ರಾಯಚೂರು: ಕಲಿಯುಗದ ಕಾಮಧೇನು ಪ್ರಸಿದ್ಧಿಯ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ಮಧ್ಯಾರಾಧನಾ ಮಹೋತ್ಸವ ವೈಭವದಿಂದ ನಡೆಯಿತು. ರಾಯರ 353ನೇ ಆರಾಧನಾ ಮಹೋತ್ಸವದ ನಾಲ್ಕನೇ ದಿನವಾದ ಇಂದು ಬೆಳಗ್ಗೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ಜರುಗಿದವು.
ರಾಯರ ಮೂಲ ಬೃಂದಾವನದಲ್ಲಿ ಶ್ರೀ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ವಿಶೇಷ ಅಭಿಷೇಕ ನೆರವೇರಿಸಿದರು. ಹಣ್ಣು-ಹಂಪಲು, ಹಾಲು, ಮೊಸರು, ತುಪ್ಪ, ಜೇನು ತುಪ್ಪ ಹಾಗು ಒಣಗಿದ ಹಣ್ಣುಗಳ ಅಭಿಷೇಕ ಮಾಡಿದರು.
ಇದಕ್ಕೂ ಮುನ್ನ ಮಠದ ಪ್ರಾಕಾರದಲ್ಲಿ ಪಲ್ಲಕ್ಕಿ ಉತ್ಸವ, ಸ್ವರ್ಣ ರಥೋತ್ಸವ ವಿವಿಧ ವಾದ್ಯ ಮೇಳಗಳು ಹಾಗೂ ಭಕ್ತರ ಝೇಂಕಾರ ನಡುವೆ ಅದ್ಧೂರಿಯಾಗಿ ನಡೆಯಿತು.
ಆರಾಧನಾ ಮಹೋತ್ಸವ ಕಣ್ತುಂಬಿಕೊಳ್ಳಲು ದೇಶ ಹಾಗೂ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು.
ಸಂಜೆ ಮಠದ ಮುಂಭಾಗ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.