ಕರ್ನಾಟಕ

karnataka

ಲಡಾಖ್​ಗೆ ಪ್ರತ್ಯೇಕ ರಾಜ್ಯ ಸ್ಥಾನಮಾನ, ಸಾಂವಿಧಾನಿಕ ರಕ್ಷಣೆ ನೀಡಲು ಜನರಿಂದ ಪ್ರತಿಭಟನೆ

By ETV Bharat Karnataka Team

Published : Feb 4, 2024, 5:52 PM IST

ಕೇಂದ್ರಾಡಳಿತ ಪ್ರದೇಶವಾದ ಲಡಾಖ್​ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಕೊರೆಯುವ ಚಳಿಯಲ್ಲಿ ಜನರು ಭಾನುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಲಡಾಖ್​ಗೆ ಪ್ರತ್ಯೇಕ ರಾಜ್ಯ ಸ್ಥಾನಮಾನ
ಲಡಾಖ್​ಗೆ ಪ್ರತ್ಯೇಕ ರಾಜ್ಯ ಸ್ಥಾನಮಾನ

ಲೇಹ್ (ಲಡಾಖ್):ಸಾಹಸಮಯ ಬೈಕ್ ರೈಡಿಂಗ್​ಗೆ ಹೆಸರುವಾಸಿಯಾದ ಕೇಂದ್ರಾಡಳಿತ ಪ್ರದೇಶ ಲಡಾಖ್​ಗೆ 'ರಾಜ್ಯ ಸ್ಥಾನಮಾನ' ನೀಡುವಂತೆ ಆಗ್ರಹಿಸಿ ಹೋರಾಟ ಆರಂಭವಾಗಿದೆ. ಜೊತೆಗೆ ಸಂವಿಧಾನದ 6ನೇ ಪರಿಚ್ಛೇದದ ಅಡಿ ವಿಶೇಷ ರಕ್ಷಣೆ ನೀಡಬೇಕು ಎಂಬ ಕೂಗು ಎದ್ದಿದೆ.

ಕೊರೆಯುವ ಚಳಿಯ ನಡುವೆ ಭಾನುವಾರ ಸಾವಿರಾರು ಜನರು ಲಡಾಖ್​ನ ಪ್ರಮುಖ ನಗರವಾದ ಲೇಹ್​ನಲ್ಲಿ ಮೆರವಣಿಗೆ ನಡೆಸಿದರು. ಲೆಹ್ ಅಪೆಕ್ಸ್ ಬಾಡಿ (ಎಲ್​ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (ಕೆಡಿಎ) ಇದರ ನೇತೃತ್ವ ವಹಿಸಿದ್ದವು. ಕೇಂದ್ರಾಡಳಿತ ಪ್ರದೇಶವನ್ನು ತೆರವು ಮಾಡಿ, ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡಬೇಕು. ಇಲ್ಲಿನ ಬುಡಕಟ್ಟು ಜನಾಂಗದ ವಿಶಿಷ್ಟ ಸಂಸ್ಕೃತಿಯನ್ನು ರಕ್ಷಿಸಲು ಸಾಂವಿಧಾನಿಕ ರಕ್ಷಣೆ ಘೋಷಿಸಬೇಕು ಎಂದು ಆಗ್ರಹಿಸಲಾಯಿತು.

ಗಮನಾರ್ಹ ಸಂಗತಿಯೆಂದರೆ, ಲಡಾಖ್‌ನ ವಿಶಿಷ್ಟ ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸಲು ಕೇಂದ್ರ ಸರ್ಕಾರವು ಈಗಾಗಲೇ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಇದರ ನಡುವೆ ಜನರಿಂದ ಪ್ರತಿಭಟನಾ ಮೆರವಣಿಗೆ ನಡೆದಿದೆ.

ಪ್ರತ್ಯೇಕ ರಾಜ್ಯ, ವಿಧಾನಸಭೆ ಬೇಕು:ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್​ ಅನ್ನು ಜಮ್ಮು ಕಾಶ್ಮೀರದಿಂದ ಸಂಪೂರ್ಣವಾಗಿ ಪ್ರತ್ಯೇಕ ಮಾಡಬೇಕು. ಇಲ್ಲಿನ ಜನರಿಗಾಗಿಯೇ ವಿಧಾನಸಭೆ, ವಿಧಾನಪರಿಷತ್ತು ರಚಿಸಬೇಕು. ಜನ ಕೇಂದ್ರಿತ ಆಡಳಿತವನ್ನು ಜಾರಿಗೆ ತರಬೇಕು ಎಂದು ಲೇಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್‌ನ ಕಾನೂನು ಸಲಹೆಗಾರ ಹಾಜಿ ಗುಲಾಮ್ ಮುಸ್ತಫಾ ಹಕ್ಕು ಪ್ರತಿಪಾದಿಸಿದರು.

ಇಲ್ಲಿನ ಆಡಳಿತ ದುರ್ಬಲವಾಗಿದೆ. ಲಡಾಖ್​ಗೆ ವಿಧಾನಸಭೆಯಲ್ಲಿ ಯಾವುದೇ ಪ್ರಾತಿನಿಧ್ಯವಿಲ್ಲ. ಲಡಾಖ್ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ ನಾಲ್ಕು ಅಂಶಗಳನ್ನು ಮುಂದಿಟ್ಟಿದೆ. ಜಮ್ಮು ಮತ್ತು ಕಾಶ್ಮೀರದ ಭಾಗವಾಗಿದ್ದಾಗ ಇಲ್ಲಿಗೆ ಎರಡು ವಿಧಾನಸಭೆ, ಎರಡು ಪತಿಷತ್ತಿನ ಸ್ಥಾನಗಳನ್ನು ಮಾತ್ರ ನೀಡಲಾಗಿತ್ತು. ಈ ಭಾಗ ಅಭಿವೃದ್ಧಿಯಾಗಲು ರಾಜಕೀಯ ಬಲ ಇರದೇ ಇರುವುದು ತೊಡಕಾಗಿದೆ. ಹೀಗಾಗಿ ಪ್ರತ್ಯೇಕ ರಾಜ್ಯ ನೀಡುವ ಜೊತೆಗೆ ಪ್ರತ್ಯೇಕ ವಿಧಾನಸಭೆಯನ್ನೂ ರಚಿಸಬೇಕು ಎಂದು ಕೋರಿದ್ದಾರೆ.

ಲಡಾಖ್​ ಬುಡಕಟ್ಟು ಜನಾಂಗದ ಬಹುಸಂಖ್ಯಾತ ಪ್ರದೇಶವಾಗಿದೆ. ಈಶಾನ್ಯ ರಾಜ್ಯಗಳು ಹೊಂದಿರುವ ಎಲ್ಲಾ ವೈಶಿಷ್ಟ್ಯಗಳನ್ನು ಇಲ್ಲಿ ಕಾಣಬಹುದು. ಈಶಾನ್ಯ ರಾಜ್ಯಗಳಿಗೆ ಸಂವಿಧಾನದ 6ನೇ ಪರಿಚ್ಛೇದ ಅಡಿ ನೀಡಲಾಗಿರುವ ಸಾಂವಿಧಾನಿಕ ರಕ್ಷಣೆಯನ್ನು ಇಲ್ಲಿಗೂ ನೀಡಬೇಕು. ಈ ಪ್ರದೇಶದಲ್ಲಿ ಯಾವುದೇ ಗೆಜೆಟೆಡ್ ಉದ್ಯೋಗಾವಕಾಶಗಳಿಲ್ಲ. ತುರ್ತಾಗಿ ತನ್ನದೇ ಆದ ಸಾರ್ವಜನಿಕ ಸೇವಾ ಆಯೋಗದ ಅಗತ್ಯವಿದೆ. ಜನರು ಈ ಪ್ರದೇಶದ ಸಬಲೀಕರಣವನ್ನು ಬಯಸುತ್ತಿದ್ದಾರೆ ಎಂದು ಅವರು ಹೇಳಿದರು.

2019 ರ ಆಗಸ್ಟ್​ನಲ್ಲಿ ಕೇಂದ್ರ ಸರ್ಕಾರ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್​ ಅನ್ನು ಪ್ರತ್ಯೇಕಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಮಾಡಿದೆ.

ಇದನ್ನೂ ಓದಿ:ಛತ್ತೀಸ್​ಗಢ: ಇಬ್ಬರು ಮಹಿಳಾ ನಕ್ಸಲರ ಹತ್ಯೆ

ABOUT THE AUTHOR

...view details