ನವದೆಹಲಿ:ಹೈ ಕೋರ್ಟ್ಗಳಿಗೆ ನ್ಯಾಯಾಧೀಶರ ನೇಮಕಾತಿಯಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂ ಮಧ್ಯೆ ಹಗ್ಗಜಗ್ಗಾಟ ಮುಂದುವರಿದಿದೆ. ಕೊಲಿಜಿಯಂ ಸದಸ್ಯರು ಕಳೆದ ಬಾರಿ ಶಿಫಾರಸು ಮಾಡಿದ ನ್ಯಾಯಾಧೀಶರ ಪಟ್ಟಿಯನ್ನು ಕೇಂದ್ರ ತಿರಸ್ಕರಿಸಿತ್ತು. ಇದೀಗ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಕೊಲಿಜಿಯಂ ಏಳು ನ್ಯಾಯಾಂಗದ ಅಧಿಕಾರಿಗಳು ಮತ್ತು ಇಬ್ಬರು ಹಿರಿಯ ವಕೀಲರನ್ನು ವಿವಿಧ ಹೈ ಕೋರ್ಟ್ಗಳ ನ್ಯಾಯಾಧೀಶರನ್ನಾಗಿ ನೇಮಕಕ್ಕೆ ಮಗದೊಂದು ಪಟ್ಟಿ ಸಿದ್ಧಪಡಿಸಿ ಮಂಗಳವಾರ ಶಿಫಾರಸು ಮಾಡಿದೆ.
ನ್ಯಾಯಾಧೀಶರನ್ನಾಗಿ ಪದೋನ್ನತಿ ನೀಡಲು ಕೊಲಿಜಿಯಂ ಶಿಫಾರಸು ಮಾಡಿದ ಪಟ್ಟಿ ನಿರ್ಣಯಗಳನ್ನು ಸುಪ್ರೀಂ ಕೋರ್ಟ್ ತನ್ನ ವೆಬ್ಸೈಟ್ನಲ್ಲಿ ಹಂಚಿಕೊಂಡಿದೆ. ಮಂಗಳವಾರ ನಡೆದ ಕೊಲಿಜಿಯಂ ಸಭೆಯಲ್ಲಿ ಕರ್ನಾಟಕ, ಬಾಂಬೆ, ಆಂಧ್ರಪ್ರದೇಶ, ಮಣಿಪುರಗಳ ಹೈ ಕೋರ್ಟ್ಗಳಿಗೆ ನ್ಯಾಯಾಧೀಶರ ನೇಮಕದ ಪ್ರಸ್ತಾವವನ್ನು ಅನುಮೋದಿಸಿತು. ಕರ್ನಾಟಕ ಹೈ ಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಲು ಸೂಚಿಸಿ ಕೊಲಿಜಿಯಂ ಈ ಹಿಂದೆ ಸೂಚಿಸಿದ್ದ ಹಿರಿಯ ವಕೀಲರಾದ ನಾಗೇಂದ್ರ ರಾಮಚಂದ್ರ ನಾಯ್ಕ್ ಅವರನ್ನು ಮತ್ತೊಮ್ಮೆ ಶಿಫಾರಸು ಮಾಡಿದೆ. ಇದಲ್ಲದೇ, ನ್ಯಾಯಾಂಗ ಅಧಿಕಾರಿಗಳಾದ ರಾಮಚಂದ್ರ ದತ್ತಾತ್ರೇ ಹುದ್ದಾರ್ ಮತ್ತು ವೆಂಕಟೇಶ್ ನಾಯ್ಕ್ ಥಾವರ್ಯನಾಯ್ಕ್ ಅವರನ್ನು ನ್ಯಾಯಾಧೀಶರನ್ನಾಗಿ ಮಾಡುವ ಪ್ರಸ್ತಾವ ಸಲ್ಲಿಸಿದೆ.
ಬಾಂಬೆ ಹೈ ಕೋರ್ಟ್ಗೆ ವಕೀಲೆ ನೀಲಾ ಕೇದಾರ್ ಗೋಖಲೆ, ಗುವಾಹಟಿ ಹೈ ಕೋರ್ಟ್ಗೆ ನ್ಯಾಯಾಂಗ ಅಧಿಕಾರಿಯಾದ ಮೃದುಲ್ ಕುಮಾರ್ ಕಲಿತಾ, ಆಂಧ್ರಪ್ರದೇಶಕ್ಕೆ ನ್ಯಾಯಾಂಗ ಅಧಿಕಾರಿಗಳಾದ ಪಿ. ವೆಂಕಟ ಜ್ಯೋತಿರ್ಮಾಯಿ ಮತ್ತು ವಿ.ಗೋಪಾಲಕೃಷ್ಣ ರಾವ್, ಮಣಿಪುರ ಹೈ ಕೋರ್ಟ್ಗೆ ನ್ಯಾಯಾಂಗ ಅಧಿಕಾರಿಗಳಾದ ಅರಿಬಮ್ ಗುಣೇಶ್ವರ್ ಶರ್ಮಾ ಮತ್ತು ಗೊಲ್ಮೆಯ್ ಗೈಫುಲ್ಶಿಲ್ಲು ಕಬುಯಿ ಅವರನ್ನು ನ್ಯಾಯಾಧೀಶರನ್ನಾಗಿ ಬಡ್ತಿ ನೀಡಲು ಕೊಲಿಜಿಯಂ ಒಪ್ಪಿದೆ.
ಸುಪ್ರೀಂ-ಕೇಂದ್ರದ ಮಧ್ಯೆ ಗುದ್ದಾಟ:ನ್ಯಾಯಾಧೀಶರ ಬಡ್ತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂ ಮಧ್ಯೆ ನಿರಂತರವಾಗಿ ಗುದ್ದಾಟ ನಡೆಯುತ್ತಲೇ ಇದೆ. ನ್ಯಾಯಾಧೀಶರ ನೇಮಕ ಕುರಿತು ಸಲ್ಲಿಸಲಾದ 21 ಪ್ರಸ್ತಾಪಗಳಲ್ಲಿ ಕೇಂದ್ರ ಸರ್ಕಾರ 11 ಕ್ಕೆ ಮಾತ್ರ ಒಪ್ಪಿಗೆ ನೀಡಿದೆ. ಹೀಗಾಗಿ ಜಡ್ಜ್ಗಳ ನೇಮಕಾತಿ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಕೊಲಿಜಿಯಂ ಆರೋಪಿಸಿತ್ತು. ಇದನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ.