ಹೊಳೆನರಸೀಪುರ(ಹಾಸನ): ವರದಕ್ಷಿಣೆ ಕಿರುಕುಳ ನೀಡಿ, ಪತಿಯೇ ಪತ್ನಿಯನ್ನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನಲ್ಲಿ ನಡೆದಿದೆ.
ಹೊಳೆನರಸಿಪುರ ತಾಲೂಕಿನ ಕಡವಿನಕೋಟೆ ಗ್ರಾಮದ ಶಾಲಿನಿ (28) ಗಂಡನ ಕೈಯಿಂದ ಕೊಲೆಯಾಗಿರುವ ದುರ್ದೈವಿ. ಪುನೀತ್ (32) ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಸ್ಥಳೀಯರ ಪ್ರಕಾರ ವರದಕ್ಷಿಣೆ ಕಿರುಕುಳದ ಕಾರಣ ಈ ದುರ್ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಕರಣದ ಹಿನ್ನೆಲೆ
ಕಳೆದ ಎರಡು ವರ್ಷಗಳ ಹಿಂದೆ ಕಡುವಿನ ಕೋಟೆಯ ಪುನೀತ್ ನಂದಿಗೆ ಬಿಲ್ಲೇನಹಳ್ಳಿ ಗ್ರಾಮದ ಕೃಷ್ಣೇಗೌಡ ಎಂಬುವವರ ಪುತ್ರಿ ಶಾಲಿನಿಯನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಆರಂಭದ ಒಂದು ವರ್ಷ ಸುಖ ಸಂಸಾರ ನಡೆಸುತ್ತಿದ್ದ ಈತ ನಂತರ ಹಣಕ್ಕಾಗಿ ಹೆಂಡತಿಗೆ ಬೇಡಿಕೆಯಿಟ್ಟು, ವರದಕ್ಷಿಣೆ ತೆಗೆದುಕೊಂಡು ಬರುವಂತೆ ಪೀಡಿಸುತ್ತಿದ್ದನು ಎನ್ನಲಾಗಿದೆ.
ಕಟ್ಟಿಕೊಂಡ ಹೆಂಡತಿ ಕೊಲೆ ಮಾಡಿದ ಪಾಪಿ ಗಂಡ ಹೆಂಡತಿಯನ್ನು ಪ್ರೀತಿಸುವ ನಾಟಕವಾಡಿ ನಿನ್ನೆ ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರಿನ ಸಮೀಪದ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವಿದೆ ಎಂದು ಪುಸಲಾಯಿಸಿ ದ್ವಿ-ಚಕ್ರವಾಹನದಲ್ಲಿ ಕರೆದೊಯ್ದಿದ್ದಾನೆ. ಈ ವೇಳೆ ಮಾರ್ಗ ಮಧ್ಯೆ ಬೈಕ್ ನಿಲ್ಲಿಸಿ, ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಸ್ಥಳೀಯರು ಇದನ್ನು ಗಮನಿಸಿ ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತಕ್ಷಣ ಆಂಬ್ಯುಲೆನ್ಸ್ಗೆ ಕರೆ ಮಾಡಿ ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಹಳ್ಳಿ ಮೈಸೂರಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದಾರೆ. ಆದರೆ ಮಾರ್ಗ ಮಧ್ಯೆ ಶಾಲಿನಿ ಪ್ರಾಣ ಬಿಟ್ಟಿದ್ದಾಳೆ. ಈ ಸಂಬಂಧ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಆರೋಪಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.