ಹುಬ್ಬಳ್ಳಿ: ಜಾತಿ ಹೆಸರಿನಲ್ಲಿ ದೇಶವನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಈ ರೀತಿಯ ತಂತ್ರಗಾರಿಕೆಯನ್ನು ಬುಡಮೇಲು ಮಾಡಿ ಒಗ್ಗಟ್ಟಿನಿಂದ ಬಾಳಬೇಕೆಂದು ಕರೆ ನೀಡಿದರು.
ಜಾತಿಗಳನ್ನು ಬದಿಗೊತ್ತಿ, ಒಗ್ಗಟ್ಟಿನಿಂದ ಬಾಳೋಣ: ಶಾಸಕ ಪ್ರಸಾದ್ ಅಬ್ಬಯ್ಯ
ನಗರದ ಚೆನ್ನಮ್ಮ ವೃತ್ತದಲ್ಲಿರುವ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಶಾಸಕ ಪ್ರಸಾದ್ ಅಬ್ಬಯ್ಯ ಹಾಗೂ ಮಾಜಿ ಸಚಿವ ಎ.ಎಂ ಹಿಂಡಸಗೇರಿ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ತಿಳಿಸಿದರು. ಈ ವೇಳೆ ಮಾತನಾಡಿದ ಶಾಸಕ ಜಾತಿ ಹೆಸರಲ್ಲಿ ದೇಶ ಒಡೆಯುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
![ಜಾತಿಗಳನ್ನು ಬದಿಗೊತ್ತಿ, ಒಗ್ಗಟ್ಟಿನಿಂದ ಬಾಳೋಣ: ಶಾಸಕ ಪ್ರಸಾದ್ ಅಬ್ಬಯ್ಯ](https://etvbharatimages.akamaized.net/etvbharat/prod-images/768-512-3482922-thumbnail-3x2-megha.jpg)
ನಗರದ ಚೆನ್ನಮ್ಮ ವೃತ್ತದಲ್ಲಿರುವ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ, ಮುಸ್ಲಿಂ, ಬೌದ್ಧ ಎಂದು ಜಾತಿ ಹೆಸರಿನಲ್ಲಿ ದೇಶವನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ಇದನ್ನು ಬುಡ ಸಹಿತ ಕಿತ್ತು ಹಾಕಲು ಎಲ್ಲ ರಾಜಕೀಯ ಪಕ್ಷಗಳು, ಸಮಾಜದ ಮುಖಂಡರು, ಸಾರ್ವಜನಿಕರು ಚಿಂತನೆ ಮಾಡಬೇಕು. ಜಾತಿ ಎಂದರೆ ಎರಡೇ, ಅದು ಗಂಡು-ಹೆಣ್ಣು. ಇದನ್ನು ಅರಿತು ನಡೆದರೆ ದೇಶವನ್ನು ಬಲಿಷ್ಠವಾಗಿ ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಎ.ಎಂ ಹಿಂಡಸಗೇರಿ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ತಿಳಿಸಿದರು. ದೇಶದಲ್ಲಿ ಅನೇಕ ಭಾಷೆಯನ್ನು ಮಾತನಾಡುವ ಜನರಿದ್ದಾರೆ, ನಮ್ಮದು ಜಾತ್ಯಾತೀತ ರಾಷ್ಟ್ರವಾಗಿದ್ದು, ಇಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ಜೀವಿಸಬೇಕು. ಇದಕ್ಕೆ ದೇಶದಲ್ಲಿ ಸಾರೇ ಜಹಾಸೆ ಅಚ್ಛಾ, ಹಿಂದೂಸ್ಥಾನ ಹಮಾರಾ ಎಂಬ ಪದಗಳೇ ಸಾಕ್ಷಿಯಾಗಿವೆ. ಎಲ್ಲರೂ ಕೂಡಾ ದೇಶದ ಅಭಿವೃದ್ಧಿಗೆ ಪಣತೊಟ್ಟು, ಸಂಕಲ್ಪ ಮಾಡೋಣ ಎಂದರು.