ಕರ್ನಾಟಕ

karnataka

7 ನ್ಯಾಯಾಂಗ ಅಧಿಕಾರಿಗಳು, ಇಬ್ಬರು ವಕೀಲರಿಗೆ ಜಡ್ಜ್​ ಬಡ್ತಿ ನೀಡಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್​ ಹೊಸ ಶಿಫಾರಸು

By

Published : Jan 11, 2023, 7:15 AM IST

ನ್ಯಾಯಾಧೀಶರ ನೇಮಕಾತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್​ ಕೊಲಿಜಿಯಂ ನಡುವಿನ ಗುದ್ದಾಟ ನಿಂತಿಲ್ಲ. ಕಳೆದ ಶಿಫಾರಸನ್ನು ವಾಪಸ್​ ಕಳುಹಿಸಿದ್ದ ಕೇಂದ್ರಕ್ಕೆ, ಕೊಲಿಜಿಯಂ ಮಂಗಳವಾರ ಸಭೆ ನಡೆಸಿ ಹೊಸ ನೇಮಕಾತಿ ಪಟ್ಟಿಯನ್ನು ಶಿಫಾರಸು ಮಾಡಿದೆ.

Collegium recommends for high court judges
ಕೇಂದ್ರಕ್ಕೆ ಸುಪ್ರೀಂಕೋರ್ಟ್​ ಹೊಸ ಶಿಫಾರಸು

ನವದೆಹಲಿ:ಹೈ ಕೋರ್ಟ್​ಗಳಿಗೆ ನ್ಯಾಯಾಧೀಶರ ನೇಮಕಾತಿಯಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್​ ಕೊಲಿಜಿಯಂ ಮಧ್ಯೆ ಹಗ್ಗಜಗ್ಗಾಟ ಮುಂದುವರಿದಿದೆ. ಕೊಲಿಜಿಯಂ ಸದಸ್ಯರು ಕಳೆದ ಬಾರಿ ಶಿಫಾರಸು ಮಾಡಿದ ನ್ಯಾಯಾಧೀಶರ ಪಟ್ಟಿಯನ್ನು ಕೇಂದ್ರ ತಿರಸ್ಕರಿಸಿತ್ತು. ಇದೀಗ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಕೊಲಿಜಿಯಂ ಏಳು ನ್ಯಾಯಾಂಗದ ಅಧಿಕಾರಿಗಳು ಮತ್ತು ಇಬ್ಬರು ಹಿರಿಯ ವಕೀಲರನ್ನು ವಿವಿಧ ಹೈ ಕೋರ್ಟ್‌ಗಳ ನ್ಯಾಯಾಧೀಶರನ್ನಾಗಿ ನೇಮಕಕ್ಕೆ ಮಗದೊಂದು ಪಟ್ಟಿ ಸಿದ್ಧಪಡಿಸಿ ಮಂಗಳವಾರ ಶಿಫಾರಸು ಮಾಡಿದೆ.

ನ್ಯಾಯಾಧೀಶರನ್ನಾಗಿ ಪದೋನ್ನತಿ ನೀಡಲು ಕೊಲಿಜಿಯಂ ಶಿಫಾರಸು ಮಾಡಿದ ಪಟ್ಟಿ ನಿರ್ಣಯಗಳನ್ನು ಸುಪ್ರೀಂ ಕೋರ್ಟ್ ತನ್ನ ವೆಬ್​ಸೈಟ್​ನಲ್ಲಿ ಹಂಚಿಕೊಂಡಿದೆ. ಮಂಗಳವಾರ ನಡೆದ ಕೊಲಿಜಿಯಂ ಸಭೆಯಲ್ಲಿ ಕರ್ನಾಟಕ, ಬಾಂಬೆ, ಆಂಧ್ರಪ್ರದೇಶ, ಮಣಿಪುರಗಳ ಹೈ ಕೋರ್ಟ್​ಗಳಿಗೆ ನ್ಯಾಯಾಧೀಶರ ನೇಮಕದ ಪ್ರಸ್ತಾವವನ್ನು ಅನುಮೋದಿಸಿತು. ಕರ್ನಾಟಕ ಹೈ ಕೋರ್ಟ್​ ನ್ಯಾಯಾಧೀಶರಾಗಿ ನೇಮಕ ಮಾಡಲು ಸೂಚಿಸಿ ಕೊಲಿಜಿಯಂ ಈ ಹಿಂದೆ ಸೂಚಿಸಿದ್ದ ಹಿರಿಯ ವಕೀಲರಾದ ನಾಗೇಂದ್ರ ರಾಮಚಂದ್ರ ನಾಯ್ಕ್ ಅವರನ್ನು ಮತ್ತೊಮ್ಮೆ ಶಿಫಾರಸು ಮಾಡಿದೆ. ಇದಲ್ಲದೇ, ನ್ಯಾಯಾಂಗ ಅಧಿಕಾರಿಗಳಾದ ರಾಮಚಂದ್ರ ದತ್ತಾತ್ರೇ ಹುದ್ದಾರ್ ಮತ್ತು ವೆಂಕಟೇಶ್ ನಾಯ್ಕ್ ಥಾವರ್ಯನಾಯ್ಕ್ ಅವರನ್ನು ನ್ಯಾಯಾಧೀಶರನ್ನಾಗಿ ಮಾಡುವ ಪ್ರಸ್ತಾವ ಸಲ್ಲಿಸಿದೆ.

ಬಾಂಬೆ ಹೈ ಕೋರ್ಟ್​ಗೆ ವಕೀಲೆ ನೀಲಾ ಕೇದಾರ್ ಗೋಖಲೆ, ಗುವಾಹಟಿ ಹೈ ಕೋರ್ಟ್‌ಗೆ ನ್ಯಾಯಾಂಗ ಅಧಿಕಾರಿಯಾದ ಮೃದುಲ್ ಕುಮಾರ್ ಕಲಿತಾ, ಆಂಧ್ರಪ್ರದೇಶಕ್ಕೆ ನ್ಯಾಯಾಂಗ ಅಧಿಕಾರಿಗಳಾದ ಪಿ. ವೆಂಕಟ ಜ್ಯೋತಿರ್ಮಾಯಿ ಮತ್ತು ವಿ.ಗೋಪಾಲಕೃಷ್ಣ ರಾವ್, ಮಣಿಪುರ ಹೈ ಕೋರ್ಟ್​ಗೆ ನ್ಯಾಯಾಂಗ ಅಧಿಕಾರಿಗಳಾದ ಅರಿಬಮ್ ಗುಣೇಶ್ವರ್ ಶರ್ಮಾ ಮತ್ತು ಗೊಲ್ಮೆಯ್ ಗೈಫುಲ್‌ಶಿಲ್ಲು ಕಬುಯಿ ಅವರನ್ನು ನ್ಯಾಯಾಧೀಶರನ್ನಾಗಿ ಬಡ್ತಿ ನೀಡಲು ಕೊಲಿಜಿಯಂ ಒಪ್ಪಿದೆ.

ಸುಪ್ರೀಂ-ಕೇಂದ್ರದ ಮಧ್ಯೆ ಗುದ್ದಾಟ:ನ್ಯಾಯಾಧೀಶರ ಬಡ್ತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್​ ಕೊಲಿಜಿಯಂ ಮಧ್ಯೆ ನಿರಂತರವಾಗಿ ಗುದ್ದಾಟ ನಡೆಯುತ್ತಲೇ ಇದೆ. ನ್ಯಾಯಾಧೀಶರ ನೇಮಕ ಕುರಿತು ಸಲ್ಲಿಸಲಾದ 21 ಪ್ರಸ್ತಾಪಗಳಲ್ಲಿ ಕೇಂದ್ರ ಸರ್ಕಾರ 11 ಕ್ಕೆ ಮಾತ್ರ ಒಪ್ಪಿಗೆ ನೀಡಿದೆ. ಹೀಗಾಗಿ ಜಡ್ಜ್​​ಗಳ ನೇಮಕಾತಿ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಕೊಲಿಜಿಯಂ ಆರೋಪಿಸಿತ್ತು. ಇದನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ.

ಕೊಲಿಜಿಯಂ ಬಗ್ಗೆ ಕಾನೂನು ಸಚಿವ ಅಸಮಾಧಾನ:ಕೊಲಿಜಿಯಂ ವ್ಯವಸ್ಥೆ ಬಗ್ಗೆಯೇ ಕೇಂದ್ರ ಕಾನೂನು ಸಚಿವ ಕಿರಣ್​ ರಿಜಿಜು ಅಸಮಾಧಾನ ವ್ಯಕ್ತಪಡಿಸಿದ್ದರು. 'ಸುಪ್ರೀಂ ಮತ್ತು ಹೈ ಕೋರ್ಟ್​ಗಳಿಗೆ ನ್ಯಾಯಾಧೀಶರ ನೇಮಕ ಮಾಡುವ ವ್ಯವಸ್ಥೆಯೇ ಸರಿ ಇಲ್ಲ. ಈ ಬಗ್ಗೆ ನನಗೆ ತೃಪ್ತಿ ಇಲ್ಲ. ಇದು ನನ್ನಂತೆಯೇ ಬಹುತೇಕ ನ್ಯಾಯಾಧೀಶರ ಭಾವನೆ' ಎಂದು ಹೇಳಿದ್ದರು.

'ನ್ಯಾಯಮೂರ್ತಿಗಳು ವಿವಿಧ ಪ್ರಕರಣಗಳಲ್ಲಿ ತೀರ್ಪು ನೀಡುವ ಸಮಯಕ್ಕಿಂತಲೂ ನ್ಯಾಯಾಧೀಶರ ನೇಮಕಾತಿಯಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಇದು ಕೊಲಿಜಿಯಂನ ಈಗಿನ ಸ್ಥಿತಿಯಾಗಿದೆ. ರಾಜಕಾರಣಿಗಳಾದ ನಾವು ಮಾಡುವ ರಾಜಕೀಯಕ್ಕಿಂತಲೂ, ನ್ಯಾಯಾಂಗದಲ್ಲಿ ನಡೆಯುವ ರಾಜಕೀಯದ ಮುಂದೆ ಏನೇನೂ ಅಲ್ಲ. ಅದು ಕಣ್ಣಿಗೆ ಕಾಣುವುದಿಲ್ಲ. ಅಷ್ಟು ತೀವ್ರವಾಗಿರುತ್ತದೆ' ಎಂದು ಗಂಭೀರ ವಿಚಾರ ಪ್ರಸ್ತಾಪಿಸಿದ್ದರು.

'ಸಮರ್ಥ ವ್ಯಕ್ತಿಯನ್ನು ನ್ಯಾಯಮೂರ್ತಿಗಳನ್ನಾಗಿ ಪದೋನ್ನತಿಗೆ ಸೂಚಿಸಬೇಕೇ ವಿನಹಃ ನಿಮಗೆ ಬೇಕಾದ ವ್ಯಕ್ತಿಯನ್ನಲ್ಲ. ಯಾವುದೇ ವ್ಯವಸ್ಥೆ ನೂರರಷ್ಟು ಪರಿಪೂರ್ಣವಾಗಿರುವುದಿಲ್ಲ. ಅದರಲ್ಲೂ ಉತ್ತಮವಾದ ವ್ಯವಸ್ಥೆಯನ್ನು ರೂಪಿಸಲು ಪ್ರಯತ್ನಿಸಬೇಕು' ಎಂದು ಸಂವಾದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿಕೆ ನೀಡಿದ್ದರು. ಇದಕ್ಕೆ ಸುಪ್ರೀಂ ಕೋರ್ಟ್​ ಗರಂ ಆಗಿತ್ತು. ಅಲ್ಲದೇ, ಇದು ಮುಂದುವರಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು.

ಇದನ್ನೂ ಓದಿ:ಕೊಲಿಜಿಯಂ ಸಭೆಯ ಮಾಹಿತಿ ಬಹಿರಂಗಪಡಿಸಲ್ಲ: ಸುಪ್ರೀಂ ಕೋರ್ಟ್

ABOUT THE AUTHOR

...view details