ಕರ್ನಾಟಕ

karnataka

ಲೋಕಸಭೆ ಚುನಾವಣೆ: ಬಿಜೆಪಿ ಐದನೇ ಪಟ್ಟಿ ಬಿಡುಗಡೆ; ಶೆಟ್ಟರ್​, ಕಾಗೇರಿ, ಸುಧಾಕರ್​ ಸೇರಿ ನಾಲ್ವರಿಗೆ ಟಿಕೆಟ್​ - BJP FIFTH LIST

By ANI

Published : Mar 24, 2024, 10:08 PM IST

ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬೆಳಗಾವಿಯಿಂದ ಜಗದೀಶ್​ ಶೆಟ್ಟರ್​, ಉತ್ತರ ಕನ್ನಡದಿಂದ ವಿಶ್ವೇಶ್ವರ್ ಹೆಗಡೆ ಕಾಗೇರಿ, ಚಿಕ್ಕಬಳ್ಳಾಪುರದಿಂದ ಡಾ. ಕೆ ಸುಧಾಕರ್, ರಾಯಚೂರು ಕ್ಷೇತ್ರದಿಂದ ರಾಜಾ ಅಮರೇಶ್ವರ ನಾಯಕ ಸೇರಿದಂತೆ ದೇಶಾದ್ಯಂತ 111 ಲೋಕಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

Etv Bharat
Etv Bharat

ನವದೆಹಲಿ:ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಉತ್ತರ ಪ್ರದೇಶದ 13 ಲೋಕಸಭಾ ಸ್ಥಾನಗಳು ಸೇರಿದಂತೆ ದೇಶಾದ್ಯಂತ 111 ಲೋಕಸಭಾ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಜಗದೀಶ್​ ಶೆಟ್ಟರ್​ ಅವರಿಗೆ ಬೆಳಗಾವಿ ಟಿಕೆಟ್​​ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅನಂತಕುಮಾರ್​ ಹೆಗಡೆ ಅವರಿಗೆ ಟಿಕೆಟ್​ ಕೈತಪ್ಪಿದ್ದರೆ, ಈ ಬಾರಿ ಕಾಗೇರಿಗೆ ಮಣೆ ಹಾಕಲಾಗಿದೆ.

ಮತ್ತೊಂದೆಡೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮಾಜಿ ಸಚಿವ ಡಾ. ಕೆ. ಸುಧಾಕರ್​ ಅವರಿಗೆ ಟಿಕೆಟ್​ ಒಲಿದಿದೆ. ಮತ್ತೊಂದೆಡೆ ರಾಯಚೂರು ಕ್ಷೇತ್ರದಿಂದ ಹಾಲಿ ಸಂಸದ ರಾಜಾ ಅಮರೇಶ್ವರ್​ ನಾಯಕ ಅವರಿಗೆ ಮತ್ತೊಮ್ಮೆ ಟಿಕೆಟ್​ ನೀಡಲಾಗಿದೆ.

ಇತ್ತ ರಾಮಾಯಣದಲ್ಲಿ ರಾಮನ ಪಾತ್ರ ಮಾಡಿದ್ದ ಅರುಣ್ ಗೋವಿಲ್ ಅವರನ್ನು ಮೀರತ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಬಿಜೆಪಿ ಮಾಡಿದ್ದು, ಪಿಲಿಭಿತ್​ನ ಹಾಲಿ ಸಂಸದ ವರುಣ್ ಗಾಂಧಿಗೆ ಈ ಬಾರಿ ಟಿಕೆಟ್ ಕೈ ತಪ್ಪಿದೆ.

ಸಹರಾನ್‌ಪುರದಿಂದ ರಾಘವ್ ಲಖನ್‌ಪಾಲ್, ಮೊರಾದಾಬಾದ್‌ನಿಂದ ಸರ್ವೇಶ್ ಸಿಂಗ್, ಮೀರತ್‌ನಿಂದ ಅರುಣ್ ಗೋವಿಲ್, ಗಾಜಿಯಾಬಾದ್‌ನಿಂದ ಅತುಲ್ ಗರ್ಗ್, ಅಲಿಗಢದಿಂದ ಸತೀಶ್ ಗೌತಮ್, ಹತ್ರಾಸ್ (ಎಸ್‌ಸಿ) ನಿಂದ ಅನೂಪ್ ವಾಲ್ಮೀಕಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಬದೌನ್‌ನಿಂದ ದುರ್ವಿಜಯ್ ಸಿಂಗ್ ಶಾಕ್ಯಾ, ಬರೇಲಿಯಿಂದ ಛತ್ರಪಾಲ್ ಸಿಂಗ್ ಗಂಗ್ವಾರ್, ಪಿಲಿಭಿತ್‌ನಿಂದ ಜಿತಿನ್ ಪ್ರಸಾದ್, ಸುಲ್ತಾನ್‌ಪುರದಿಂದ ಮೇನಕಾ ಗಾಂಧಿ, ಕಾನ್ಪುರದಿಂದ ರಮೇಶ್ ಅವಸ್ತಿ, ಬಾರಾಬಂಕಿಯಿಂದ ರಾಜ್ರಾಣಿ ರಾವತ್ (ಎಸ್‌ಸಿ), ಬಹ್ರೈಚ್​ನಿಂದ ಅರವಿಂದ್ ಗೊಂಡ್ (ಎಸ್‌ಸಿ) ಅವರನ್ನು ಚುನಾವಣೆಯಲ್ಲಿ ಕಣಕ್ಕಿಳಿಸಲಾಗಿದೆ.

ಬಿಜೆಪಿ ತನ್ನ ಐದನೇ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಲೋಕಸಭೆ ಚುನಾವಣೆಯಿಂದ ಹಲವು ದಿಗ್ಗಜರನ್ನು ಹೊರಹಾಕಿದೆ. ಬಂಡಾಯ ವರ್ತನೆಗೆ ಹೆಸರಾಗಿರುವ ಹಾಲಿ ಪಿಲಿಭಿತ್ ಸಂಸದ ವರುಣ್ ಗಾಂಧಿ ಅವರ ಟಿಕೆಟ್ ರದ್ದಾಗಿದೆ. ಅಲ್ಲದೆ, ಘಾಜಿಯಾಬಾದ್‌ನಿಂದ ಎರಡು ಬಾರಿ ಸಂಸದರಾಗಿದ್ದ ಜನರಲ್ ವಿಕೆ ಸಿಂಗ್ ಅವರ ಟಿಕೆಟ್ ಅನ್ನು ರದ್ದುಗೊಳಿಸುವ ಮೂಲಕ ಬಿಜೆಪಿ ಅತುಲ್ ಗರ್ಗ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಆದರೂ ಈ ಪಟ್ಟಿ ಬರುವ ಮುನ್ನ ಜನರಲ್ ವಿಕೆ ಸಿಂಗ್ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು.

ಕಂಗನಾಗೆ ಒಲಿದ ಟಿಕೆಟ್​: ಈ ಬಾರಿಯ ಬಿಡುಗಡೆಗೊಂಡಿರುವ ಬಿಜೆಪಿ ಪಟ್ಟಿಯಲ್ಲಿ ಅಭ್ಯರ್ಥಿಯಾಗಿ ಹೊರಹೊಮ್ಮಿರುವ ದೊಡ್ಡ ಹೆಸರು ಚಿತ್ರನಟಿ ಕಂಗನಾ ರಣಾವತ್ ಅವರದ್ದು. ಪಕ್ಷವು ಅವರನ್ನು ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭೆ ಚುನಾವಣೆಗೆ ಕಣಕ್ಕಿಳಿಸಿದೆ. ಇದಲ್ಲದೆ ಟಿವಿಯ ಸೂಪರ್‌ಹಿಟ್ ಶ್ರೀರಾಮ್ ಅರುಣ್ ಗೋವಿಲ್ ಕೂಡ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಪಕ್ಷವು ಅವರನ್ನು ಮೀರತ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಈ ಪಟ್ಟಿಯಿಂದ ಕೈಬಿಡಲಾದ ದೊಡ್ಡ ಅಭ್ಯರ್ಥಿ ಎಂದ್ರೆ ವರುಣ್ ಗಾಂಧಿ, ಅವರನ್ನು ಈ ಬಾರಿ ಪಿಲಿಭಿತ್‌ನಿಂದ ಪಕ್ಷವು ಕೈಬಿಟ್ಟಿದೆ.

ಓದಿ:ನಾಳೆ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ; ನಮ್ಮ ರಕ್ತದ ಕಣಕಣದಲ್ಲೂ ಬಿಜೆಪಿ ಇದೆ ಎಂದ ಮಾಜಿ ಸಚಿವ - Janardhana Reddy

ABOUT THE AUTHOR

...view details