ನವದೆಹಲಿ:ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಲೋಕಸಭೆಯಲ್ಲಿ ವಿಪಕ್ಷ ಸದಸ್ಯರ ಗದ್ದಲದ ನಡುವೆ ಈ ಮಸೂದೆ ಅನುಮೋದನೆಯಾಗಿದ್ದು, ಇದರ ಬೆನ್ನಲ್ಲೇ ರಾಜ್ಯಸಭೆಯಲ್ಲೂ ಬಿಲ್ ಪಾಸ್ ಆಯಿತು.
ಈ ವಿಚಾರವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾತನಾಡಿದ್ದು, ಕೇಂದ್ರ ಸರ್ಕಾರ ಕೃಷಿ ಕಾನೂನು ಹಿಂಪಡೆದುಕೊಳ್ಳಲಿದೆ ಎಂದು ಈ ಹಿಂದೆ ನಾನು ಹೇಳಿದ್ದೆ. ಇಂದು ಕಾನೂನುಗಳು ರದ್ದುಗೊಂಡಿವೆ. ಚರ್ಚೆಯಿಲ್ಲದೆ ಕೃಷಿ ಕಾನೂನು ರದ್ದುಗೊಳಿಸಿರುವುದು ದುರದೃಷ್ಟಕರ. ಇವುಗಳ ಮೇಲೆ ಚರ್ಚೆ ನಡೆಸಲು ಸರ್ಕಾರ ಹೆದರುತ್ತಿದೆ ಎಂದರು.
ಕೃಷಿ ಕಾನೂನು ರದ್ದತಿ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ಮೂರು ಕೃಷಿ ಕಾನೂನುಗಳನ್ನು ಸರ್ಕಾರ ಹಿಂಪಡೆದುಕೊಳ್ಳಲಿದೆ ಎಂದು ನಮಗೆ ಗೊತ್ತಿತ್ತು. 3-4 ಬಂಡವಾಳಶಾಹಿ ಶಕ್ತಿ ಭಾರತದ ಮುಂದೆ ನಿಲ್ಲಲಾರದು ಎಂಬುದಕ್ಕೆ ಇದು ಜ್ವಲಂತ ಉದಾಹರಣೆ. ಕೃಷಿ ಕಾನೂನು ರದ್ದಾಗಿರುವುದು ರೈತರಿಗೆ ಸಿಕ್ಕಿರುವ ಯಶಸ್ಸು ಎಂದರು.
ಇದನ್ನೂ ಓದಿ:ತೆಲಂಗಾಣ: ವಸತಿ ಶಾಲೆಯ 42 ವಿದ್ಯಾರ್ಥಿನಿಯರು, ಓರ್ವ ಶಿಕ್ಷಕನಿಗೆ ಕೋವಿಡ್ ಸೋಂಕು
ಕೇಂದ್ರ ಸರ್ಕಾರ ಯಾವುದೇ ರೀತಿಯ ಚರ್ಚೆ ಇಲ್ಲದೇ ಇವುಗಳನ್ನು ರದ್ದುಪಡಿಸಿದೆ. ಇವುಗಳ ಮೇಲಿನ ಚರ್ಚೆಗೆ ಸರ್ಕಾರ ಹೆದರುತ್ತಿದೆ ಎಂಬುದು ಇದರಿಂದ ಎದ್ದು ಕಾಣುತ್ತಿದೆ. ತಾವು ತಪ್ಪು ಮಾಡಿದ್ದೇವೆ ಎಂಬುದು ಅವರಿಗೆ ಗೊತ್ತಿರುವ ಕಾರಣ, ಇದೀಗ ಚರ್ಚೆಗೆ ಭಯಪಡುತ್ತಿದ್ದಾರೆ ಎಂದು ಆರೋಪಿಸಿದರು.
ರದ್ದುಗೊಂಡಿರುವ ಕಾನೂನುಗಳ ಮೇಲೆ ಚರ್ಚೆ ಅಗತ್ಯವಿಲ್ಲದಿದ್ದರೆ ಸಂಸತ್ತಿನ ಅಗತ್ಯವೇನು? ಎಂದು ಪ್ರಶ್ನೆ ಮಾಡಿರುವ ರಾಹುಲ್ ಗಾಂಧಿ, ಕೃಷಿ ಕಾನೂನು ರದ್ದುಗೊಳಿಸಿರುವ ಮೋದಿ ಈಗಾಗಲೇ ಕ್ಷಮೆಯಾಚನೆ ಮಾಡಿದ್ದಾರೆ. ಈ ಕಾನೂನುಗಳ ರದ್ದತಿ ಹೋರಾಟದ ವೇಳೆ 700 ರೈತರು ಸಾವನ್ನಪ್ಪಿದ್ದಾರೆ. ಅವರಿಗೆ ಪರಿಹಾರ ನೀಡುವುದು ಯಾರು? ಎಂದು ಪ್ರಶ್ನೆ ಮಾಡಿದರು.
ಇದೇ ವೇಳೆ ಮಾತನಾಡಿರುವ ಮಲ್ಲಿಕಾರ್ಜುನ್ ಖರ್ಗೆ, ಮೂರು ಕೃಷಿ ಕಾನೂನು ರದ್ಧುಗೊಳಿಸಿರುವ ಮಸೂದೆ ಅಂಗೀಕಾರಗೊಂಡಿರುವುದು ಸ್ವಾಗತಾರ್ಹ. ಆದರೆ ಇವುಗಳ ಮೇಲೆ ಚರ್ಚೆ ನಡೆಸುವ ಅಗತ್ಯವಿದೆ. ಕೃಷಿ ಕಾನೂನುಗಳ ರದ್ಧತಿ ಮಸೂದೆ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಹೇಳಿರುವುದು ಮಾತ್ರ ತಪ್ಪು ಎಂದಿದ್ದಾರೆ. ಇವುಗಳ ಮೇಲೆ ಚರ್ಚೆ ನಡೆಯಬೇಕು ಎಂದು ನಾನು ಬಯಸುತ್ತೇವೆ. ಆದರೆ ಲೋಕಸಭೆಯಲ್ಲಿ ತರಾತುರಿಯಲ್ಲಿ ಅಂಗೀಕಾರ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ತಮ್ಮ ಸರ್ಕಾರ ರೈತರ ಪರವಾಗಿದೆ ಎಂದು ಸಾಬೀತುಪಡಿಸಲು ಈ ರೀತಿಯಾಗಿ ನಡೆದುಕೊಂಡಿದೆ ಎಂದಿದ್ದಾರೆ.