನಾಣ್ಯ ಚಲಾವಣೆಗೆ ಬಿಡುಗಡೆಯಾದ ಬೆನ್ನಲ್ಲೇ ಸಂಸತ್ತಿನಲ್ಲಿ ಕೆಲ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಅದರಲ್ಲಿದ್ದ 'ಜೀ' ಎಂಬ ಸಂಬೋಧನೆಯೇ ಇದಕ್ಕೆ ಕಾರಣ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಮತ್ತು ನೆಹರೂ ಅವರಿಗೆ ಜೀ ಎಂದು ನಾಣ್ಯದಲ್ಲಿ ಸಂಬೋಧಿಸಿಲ್ಲ. ಆದರೆ, ತಿಲಕರ ನಾಣ್ಯದಲ್ಲಿ ತಿಲಕ್ಜೀ ಎಂದು ಮುದ್ರಿಸಲಾಗಿದೆ ಎಂಬುದು ಆಕ್ಷೇಪಕ್ಕೆ ಕಾರಣವಾದ ವಿಚಾರ. ಇದರ ಬೆನ್ನಲ್ಲೇ ನಾಣ್ಯಗಳನ್ನು ಹಿಂಪಡೆಯಲಾಯಿತು. ಈ ನಡುವೆ ಅನೇಕ ನಾಣ್ಯಗಳು ಚಲಾವಣೆಯಲ್ಲಿ ಹಾಗೇ ಉಳಿದು ಹೋದವು.
ಇದಾದ ನಂತರದಲ್ಲಿ, ತಿಲಕರ 150ನೇ ಜನ್ಮ ಜಯಂತಿ ಎಂದು ಮುದ್ರಿಸಿ ಹೊಸ ನಾಣ್ಯಗಳನ್ನು ಬಿಡುಗಡೆ ಮಾಡಲಾಯಿತು. ಇಂದು ತಿಲಕ್ಜೀ ಎಂದು ನಮೂದಿಸಿದ್ದ ಜನ್ಮದಿನದ ನಾಣ್ಯ 8ರಿಂದ 10 ಸಾವಿರ ರೂ.ಗೆ ಲಭ್ಯವಿದೆ. ಮೂರನೇ ಬಾರಿಗೆ ನಾಣ್ಯ ಬಿಡುಗಡೆ ಮಾಡಿದಾಗ, ಸಿಂಹದ ಚಿಹ್ನೆಯ ಸುತ್ತಲೂ 52 ಚುಕ್ಕೆಗಳ ಬದಲಿಗೆ ಕೇವಲ 51 ಚುಕ್ಕೆಗಳಿದ್ದವು. ಇದರಿಂದಾಗಿ ಈ ನಾಣ್ಯ ಹೆಚ್ಚು ಅತೀ ಅಪರೂಪವಾಗಿದ್ದು, ಇದರ ಬೆಲೆ ಇಂದು 28 ರಿಂದ 30 ಸಾವಿರ ರೂ ಇದೆ.
ಆಜಾದ್ ಹಿಂದ್ ಫೌಜ್ ಸಂಸ್ಥಾಪಕ ಸುಭಾಷ್ ಚಂದ್ರ ಬೋಸ್ ಅವರ 100ನೇ ಜನ್ಮ ದಿನಾಚರಣೆ 1997ರಲ್ಲಾಯಿತು. ಆದರೆ, ಸರ್ಕಾರ 1996ಕ್ಕೆ ಆತುರವಾಗಿ ಅವರ ಸ್ಮರಣಾರ್ಥ 1 ರೂ ನಾಣ್ಯ ಬಿಡುಗಡೆ ಮಾಡಿತು. ಇದಾದ ಬಳಿಕ ಇದು ಅವಧಿಗೆ ಮೊದಲೇ ನಾಣ್ಯ ಬಿಡುಗಡೆ ಮಾಡಿರುವುದನ್ನು ಅರಿತು, ಹಿಂಪಡೆಯಲಾಯಿತು. 1997ರಲ್ಲಿ ಮರು ಬಿಡುಗಡೆ ಮಾಡಲಾಯಿತು. ಇದೂ ಕೂಡ ಅಪರೂಪದ ನಾಣ್ಯಗಳಲ್ಲಿ ಸ್ಥಾನ ಪಡೆದಿದೆ. 1996ರಲ್ಲಿ ಚಲಾವಣೆಯದ ಈ 2 ರೂ ಮೌಲ್ಯದ ನಾಣ್ಯ ಮನೋಜ್ ಜೈನ್ ಅವರ ಬಳಿ ಇದ್ದು, ಇದರ ಈಗಿನ ಮೌಲ್ಯ 8 ಸಾವಿರ ಎಂದು ಅವರು ಹೇಳಿದ್ದಾರೆ.
ದುರ್ಗಾದಾಸ್ ನಾಣ್ಯಗಳು ಬಲು ಅಪರೂಪ: ನಾಣ್ಯ ಸಂಗ್ರಹಕಾರ ವಿಶಾಲ್ ಛಟ್ವಾನಿ ಅವರು ಹೇಳುವ ಪ್ರಕಾರ, ಮಾರ್ವಾಡಿಯ ಧೈರ್ಯಶಾಲಿ ಮಗನಾದ ವೀರ್ ದುರ್ಗದಾಸ್ ಅವರ ನಾಣ್ಯಗಳು ಅಪರೂಪ. ಈ ನಾಣ್ಯದ ಕುರಿತು ಬಹುತೇಕ ಮಾರ್ವಾಡಿಗಳಿಗೇ ತಿಳಿದಿಲ್ಲ. 2003ರಲ್ಲಿ ಸರ್ಕಾರ ವೀರ್ ದುರ್ಗಾದಾಸ್ ಅವರ ಸ್ಮರಣಾರ್ಧ 1 ರೂ ನಾಣ್ಯ ಬಿಡುಗಡೆ ಮಾಡಿತ್ತು. ಈ ನಾಣ್ಯ ಕೆಲವು ಸಾವಿರ ರೂ.ಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂದು 1 ರೂ ನಾಣ್ಯದ ಬೆಲೆ 2,500.
ಇದು ನಿಮಗೆ ತಿಳಿದಿರಲಿ: ಕೇಂದ್ರ ಸರ್ಕಾರ ನಾಣ್ಯವನ್ನು ದೇಶದ ನಾಲ್ಕು ಭಾಗಗಳಾದ ಹೈದರಾಬಾದ್, ಮುಂಬೈ, ಕೋಲ್ಕತ್ತಾ ಮತ್ತು ನೋಯ್ಡಾದಲ್ಲಿ ಟಂಕಿಸುತ್ತದೆ. ನೋಯ್ಡಾ ಮುದ್ರಣಾಲಯವನ್ನು ಸ್ವಾತಂತ್ರ್ಯಾ ಬಳಿಕ ಸ್ಥಾಪಿಸಲಾಯಿತು. ಉಳಿದವು ಕನಿಷ್ಠ 200 ವರ್ಷ ಹಳೆಯವು. ಪ್ರತೀ ಘಟಕವೂ ತನ್ನದೇ ಆದ ವಿಶೇಷ ಗುರುತನ್ನು ಹೊಂದಿದೆ.
ನಾಣ್ಯದ ಕೆಳಭಾಗದಲ್ಲಿ ಚುಕ್ಕಿ ಇದ್ದರೆ ಅದು ನೋಯ್ಡಾದಲ್ಲಿ ಮುದ್ರಿತ ಎಂಬುದನ್ನು ತಿಳಿಸುತ್ತದೆ. ಮುಂಬೈನಲ್ಲಿ ಮುದ್ರಿತವಾದ ನಾಣ್ಯಗಳ ಕೆಳಗೆ ಮೇಲೆ ಡೈಮಂಡ್ ರೀತಿಯ ಮಾರ್ಕ್ ಅನ್ನು ಕಾಣಬಹುದು. ಹೈದರಾಬಾದ್ನಲ್ಲಿ ನಾಣ್ಯ ಮುದ್ರಣಗೊಂಡರೆ ಅದರಲ್ಲಿ ಸ್ಟಾರ್ ಚಿಹ್ನೆ ಹಾಗೂ ಯಾವುದೇ ಗುರುತು ಇಲ್ಲದಿದ್ದರೆ ಅದು ಕೋಲ್ಕತ್ತಾದಲ್ಲಿ ಮುದ್ರಣಗೊಂಡ ಕಾಯಿನ್ ಎಂದು ತಿಳಿಯಬಹುದು.
ಇದನ್ನೂ ಓದಿ: 35 ವರ್ಷದ ಉಳಿತಾಯದ ಹಣವನ್ನು ಶಿಕ್ಷಣ ಸಂಸ್ಥೆಗೆ ದಾನ ಮಾಡಿದ ಮಹಿಳೆ
ಇದನ್ನೂ ಓದಿ: ಮಹಿಳೆಯರ ಸುರಕ್ಷತೆಗೆ ಶೂ ಡಿವೈಸ್ ಆವಿಷ್ಕರಿಸಿದ ವಿದ್ಯಾರ್ಥಿ; ಆಪತ್ತಿನಲ್ಲಿ ಇದು ಹೇಗೆ ಕೆಲಸ ಮಾಡುತ್ತೆ?