ರಾಯಚೂರು: ಹಂದಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಬಂಧಿಸಿರುವ ಇಡಪನೂರು ಪೊಲೀಸರು, ಲಕ್ಷಾಂತರ ರೂ. ನಗದು ಜಪ್ತಿ ಮಾಡಿದ್ದಾರೆ. ಆಂಧ್ರದ ಮಂತ್ರಾಲಯ ಮಂಡಲದ ಕಲ್ಲದೇವರ ಕುಂಟ ಗ್ರಾಮದ ಎರಕಲ್ ದೇವೇಂದ್ರ, ಎಮ್ಮಿಗನೂರಿ ಎರಕಲ್ ಶ್ರೀನಿವಾಸ, ನಂದಾವರಂ ಮಂಡಲದ ನಾಸಾರಂ ನಾಗರಾಜ ಬಂಧಿತ ಅಂತಾರಾಜ್ಯ ಕಳ್ಳರು.
ಹಂದಿಗಳನ್ನು ಕದ್ದು ಮಾರಾಟ ಮಾಡಿದ್ದರಿಂದ ಬಂದ 2 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ವಾಹನ ಸೇರಿದಂತೆ ಒಟ್ಟು 3 ಲಕ್ಷ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ರಾಯಚೂರಿನ ತಲೆಮಾರಿ ಗ್ರಾಮದಲ್ಲಿ 25 ಹಂದಿಗಳು ಹಾಗೂ ಗಿಲ್ಲೆಸೂಗೂರು ಕ್ಯಾಂಪಿನಲ್ಲಿ 28 ಹಂದಿಗಳು ಕಳ್ಳತನವಾಗಿರುವ ಬಗ್ಗೆ ಇಡಪನೂರು ಹಾಗೂ ಯರಗೇರಾ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಇಡಪನೂರು ಠಾಣೆಯಲ್ಲಿ 3 ಮತ್ತು ಯರಗೇರಾ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿತ್ತು. ಯರಗೇರಾ ಠಾಣೆ ಸಿಪಿಐ ನಿಂಗಪ್ಪ ಎನ್.ಆರ್. ನೇತೃತ್ವದಲ್ಲಿ ಕಳ್ಳರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು.
ಪ್ರಕರಣ ಭೇದಿಸಿದ ತಂಡಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.