ಕಡಬ (ದಕ್ಷಿಣ ಕನ್ನಡ):ಕಡಬ ತಾಲೂಕಿನ ಕೊಂಬಾರು ಸಮೀಪದಿಂದ ಸೆರೆ ಹಿಡಿಯಲಾಗಿದ್ದ 50 ವರ್ಷ ಪ್ರಾಯದ ಗಂಡು ಕಾಡಾನೆ ಕೊಡಗಿನ ಮತ್ತಿಗೋಡು ಆನೆ ಶಿಬಿರದಲ್ಲಿ ಬಹು ಅಂಗಾಂಗ ವೈಫಲ್ಯ ಮತ್ತು ಕಾಲಿನ ವಾತ ಕಾಯಿಲೆಯಿಂದ ಮೃತಪಟ್ಟಿದೆ.
ಕಡಬದ ರೆಂಜಿಲಾಡಿಯ ನೈಲಾ ಎಂಬಲ್ಲಿ ಕಳೆದ ಫೆಬ್ರವರಿ 20ರಂದು ಬೆಳಗ್ಗೆ ಹಾಲು ಸಂಗ್ರಹ ಕೇಂದ್ರಕ್ಕೆ ಆಗಮಿಸುತ್ತಿದ್ದ ರಂಜಿತಾ (24) ಹಾಗೂ ಅವರ ರಕ್ಷಣೆಗೆ ಆಗಮಿಸಿದ ರಮೇಶ್ ರೈ (58) ಎಂಬವರನ್ನು ಕಾಡಾನೆಗಳು ದಾಳಿ ಮಾಡಿ ಸಾಯಿಸಿದ್ದವು. ಇದರ ನಂತರದಲ್ಲಿ ಕೊಂಬಾರು ಭಾಗದ ಮಂಡೆಕರ ಎಂಬಲ್ಲಿಂದ ದಾಳಿ ಮಾಡಿದ ಆನೆ ಎಂದು ಸೆರೆ ಹಿಡಿಯಲಾಗಿದ್ದ ಗಂಡು ಕಾಡಾನೆಯನ್ನು ಕೊಡಗಿನ ಮತ್ತಿಗೋಡು ಆನೆ ಶಿಬಿರಕ್ಕೆ ಸೇರಿಸಲಾಗಿತ್ತು. ಈ ಕಾಡಾನೆ ಆಗಸ್ಟ್ 11ರ ಶುಕ್ರವಾರ ಮೃತಪಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ಎಸಿಎಫ್ ದಯಾನಂದ್ ಅವರು ಐವತ್ತು ವರ್ಷದ ಗಂಡು ಕಾಡಾನೆಯನ್ನು ನಮ್ಮಲ್ಲಿಗೆ ತಂದ ನಂತರದಲ್ಲಿ ಪಳಗಿಸುವ ಕಾರ್ಯ ನಡೆದಿತ್ತು. ಇದಕ್ಕೆ ಸುಬ್ರಮಣಿ ಎಂದು ಮರುನಾಮಕರಣ ಮಾಡಲಾಗಿತ್ತು. ಆನೆಯು ಸಂಪೂರ್ಣವಾಗಿ ಪಳಗಿದ ನಂತರದಲ್ಲಿ ಜುಲೈ 20ರಂದು ಕ್ರಾಲ್ನಿಂದ ಬಂಧನ ಮುಕ್ತಗೊಳಿಸಲಾಗಿತ್ತು.
ಮಾವುತರಾದ ಶಿವು, ಕಾವಾಡಿಗ ಚಂದ್ರ ಅವರ ಉಸ್ತುವಾರಿಯಲ್ಲಿ ಕಳೆದ 20 ದಿನಗಳಿಂದ ಇತರ ಸಾಕಾನೆಗಳ ಜೊತೆಗೆ ಸೇರಿಸಿ ತರಬೇತಿ ನೀಡಲಾಗುತ್ತಿದ್ದು, ಆದರೆ ಕಾಲಿನ ವಾತ ಇರುವ ಕಾರಣದಿಂದ ಇರಬಹುದು ಆಗಸ್ಟ್ 11ರಂದು ಇದ್ದಕ್ಕಿದ್ದ ಹಾಗೆ ಆನೆ ಸುಬ್ರಮಣಿ ಸಂಪೂರ್ಣ ಅಸ್ವಸ್ಥಗೊಂಡಿತ್ತು.