ನವದೆಹಲಿ:ಐಟಿ ಕ್ಷೇತ್ರದ ದೈತ್ಯ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನಲ್ಲಿ ಉದ್ಯೋಗ ನೀಡುವುದಕ್ಕೆ ಲಂಚ ತೆಗೆದುಕೊಳ್ಳಲಾಗಿದೆ ಎಂಬ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ವರದಿಯ ಪ್ರಕಾರ, ಲಂಚ ಪ್ರಕರಣದ ತನಿಖೆಯಲ್ಲಿ, ಹಿರಿಯ ಅಧಿಕಾರಿಗಳು ಕೆಲಸದಲ್ಲಿ ಇರಿಸಿಕೊಳ್ಳಲು ಸಿಬ್ಬಂದಿ ಸಂಸ್ಥೆಗಳಿಂದ ಲಂಚ ಪಡೆಯುತ್ತಿರುವುದು ಕಂಡುಬಂದಿದೆ. ಸದ್ಯ ಲಂಚ ಪ್ರಕರಣದಲ್ಲಿ ಭಾಗಿಯಾಗಿದ್ದ 4 ಅಧಿಕಾರಿಗಳನ್ನು ವಜಾಗೊಳಿಸಲಾಗಿದ್ದು, ಹಗರಣದಲ್ಲಿ ಭಾಗಿಯಾಗಿರುವ ಮೂರು ಸಿಬ್ಬಂದಿ ಮತ್ತು ಸಂಸ್ಥೆಗಳನ್ನು ನಿಷೇಧಿಸಲಾಗಿದೆ.
ವರದಿ ಪ್ರಕಾರ, ವಿಸ್ಲ್ಬ್ಲೋವರ್ನ ದೂರನ್ನು ಸ್ವೀಕರಿಸಿದ ನಂತರ ಟಿಸಿಎಸ್ ತಕ್ಷಣ ಕಂಪನಿಯ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ಅಜಿತ್ ಮೆನನ್ ಸೇರಿದಂತೆ ಮೂವರು ಅಧಿಕಾರಿಗಳ ತಂಡವನ್ನು ತನಿಖೆಗಾಗಿ ರಚಿಸಿದೆ. ವಾರಗಳ ತನಿಖೆಯ ನಂತರ ಟಿಸಿಎಸ್ ನೇಮಕಾತಿ ಮುಖ್ಯಸ್ಥರನ್ನು ರಜೆಯ ಮೇಲೆ ಕಳುಹಿಸಿದೆ. ಅಷ್ಟೇ ಅಲ್ಲ ಸಂಪನ್ಮೂಲ ನಿರ್ವಹಣಾ ಸಮೂಹದ ನಾಲ್ವರು ಅಧಿಕಾರಿಗಳನ್ನು ವಜಾಗೊಳಿಸಿದೆ. ಮೂರು ಸಿಬ್ಬಂದಿ ಸಂಸ್ಥೆಗಳನ್ನು ಬ್ಲ್ಯಾಕ್ ಲಿಸ್ಟ್ಗೆ ಸೇರಿಸಲಾಗಿದೆ.
ಕಂಪನಿಯು ಅಕ್ರಮಗಳ ಪ್ರಮಾಣ ಎಷ್ಟು ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ ಎಂದು ವರದಿ ತಿಳಿಸಿದೆ. ಸುದ್ದಿ ಪ್ರಕಾರ, ಹಗರಣದಲ್ಲಿ ಭಾಗಿಯಾಗಿರುವವರು ಕಮಿಷನ್ ಮೂಲಕ 100 ಕೋಟಿ ಗಳಿಸಿರಬಹುದು ಎಂದು ಇಬ್ಬರು ಅಧಿಕಾರಿಗಳಲ್ಲಿ ಒಬ್ಬರು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಮಾಧ್ಯಮಗಳಲ್ಲಿ ಪ್ರಕಟವಾದ TCS ನ ಅಧಿಕೃತ ಹೇಳಿಕೆಯ ಪ್ರಕಾರ, TCS ನ ನೇಮಕಾತಿ ಚಟುವಟಿಕೆಗಳನ್ನು RMG ನಿರ್ವಹಿಸುವುದಿಲ್ಲ. ಬಹುತೇಕ ಕಾಮಗಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.