ಬೆಳಗಾವಿ: ಮುಂದಿನ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಮುಖ್ಯಮಂತ್ರಿ ಆಯ್ಕೆಯನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ನಾವು ಯಾರೂ ತೀರ್ಮಾನ ಮಾಡಕ್ಕಾಗಲ್ಲ. ರಾಜ್ಯ ಒಳ್ಳೆಯದಾಗಬೇಕೆಂದರೆ ಜನ 2023ರಲ್ಲಿ ಸಿದ್ದರಾಮಯ್ಯ ಸಿಎಂ ಆಗಬೇಕು ಅಂತಾ ಬಯಸುತ್ತಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸಂವಿಧಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ನನ್ನ ಅಭಿಪ್ರಾಯ ಹೇಳಿದ್ದೇನೆ. ನನ್ನ ಅಭಿಪ್ರಾಯ ಹೇಳೋದು ತಪ್ಪೇನಿಲ್ಲಲ್ಲ. ಮೊನ್ನೆ ನಾನು ಹೇಳಿದೀನಿ ಮುಸ್ಲಿಂರಿಗೂ ಅವಕಾಶ ಸಿಗಬೇಕು. ನಾವು ಜನ ಸಂಖ್ಯೆಯನುಸಾರ ಶೇ.15ರಷ್ಟು ಇದ್ದೇವೆ. ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ಆದರೆ, ನಮ್ಮ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಯಾರು ಸಿಎಂ ಆಗಬೇಕೆಂದು ತೀರ್ಮಾನ ಮಾಡುತ್ತಿದ್ದಾರೆ ಎಂದರು.
ಸಿಎಂ ವಿಚಾರದ ಕುರಿತು ಯಾರೇ ಇದ್ದರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕೆಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಪ್ರತಿಕ್ರಿಯಿಸಿದ ಜಮೀರ್, ಇದನ್ನು ಚಾಲನೆ ಯಾರು ಕೊಟ್ಟಿದ್ದು?, ಅವರು ಹೇಳಿದ್ಮೇಲೆ ತಾನೇ ಬಂದಿದ್ದು. ಅಧ್ಯಕ್ಷರು ನಮ್ಮ ಒಕ್ಕಲಿಗ ಸಮಾಜ ಕಾರ್ಯಕ್ರಮದಲ್ಲಿ ಅವರಾಗಿ ಅವರು ನನಗೆ ಮುಂದೆ ಅವಕಾಶ ಕೊಡಿ ಎಂದು ಚಾಲನೆ ಕೊಟ್ಟಿದ್ದಾರೆ. ಕೇಳಿದ್ದು ಅವರೇ ತಾನೇ?. ಅವರು ಹೇಳಿದ ಮೇಲೆ ನಾವು ಹೇಳಿದ್ದು, ಅದಕ್ಕಿಂತ ಮುಂಚೆ ಯಾರು ಹೇಳಿಲ್ಲ ಎಂದು ಹೇಳಿದರು.
ಸಮಾಜ ಮತ ಕೊಟ್ಟರೇ ಸಿಎಂ ಆಗಲು:ಎಲ್ಲರಿಗೂ ಆಸೆ ಇರುತ್ತದೆ. ಬಹಳ ಜನರಿಗೆ ಆಸೆ ಇದೆ. ಆಸೆ ಇರೋದ್ರಲ್ಲಿ ತಪ್ಪೇನಿಲ್ಲ. ಒಂದೇ ಸಮಾಜ ಮತ ಕೊಟ್ಟರೇ ಸಿಎಂ ಆಗಲು ಸಾಧ್ಯವಾಗಲ್ಲ. ಎಲ್ಲ ಸಮಾಜದವರನ್ನು ನಾವು ಜೊತೆಗೆ ತಗೆದುಕೊಂಡು ಹೋಗಬೇಕು. ಎಲ್ಲ ಸಮಾಜ ಸೇರಿ ಆಶೀರ್ವಾದ ಮಾಡಿದ್ರೆ ಸರ್ಕಾರ ಬರಲು ಸಾಧ್ಯವಾಗಲಿದೆ. ಬರೀ ಒಂದು ಸಮಾಜ ಬೆಂಬಲ ಕೊಟ್ಟರೆ, ಯಾರು ಸಿಎಂ ಆಗಲು ಸಾಧ್ಯವಾಗಲ್ಲ ಎಂದೂ ಅಭಿಪ್ರಾಯ ಪಟ್ಟರು.