ಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ನಾಯಕತ್ವ ಯಾರಿಗೆ ನೀಡಬೇಕೆಂಬ ಚರ್ಚೆ ದೇಶಾದ್ಯಂತ ಬಿರುಸುಗೊಂಡಿರುವ ಮಧ್ಯೆ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಶೀಘ್ರವೇ ರಾಜ್ಯಸಭೆಯಲ್ಲಿ ಸಹ ಸಂಖ್ಯಾಬಲ ಕೊರತೆ ಎದುರಾಗಲಿದೆ.
ಜಿ-23 ನಾಯಕರು ಕಾಂಗ್ರೆಸ್ ಮುಖಂಡ ಮುಕುಲ್ ವಾಸ್ನಿಕ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಇನ್ನೊಂದೆಡೆ ಮತ್ತೊಂದು ಗುಂಪು ರಾಹುಲ್ ಗಾಂಧಿ ಅಧ್ಯಕ್ಷರಾಗಬೇಕೆಂದು ಒತ್ತಡ ಹೇರುತ್ತಿದೆ.
ಆದರೆ, ಈ ಭರಾಟೆಯ ನಡುವೆ ರಾಜ್ಯಸಭೆಯಲ್ಲಿಯೂ ತಮ್ಮ ಸಂಖ್ಯಾಬಲ ಕುಸಿತವಾಗುತ್ತಿರುವುದು ಆತಂಕದ ಸಂಗತಿ. ಒಂದು ಸಂದರ್ಭದಲ್ಲಿ ದೇಶಾದ್ಯಂತ ತನ್ನ ಅಧಿಕಾರದ ಮೂಲಕ ಲೋಕಸಭೆ, ರಾಜ್ಯಸಭೆ ಎರಡರಲ್ಲೂ ರಾಜ್ಯಭಾರ ನಡೆಸಿದ್ದ ಕಾಂಗ್ರೆಸ್ ಕೇವಲ 7 - 8 ವರ್ಷದಲ್ಲಿ ಒಂದು ಪ್ರಾದೇಶಿಕ ಪಕ್ಷಕ್ಕಿಂತ ಕಡಿಮೆ ಸಾಧನೆ ತೋರಿಸುವ ಮಟ್ಟ ತಲುಪಿದೆ.
ಛತ್ತೀಸ್ಗಢ ಹಾಗೂ ರಾಜಸ್ತಾನ ಹೊರತು ಪಡಿಸಿದರೆ ಬೇರೆ ಯಾವ ರಾಜ್ಯದಲ್ಲಿಯೂ ಸ್ವಂತ ಬಲದ ಮೇಲೆ ಸರ್ಕಾರ ಹೊಂದಿರದ ಕಾಂಗ್ರೆಸ್ ಪಕ್ಷ ನಿಧಾನವಾಗಿ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ತಮ್ಮ ಸದಸ್ಯ ಬಲ ಕಳೆದುಕೊಳ್ಳುತ್ತಿದೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ನ ಸೋಲು ಮುಂಬರುವ ತಿಂಗಳುಗಳಲ್ಲಿ ರಾಜ್ಯಸಭೆಯಲ್ಲಿ ಅದರ ಸಂಖ್ಯೆಯ ಮೇಲೆ ನೇರವಾಗಿ ಪರಿಣಾಮ ಬೀರಲಿದೆ.
ಈ ವರ್ಷ ಮೇಲ್ಮನೆಯಲ್ಲಿ 48 ಸ್ಥಾನ ಖಾಲಿಯಾಗುವುದರೊಂದಿಗೆ ಕಾಂಗ್ರೆಸ್ ಸದಸ್ಯರ ಸಂಖ್ಯೆಯು ಸಾರ್ವಕಾಲಿಕ ಕನಿಷ್ಠ 26ಕ್ಕೆ ಕುಸಿಯಲಿದೆ. ಪಂಜಾಬ್ನಲ್ಲಿ ಭಾರಿ ಗೆಲುವಿನ ನಂತರ, ಎಎಪಿ 10 ಸದಸ್ಯರೊಂದಿಗೆ ರಾಜ್ಯಸಭೆಯಲ್ಲಿ ನಾಲ್ಕನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.