ಕರ್ನಾಟಕ

karnataka

ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ; ಕೆನಡಾ ಪರ ನಿಂತ ಪಾಕಿಸ್ತಾನ ಮಾಜಿ ವಿದೇಶಾಂಗ ಮಂತ್ರಿ ಬಿಲಾವಲ್

By ETV Bharat Karnataka Team

Published : Sep 20, 2023, 6:30 PM IST

ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ವಿದೇಶಾಂಗ ಮಂತ್ರಿ ಬಿಲಾವಲ್ ಭುಟ್ಟೊ ಕೆನಡಾ ಪರವಾಗಿ ಮಾತನಾಡಿದ್ದಾರೆ.

Bilawal Bhutto takes pro-Canada stand on Nijjar's killing
Bilawal Bhutto takes pro-Canada stand on Nijjar's killing

ಇಸ್ಲಾಮಾಬಾದ್ (ಪಾಕಿಸ್ತಾನ) :ಕೆನಡಾ ಪ್ರಜೆ ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ ಬೆನ್ನಲ್ಲೇ, ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಈ ವಿಷಯದಲ್ಲಿ ಕೆನಡಾ ಪರ ನಿಲುವು ತಳೆದಿದ್ದು, ಇಸ್ಲಾಮಾಬಾದ್ ಕೇಂದ್ರವಾಗಿಟ್ಟುಕೊಂಡು ಕೆನಡಾ ಪರವಾದ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಲಾಹೋರ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಬಿಲಾವಲ್, "ಭಾರತವು ತನ್ನ ರಾಜಕೀಯ ನೀತಿ ಮತ್ತು ಬೆಂಬಲದ ಭಾಗವಾಗಿ ಪಾಕಿಸ್ತಾನ ಮತ್ತು ಈಗ ಕೆನಡಾದಂಥ ಇತರ ದೇಶಗಳಲ್ಲಿ ಅಶಾಂತಿಯನ್ನು ಹರಡುತ್ತಿದೆ ಎಂಬುದನ್ನು ಇಸ್ಲಾಮಾಬಾದ್ ವರ್ಷಗಳಿಂದ ಪ್ರತಿಪಾದಿಸುತ್ತಿದೆ" ಎಂದು ಹೇಳಿದರು.

"ಭಾರತವು ಹಿಂದುತ್ವ ಭಯೋತ್ಪಾದಕ ರಾಷ್ಟ್ರವಾಗಿ ಮಾರ್ಪಟ್ಟಿದೆ ಎಂದು ಅಂತರರಾಷ್ಟ್ರೀಯ ಸಮುದಾಯವು ಒಪ್ಪಿಕೊಳ್ಳುವ ಸಮಯ ಇದು. ಕೆನಡಾದ ಪ್ರಧಾನಿಯ ಆರೋಪಗಳು ಗಂಭೀರವಾಗಿವೆ ಮತ್ತು ಪಾಕಿಸ್ತಾನ ವಿದೇಶಾಂಗ ಕಚೇರಿ ಈ ಘಟನೆಯನ್ನು ಗಮನಿಸಬೇಕು ಮತ್ತು ಸ್ಪಷ್ಟ ಹೇಳಿಕೆಯನ್ನು ನೀಡಬೇಕು." ಎಂದು ಅವರು ಹೇಳಿದರು.

"ಭಾರತವು ಈಗ ವಿಶ್ವದ ಮುಂದೆ ಬೆತ್ತಲಾಗಿದೆ. ಈ ಹಿಂದೆ, ಪಾಕಿಸ್ತಾನವು ಭಾರತದಿಂದ ಇಂಥ ಬೆದರಿಕೆಗಳನ್ನು ಎದುರಿಸಿದೆ ಮತ್ತು ಭಾರತದ ರಾಜತಾಂತ್ರಿಕರು ಮತ್ತು ಗೂಢಚಾರರನ್ನು ಸೆರೆ ಹಿಡಿದಿದೆ. ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿ ಭಾರತ ಸರ್ಕಾರಿ ಭಯೋತ್ಪಾದನೆ ನಡೆಸುತ್ತಿದೆ. ಈಗ ಅದನ್ನೇ ಕೆನಡಾ ಬಹಿರಂಗಪಡಿಸಿದೆ' ಎಂದು ಬಿಲಾವಲ್ ತಿಳಿಸಿದ್ದಾರೆ.

ಭಾರತದ ಇಂಥ ಕೃತ್ಯಗಳನ್ನು ಅಂತಾರಾಷ್ಟ್ರೀಯ ಸಮುದಾಯ ಇಷ್ಟು ದಿನ ನಿರ್ಲಕ್ಷಿಸಿದ್ದು ಏಕೆ ಎಂದು ಬಿಲಾವಲ್ ಪ್ರಶ್ನಿಸಿದರು. ಕೆನಡಾದ ಸರ್ರೆಯಲ್ಲಿ ನಿಜ್ಜರ್ ಹತ್ಯೆಯ ಬಗ್ಗೆ ಮಾತನಾಡಿದ ಬಿಲಾವಲ್, ಇದು ಕೆನಡಾದ ಸಾರ್ವಭೌಮತ್ವ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು.

ಕೆನಡಾದ ವ್ಯಾಂಕೋವರ್​ನ ಉಪನಗರ ಪ್ರದೇಶವಾದ ಸರ್ರೆಯಲ್ಲಿ ಜೂನ್ 18 ರಂದು ನಿಜ್ಜರ್ ಹತ್ಯೆಯಾದ ನಂತರ ಈ ವಿಷಯದಲ್ಲಿ ಕೆನಡಾ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೆನಡಾದ ಸಿಖ್ ಸಮುದಾಯ ಒತ್ತಾಯಿಸುತ್ತಿದೆ. ಖಲಿಸ್ತಾನ್ ಹೆಸರಿನಲ್ಲಿ ಸ್ವತಂತ್ರ ಸಿಖ್ ತಾಯ್ನಾಡಿಗೆ ಒತ್ತಾಯಿಸಿ ನಿಜ್ಜರ್ ಇತ್ತೀಚೆಗೆ ಕೆನಡಾದಲ್ಲಿ ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹದ ನೇತೃತ್ವ ವಹಿಸಿದ್ದರು. ಮೂರು ವರ್ಷಗಳ ಹಿಂದೆಯೇ ಭಾರತವು ನಿಜ್ಜರ್ ನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು.

ಈ ಹತ್ಯೆಯ ಹಿಂದೆ ಭಾರತೀಯ ರಾ ಮತ್ತು ಸರ್ಕಾರ ಭಾಗಿಯಾಗಿದೆ ಎಂಬ ಕೆನಡಾದ ಪ್ರಧಾನಿಯ ಹೇಳಿಕೆಯು ಒಟ್ಟಾವಾ ಮತ್ತು ನವದೆಹಲಿ ನಡುವೆ ರಾಜತಾಂತ್ರಿಕ ಸಮರಕ್ಕೆ ಕಾರಣವಾಗಿದೆ. ಕೆನಡಾದಲ್ಲಿ ರಾ ಸ್ಟೇಷನ್ ಮುಖ್ಯಸ್ಥರಾಗಿದ್ದ ಉನ್ನತ ರಾಜತಾಂತ್ರಿಕ ಪವನ್ ಕುಮಾರ್ ರೈ ಅವರನ್ನು ಕೆನಡಾದಿಂದ ಹೊರಹಾಕಲಾಗಿದೆ. ಇದಕ್ಕೆ ಪ್ರತಿಯಾಗಿ ಭಾರತವು ಕೆನಡಾದ ಉನ್ನತ ರಾಜತಾಂತ್ರಿಕರನ್ನು ಹೊರಹಾಕಿದೆ.

ಇದನ್ನೂ ಓದಿ : ವಿಶ್ವಸಂಸ್ಥೆಯಲ್ಲಿ ಮತ್ತೆ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಟರ್ಕಿ ಅಧ್ಯಕ್ಷ ಎರ್ಡೊಗನ್

ABOUT THE AUTHOR

...view details