ಬಹ್ರೈಚ್ (ಉತ್ತರ ಪ್ರದೇಶ): ಇತ್ತೀಚೆಗೆ ಮೊದಲ ರಾತ್ರಿಯ ಕೋಣೆಯಲ್ಲಿ ಶವವಾಗಿ ಪತ್ತೆಯಾದ ನವವಿವಾಹಿತ ದಂಪತಿಗಳ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಗೊಂಡಿದೆ. ಅವರಿಬ್ಬರ ಸಾವಿಗೆ ಹೃದಯಾಘಾತವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಯನ್ನು ಪ್ರತಾಪ್ ಯಾದವ್ (24) ಮತ್ತು ಪುಷ್ಪಾ ಯಾದವ್ (22) ಎಂದು ಗುರುತಿಸಲಾಗಿದೆ.
ಮೇ 30ರಂದು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ದುರಂತವೊಂದು ಸಂಭವಿಸಿತ್ತು. ಕೈಸರ್ಗಂಜ್ ಪ್ರದೇಶದಲ್ಲಿ ಮೊದಲ ರಾತ್ರಿಯಂದೇ ನವದಂಪತಿ ಮೊದಲ ರಾತ್ರಿಯ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆದರೆ, ಇವರಿಬ್ಬರ ಸಾವಿಗೆ ಕಾರಣ ನಿಗೂಢವಾಗಿತ್ತು.
ಮೇ 30ರಂದು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಮೇ 31ರಂದು ಮೊದಲ ರಾತ್ರಿ ಆಚರಣೆಗೆ ಎಂದು ಮನೆಯ ಕೊಠಡಿ ಸೇರಿದ್ದರು. ಮತ್ತೊಂದೆಡೆ, ಸಂಬಂಧಿಕರೆಲ್ಲ ಊಟ ಮಾಡಿ ನಿದ್ದೆಗೆ ಜಾರಿದ್ದರು. ಬೆಳಗಾದರೂ ನವ ದಂಪತಿ ಕೊಠಡಿಯ ಬಾಗಿಲು ತೆರೆದಿಲ್ಲ. ಬಾಗಿಲು ಬಡಿದಾಡಿದರೂ ಯಾವುದೇ ಸದ್ದು ಕೇಳಿ ಬಂದಿಲ್ಲ. ಇದಾದ ಬಳಿಕ ಮನೆಯವರು ಕಿಟಕಿ ಮೂಲಕ ನೋಡಿದಾಗ ಇಬ್ಬರ ಹಾಸಿಗೆಯ ಮೇಲೆ ಬಿದ್ದಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಕಮಲೇಶ್ ಸಿಂಗ್ ತಿಳಿಸಿದ್ದರು.
ಇದರಿಂದ ಆತಂಕದಲ್ಲೇ ಬಾಗಿಲು ಒಡೆದು ಕೊಠಡಿ ಒಳಗೆ ಕುಟುಂಬಸ್ಥರು ಹೋಗಿ ಪರಿಶೀಲನೆ ನಡೆಸಿದಾಗ ಹೊಸ ಜೋಡಿ ಪ್ರತಾಪ್ ಮತ್ತು ಪುಷ್ಪಾ ಇಬ್ಬರ ಉಸಿರು ನಿಂತಿರುವುದು ಪತ್ತೆಯಾಗಿದೆ. ಇದರ ಮಾಹಿತಿ ಪಡೆದ ವಧುವಿನ ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿದ್ದರು. ನಂತರ ಕುಟುಂಬಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆಗ ಪ್ರಭಾರಿ ಇನ್ಸ್ಪೆಕ್ಟರ್ ರಾಜನಾಥ್ ಸಿಂಗ್ ಮತ್ತು ಪೊಲೀಸ್ ಅಧಿಕಾರಿ ಕಮಲೇಶ್ ಸಿಂಗ್ ಗ್ರಾಮಕ್ಕೆ ಆಗಮಿಸಿ ಪರಿಶೀಲಿಸಿದ್ದರು. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು.